ರಾಯಚೂರು:ಜಿಲ್ಲೆಯಲ್ಲಿ ವಿವಿಧ ರಾಜ್ಯಗಳ ನೂರಾರು ಮಂದಿ ವಲಸೆ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಇವರನ್ನು ಜಿಲ್ಲಾಡಳಿತ ಗುರ್ತಿಸಿ ಏಳು ತಾಲೂಕುಗಳಲ್ಲಿ ಕೋವಿಡ್-19 ರಿಲೀಫ್ ಕೇಂದ್ರಗಳನ್ನು ಆರಂಭಿಸಿ ಅವುಗಳಲ್ಲಿ ಇಡಲಾಗಿದೆ. ಜಿಲ್ಲೆಯ ಮಾನವಿ, ಸಿಂಧನೂರು, ಮಸ್ಕಿ, ಲಿಂಗಸೂಗೂರು, ದೇವದುರ್ಗ, ಸಿರವಾರ, ರಾಯಚೂರು ನಗರ ಸೇರಿದಂತೆ ಹಲವೆಡೆಯಲ್ಲಿ 8 ಕೇಂದ್ರಗಳನ್ನ ಜಿಲ್ಲಾಡಳಿತ ಆರಂಭಿಸಿದೆ. ಒಂದು ಕೇಂದ್ರವನ್ನು ಸರ್ಕಾರೇತರ ಸಂಸ್ಥೆ ಆರಂಭಿಸಿದೆ. ಇವುಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ನಾನಾ ಕಡೆಗಳಿಂದ ಬಂದ ಬಂದ 210 ಜನರನ್ನು ಇರಿಸಲಾಗಿದೆ.
'ನಮಗಾದ್ರೆ ಊಟ ಸಿಗ್ತಿದೆ, ನಮ್ಮ ನಂಬಿದ ಕುಟುಂಬಗಳು ಸಂಕಷ್ಟದಲ್ಲಿವೆ, ನಮ್ಮನ್ನ ಊರಿಗೆ ಕಳುಹಿಸಿ..' - migrant workers in raichu
ಕೊರೊನಾ ವೈರಸ್ ಕಾರಣದಿಂದಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರ ಪರಿಣಾಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದವರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ರಾಯಚೂರಿನಲ್ಲೂ ಇದೇ ರೀತಿಯಾಗಿ ನೂರಾರು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ.
ವಲಸೆ ಕಾರ್ಮಿಕರು
ವಲಸೆ ಕಾರ್ಮಿಕರು ತಾವೇ ಅಡುಗೆ ಮಾಡಿಕೊಳ್ಳುವುದಾದರೆ ಅಡುಗೆ ಸಾಮಾನು ಪೂರೈಕೆ ಮಾಡಲಾಗುತ್ತದೆ. ಇಲ್ಲವಾದರೆ ಸಿದ್ಧಪಡಿಸಿದ ಆಹಾರವನ್ನು ನೀಡಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು 'ನಮಗಿಲ್ಲಿ ಮೂರು ಹೊತ್ತು ಊಟ ಸಿಗುತ್ತಿದ್ದು, ನಮ್ಮನ್ನು ನಂಬಿಕೊಂಡ ಕುಟುಂಬ ಸದಸ್ಯರು ಊಟಕ್ಕೆ ಪರದಾಡುವ ಪರಿಸ್ಥಿತಿಯಿದೆ. ಹೀಗಾಗಿ ನಮ್ಮನ್ನು ನಮ್ಮ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ವಲಸಿಗರ ಮನವಿಯಾಗಿದೆ.