ಕರ್ನಾಟಕ

karnataka

ಲಾಕ್​ಡೌನ್​ ಎಫೆಕ್ಟ್​: ಸಂಕಷ್ಟದಲ್ಲಿ ಎಪಿಎಂಸಿ ಹಮಾಲರ ಬದುಕು

By

Published : May 26, 2021, 8:46 AM IST

ಲಾಕ್​​ಡೌನ್​​​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಹಮಾಲರು ಮನವಿ ಮಾಡಿದ್ದಾರೆ.

Raichur
ರಾಯಚೂರು

ರಾಯಚೂರು: ಮಹಾಮಾರಿ ಕೊರೊನಾ ನಿತ್ಯ ದುಡಿದು ಜೀವನ ಸಾಗಿಸುವ ವರ್ಗವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿತ್ಯ ಕೂಲಿ ಕೆಲಸ ಮಾಡಿ ಬರುವ ಆದಾಯದಿಂದ ಜೀವನ ನಡೆಸುವ ಹಮಾಲರಿಗೆ ಲಾಕ್​​ಡೌನ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ದುಡಿಮೆಯಿಲ್ಲದೆ ಕುಟುಂಬ ನಿರ್ವಹಣೆ ದೊಡ್ಡ ಸವಾಲಾಗಿದೆ.

ಕೊರೊನಾ ಲಾಕ್​ಡೌನ್​: ಸಂಕಷ್ಟದಲ್ಲಿ ಹಮಾಲರು

ಕೊರೊನಾ ಸೋಂಕು ನಿಗ್ರಹಕ್ಕೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಅಂಗಡಿ ಮುಂಗಟ್ಟು ಸೇರಿದಂತೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ವ್ಯಾಪಾರವನ್ನ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ದಿನನಿತ್ಯ ಕೂಲಿ ಕೆಲಸ ಮಾಡಿ, ಕೂಲಿಯಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುವ ಹಮಾಲರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದ ಎಪಿಎಂಸಿಲ್ಲಿ ನೂರಾರು ವರ್ತಕರ ಅಂಗಡಿಗಳಿದ್ದು, ಸಾವಿರಾರು ಹಮಾಲರು ನಿತ್ಯ ಕೂಲಿ ಮಾಡುತ್ತಾರೆ. ಆದ್ರೆ ವರ್ತಕರ ಅಂಗಡಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ವಾಹನಗಳು ಒಳಗಡೆ ಪ್ರವೇಶ ಮಾಡದಂತೆ ಎಪಿಎಂಸಿ ಗೇಟ್​​ಗಳನ್ನ ಕ್ಲೋಸ್​ ಮಾಡಲಾಗಿದೆ. ಈ ಮೊದಲು ಮಾರುಕಟ್ಟೆಗೆ ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ಮಾರಾಟಕ್ಕೆ ತರಲಾಗುತ್ತಿತ್ತು. ವ್ಯಾಪಾರ-ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಇದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆತು, ಕೈ ತುಂಬಾ ಬರುತ್ತಿದ್ದ ಕೂಲಿ ಹಣದಿಂದ ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತಿರಲಿಲ್ಲ.

ಆದ್ರೆ ಇದೀಗ ಲಾಕ್​ಡೌನ್​​ ಪರಿಣಾಮ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ. ನಮ್ಮ ಸಹಾಯಕ್ಕೆ ಯಾರೂ ಬಂದಿಲ್ಲ. ಕೆಲಸವಿಲ್ಲದೆ ಎಪಿಎಂಸಿಯಲ್ಲಿ ಚೌಕಬಾರ ಆಡಿ ಸಮಯ ಕಳೆಯುತ್ತಿದ್ದೇವೆ. ನಮಗೆ ಯಾರಾದರೂ ಸಹಾಯ ಮಾಡಿ ಎಂದು ಎಪಿಎಂಸಿಯ ಹಮಾಲರು ಮನವಿ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆ ಪರಿಣಾಮ ಎಪಿಎಂಸಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಹಮಾಲರ ಬದುಕು ದುಸ್ತರವಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎನ್ನುವುದು ಎಪಿಎಂಸಿ ಹಮಾಲರ ಒತ್ತಾಯವಾಗಿದೆ.

ABOUT THE AUTHOR

...view details