ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಾಣ ಆರೋಪ; ತಾರಾಲಯ ಕಾಮಗಾರಿ ಬಗ್ಗೆ ಸಚಿವ ಬೋಸರಾಜು ಏನಂತಾರೆ?

ಬಿಸಿಲ ನಗರಿಯಲ್ಲಿ ಪ್ಲಾನೆಟೇರಿಯಂ ಕಟ್ಟಡ ನಿರ್ಮಾಣವಾಗಿ 2 ವರ್ಷ ಕಳೆದರೂ ಸಹ ಬಳಕೆ ಆಗ್ತಿಲ್ಲ.

By ETV Bharat Karnataka Team

Published : Dec 18, 2023, 7:39 AM IST

Updated : Dec 18, 2023, 8:51 AM IST

planetarium
ತಾರಾಲಯ

ಸಚಿವ ಬೋಸರಾಜು ಹೇಳಿಕೆ

ರಾಯಚೂರು:ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸಿ ಯಾವುದೇ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಂಡ ನಂತರದಲ್ಲಿ ಯೋಜನೆ ಉದ್ದೇಶ ಈಡೇರಬೇಕು. ಆದರೆ ರಾಯಚೂರಲ್ಲಿ ಅನುದಾನದಲ್ಲಿ ತಾರಾಲಯ ನಿರ್ಮಾಣವಾದರೂ ಅದರ ಉದ್ದೇಶ ಪೂರ್ಣವಾಗಿಲ್ಲ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಿಸಿಲೂರು ರಾಯಚೂರು ಜಿಲ್ಲೆ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದ ಯುವ ಸಮೂಹ, ವಿದ್ಯಾರ್ಥಿಗಳ ಸಾರ್ವಜನಿಕರ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಾಗೂ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್ ಡಿಬಿ) ಲಕ್ಷಾಂತರ ರೂಪಾಯಿ ಅನುದಾನವನ್ನು ನೀಡುವ ಮೂಲಕ ಪ್ಲಾನೆಟೇರಿಯಂ (ತಾರಾಲಯ) ನಿರ್ಮಾಣ ಮಾಡಲಾಗಿದೆ. ಆದರೆ ಯೋಜನೆ ಉದ್ದೇಶದಂತೆ ನಿರ್ಮಾಣ ಮಾಡದ ಪರಿಣಾಮ ಯಾವುದೇ ಕೆಲಸಕ್ಕೆ ಬರದಂತೆ ಆಗಿದೆ.

ನಗರದ ಹೊರವಲಯದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 2016ರಲ್ಲಿ ಕೆಕೆಆರ್‌ಡಿಬಿಯ 55.80 ಲಕ್ಷ ರೂ. ವೆಚ್ಚದಲ್ಲಿ ತಾರಾಲಯ ಕಟ್ಟಡ ಆರಂಭಿಸಿ 2021 ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಇದನ್ನು ಸಾಮಾನ್ಯ ಕಟ್ಟಡಗಳು, ಶಾಲಾ, ಅಂಗನವಾಡಿ ಕಟ್ಟಡ ನಿರ್ಮಿಸಿದ ಅನುಭವವುಳ್ಳ ಖಾಸಗಿ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಮಾಹಿತಿ ಕೊರತೆಯಿಂದ ತಾರಾಲಯ ನಿರ್ಮಾಣದ ವೇಳೆ ನಿಯಮಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಟ್ಟಡ ಕಳೆದ ಎರಡು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಅರೆಬರೆ ಕಾಮಗಾರಿ ಮಾಡಿರುವುದರಿಂದ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ.

ತಾರಾಲಯ ಎನ್ನುವುದು ಒಂದು ಹೊಸಲೋಕದ ಅನುಭವನ್ನು ನೀಡಬೇಕು. ಹೊರಗಿನಿಂದ ಒಳ ಹೋಗುತ್ತಿದ್ದಂತೆ ಹಂತ ಹಂತವಾಗಿ ಕತ್ತಲಾವರಿಸುವಂತಿರಬೇಕು. ಒಳಗಡೆ ಗಾಢಾಂಧಕಾರದಲ್ಲಿ ಮಕ್ಕಳು ಸೌರವ್ಯೂಹದ ಚಿತ್ರಣ ಕಣ್ತುಂಬಿಕೊಳ್ಳುವಂತಿರಬೇಕು. ಆದರೆ, ಇಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಆ ರೀತಿಯ ಅನುಭವ ಕಾಣಸಿಗುವುದಿಲ್ಲ. ಜೊತೆಗೆ ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲವೆಂದು ಅಲ್ಲಿನ ಸಿಬ್ಬಂದಿಗಳು ಸಹ ಹೇಳುತ್ತಿದ್ದಾರೆ.

ರಾಜ್ಯದ ನಾನಾಕಡೆ ನಿರ್ಮಿಸಿರುವ ಮಾಡಿರುವ ತಾರಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಮಾತ್ರ ಹಳೆ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಯಾಕೆಂದರೆ ಒಳಗಡೆ ಆಸನಗಳಲ್ಲಿ ಕುಳಿತಾಗ ಒರಗಿ ಕೂರಲು ಅನುಕೂಲವಾಗುವ ರೀತಿ ಇರಬೇಕು. ಅದಕ್ಕೆ ಬೇಕಾದ ಮಾದರಿಯಡಿ ಕಟ್ಟಡ ನಿರ್ಮಿಣ ಮಾಡಿಲ್ಲ. ಇದೀಗ ಪ್ಲಾನೆಟೇರಿಯಂ ರೂಪಕ್ಕೆ ತರಬೇಕಾದರೆ ಇನ್ನಷ್ಟು ಅನುದಾನವನ್ನು ನೀಡುವ ಮೂಲಕ ಕಟ್ಟಡವನ್ನು ಸರಿ ಮಾಡಬೇಕಾಗುತ್ತದೆ.

ಮೂಲಗಳ ಪ್ರಕಾರ ಇದಕ್ಕೆ ಇನ್ನೂ ಎರಡರಿಂದ ಎರಡೂವರೆ ಕೋಟಿ ರೂಪಾಯಿ ಹಣ ಬೇಕು. ಈಗಿರುವ ರೂಫ್​ ಮೇಲೆ ಏರ್ ಪ್ರೂಫ್ ಹಾಗೂ ಫೈರ್ ಪ್ರೂಫ್ ಸೇರಿದಂತೆ ಆತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಬೇಕು. ಅಂದಾಗ ಮಾತ್ರ ಇದಕ್ಕೆ ಒಂದು ರೂಪ ಬರಲಿದ್ದು ಬಳಕೆ ಮಾಡಬಹುದಾಗಿದೆ. ಇಲ್ಲದಿದ್ದರೆ ಕಟ್ಟಡ ನಿರುಪಯುಕ್ತವಾಗಿ ಬೀಳಲಿದೆ ಎಂಬ ಮಾತು ಕೇಳಿ ಬರುತ್ತಿವೆ.

ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರ ಬಳಿ ಕೇಳಿದಾಗ, 'ನಾನು ಈ ಇಲಾಖೆ ಸಚಿವನಾಗುವ ಮುನ್ನ ಕಾಮಗಾರಿ ಮಾಡಲಾಗಿದೆ. ಇದರ ಬಗ್ಗೆ ಗಮನ ಇದೆ. ಇದೇ ಆವರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೃಹತ್ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುತ್ತಿದೆ. ತಜ್ಞರ ತಂಡ ಭೇಟಿ ನೀಡಿ ಹೋಗಿದೆ. ಹೀಗಾಗಿ ಈಗಿರುವ ಪ್ಲಾನೆಟೇರಿಯಂ ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಕುರಿತು ಚರ್ಚೆ ನಡೆಸುವುದರೊಂದಿಗೆ, ಅದರ ಬಗ್ಗೆ ವರದಿಯನ್ನು ಕೇಳಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ' ತಿಳಿಸಿದ್ದಾರೆ.

ಇದನ್ನೂ ಓದಿ:ರಾಯಚೂರು: ನೀರು ಪೂರೈಸುವಂತೆ ಒತ್ತಾಯಿಸಿ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

Last Updated : Dec 18, 2023, 8:51 AM IST

ABOUT THE AUTHOR

...view details