ರಾಯಚೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟಿಸಲು ನ್ಯಾಯಾಲಯವು ಸಮ್ಮತಿಸಿದ ಹಿನ್ನೆಲೆ ಜಿಲ್ಲಾ ಸಹಾಯಕ ಆಯುಕ್ತರ ಸೂಚನೆ ಮೇರೆಗೆ ನಗರಸಭೆ ಅಧ್ಯಕ್ಷರಾಗಿ ಈ.ವಿನಯ್ ಕುಮಾರ್, ಉಪಾಧ್ಯಕ್ಷರಾಗಿ ನರಸಮ್ಮ ಮಾಡಗೇರಿ ಅಧಿಕಾರ ಸ್ವೀಕರಿಸಿದರು.
ರಾಯಚೂರು ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ ಅಧ್ಯಕ್ಷ, ಉಪಾಧ್ಯಕ್ಷರು ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿ ಚರ್ಚಿಸಿದ ನಂತರ ನಗರಸಭೆ ಕಾರ್ಯಾಲಯದಲ್ಲಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್, ಜಿಲ್ಲಾ ಸಹಾಯಕ ಆಯುಕ್ತರ ಸೂಚನೆ ಮೇರೆಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು, ನಗರದ ಪ್ರಥಮ ಪ್ರಜೆಯಾಗಿ ನಗರದ ಜ್ವಲಂತ ಸಮಸ್ಯೆಗಳಿಗೆ ಶಾಸ್ವತ ಪರಿಹಾರಕ್ಕೆ ನಗರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವೆ ಎಂದರು.
ಇದೇ ತಿಂಗಳು 2ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದರೂ ಚುನಾವಣೆ ಫಲಿತಾಂಶ ಪ್ರಕಟಿಸದಂತೆ ನ್ಯಾಯಾಲಯ ತಡೆ ನೀಡಿತ್ತು.