ರಾಯಚೂರು:ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಈ ಹಿಂದೆ ಇದ್ದ ದಂಡ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಇದರಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ ವಸೂಲಿ ಮಾಡಿದ ಶುಲ್ಕಕ್ಕಿಂತ ಭಾರಿ ಏರಿಕೆ ಕಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಕಳೆದ ತಿಂಗಳಾಂತ್ಯದಲ್ಲಿ ಜಾರಿಗೆ ತಂದ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಿಂದ ದಂಡ ಶುಲ್ಕ ಹೆಚ್ಚಳವಾಗಿದ್ದರಿಂದ ಇಲಾಖೆಯಿಂದ ಭಾರಿ ವಸೂಲಿ ಮಾಡಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಹೆಲ್ಮೆಟ್ ಹಾಕದೆ ವಾಹನ ಚಾಲನೆ, ವೇಗ ಚಾಲನೆ, ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ವಾಹನ ಚಾಲನೆ, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಣೆ, ಶಾಲಾ ಮಕ್ಕಳ ಆಟೋ, ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳ ಸಾಗಣೆ ಸೇರಿದಂತೆ ಇತರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಒಟ್ಟು ಜುಲೈ ತಿಂಗಳಲ್ಲಿ 11,950 ಪ್ರಕರಣ ದಾಖಲಾಗಿವೆ. ಸುಮಾರು 20 ಲಕ್ಷದ 93 ಸಾವಿರ 400 ರೂ. ದಂಡ ವಸೂಲಿ ಮಾಡಿ ಸರ್ಕಾರದ ಖಜಾನೆ ತುಂಬಿಸಲಾಗಿದೆ.
ಅಲ್ಲದೇ ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ ಮಾಡಿದ ಬಗ್ಗೆ ಜುಲೈ ತಿಂಗಳಲ್ಲಿ 73 ಪ್ರಕರಣ ದಾಖಲು ಮಾಡಲಾಗಿದೆ. ಅದೇ ರೀತಿ ಪ್ರಯಾಣಿಕರನ್ನು ಟಾಪ್ ಮೇಲೆ ಕೂರಿಸಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರ ಸಾಗಣೆಗೆ ಹೊಸ ತಿದ್ದುಪಡಿ ಕಾಯ್ದೆಯಡಿ ಭಾರಿ ದಂಡ ಶುಲ್ಕ ವಿಧಿಸಿ ರೂಲ್ಸ್ ಬ್ರೇಕ್ ಮಾಡಿದವರಿಗೆ ಡಿಎಲ್,ಆರ್ಸಿ ರದ್ದು ಮಾಡಿ ಶಾಕ್ ನೀಡಲಾಗಿದೆ.