ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ಕುರುಬರ ಪರಿಶಿಷ್ಟ ಪಂಗಡ ಸೇರ್ಪಡೆ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಬಲವಿದೆ ಎಂದು ಕುರುಬರ ಜಿಲ್ಲಾ ಘಟಕ ಅಧ್ಯಕ್ಷ ಕೆ. ಬಸವಂತಪ್ಪ ಹೇಳಿದರು.
ಕುರುಬ ಎಸ್ಟಿ ಮೀಸಲಾತಿ ಹೋರಾಟಕ್ಕೆ ಸಿದ್ಧರಾಮಯ್ಯ ಬೆಂಬಲವಿದೆ: ಕೆ.ಬಸವಂತಪ್ಪ
ಜನವರಿ 15ರಿಂದ ಎಸ್ಟಿ ಮೀಸಲಾತಿಗಾಗಿ ಕನಕಗುರು ಪೀಠದ ಗುರುಗಳ ಸಾನಿಧ್ಯದಲ್ಲಿ ಬೆಂಗಳೂರುವರೆಗೆ ಪಾದಯಾತ್ರೆ ಆರಂಭಿಸುತ್ತೇವೆ. ಫೆಬ್ರವರಿ 7ಕ್ಕೆ ರಾಜ್ಯಮಟ್ಟದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ ಎಂದು ರಾಯಚೂರು ಕುರುಬರ ಜಿಲ್ಲಾ ಘಟಕ ಅಧ್ಯಕ್ಷ ಕೆ. ಬಸವಂತಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಸ್ಟಿ ಮೀಸಲು ಹೋರಾಟ ಆರಂಭಕ್ಕೆ ಮುಂಚೆ ಸಿದ್ಧಾರಮಯ್ಯರನ್ನು ಖುದ್ದು ಭೇಟಿ ಮಾಡಿದ ನಿಯೋಗದಲ್ಲಿ ನಾನೂ ಇದ್ದೆ. ರಾಜಕೀಯ ಹಿತದೃಷ್ಟಿಯಿಂದ ಪರೋಕ್ಷವಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಅದಕ್ಕೂ ಮುಂಚಿತವಾಗಿ ಜ.4ರಂದು ಸಿಂಧನೂರಿನಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ.
ನಾವು ಯಾವುದೇ ಕೋಮಿನ ವಿರುದ್ಧ ಹೋರಾಟ ಮಾಡುತ್ತಿಲ್ಲ. ಗುಡ್ಡಗಾಡುಗಳಲ್ಲಿ ಶತಮಾನದಿಂದ ಸಂಕಷ್ಟದ ಬದುಕು ಕಟ್ಟಿಕೊಂಡು ಬಂದ ನಮ್ಮವರ ಹಕ್ಕು ರಕ್ಷಣೆಯ ಗುರಿ ಹೊಂದಿದ್ದೇವೆ. ಕಾರಣ ರಾಜ್ಯದ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.