ಕರ್ನಾಟಕ

karnataka

ರಾಯಚೂರಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯ.. ಜನರ ಸಮಸ್ಯೆಗೆ ಡಿಸಿ ಸ್ಪಂದನೆ, ಶೀಘ್ರ ನೀರು ಪೂರೈಕೆಯ ಭರವಸೆ

By

Published : Jul 12, 2023, 1:14 PM IST

ರಾಯಚೂರನಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇಂದು ಈ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ

ನೀರು ಪೂರೈಕೆ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ

ರಾಯಚೂರು: ನಗರದ ವಿವಿಧ ಬಡವಣೆಗಳಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಚಿಕ್ಕಸೂಗೂರು ಗ್ರಾಮದ ಹತ್ತಿರ ವಾಹನವೊಂದು ನೀರು ಸರಬರಾಜು ಮೋಟಾರ್​ ಎಲೆಕ್ಟ್ರಾನಿಕ್ ಪೋಲ್​ಗೆ ಡಿಕ್ಕಿ ಹೊಡೆದಿದೆ. ರಾಂಪುರ ನೀರು ಶೇಖರಣೆ ಘಟಕದಲ್ಲಿ ನೀರು ಕಡಿಮೆ ಇದ್ದುದರಿಂದ ಚಿಕ್ಕಸೂಗೂರಿನಿಂದ ನೀರು ಪೂರೈಕೆ ಮಾಡಲಾಗಿತ್ತು. ಬಳಿಕ ನೀರು ಸರಬರಾಜು ಮೋಟಾರ್​ ಕೆಟ್ಟಿತ್ತು. ಹಾಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ಶನಿವಾರ ಮತ್ತು ಭಾನುವಾರ ಅದನ್ನು ಸರಿಪಡಿಸಲು ಆಗಿರಲಿಲ್ಲ. ಇದೀಗ ಹಾಳಾಗಿದ್ದ ಮೋಟಾರ್​ ಸರಿಪಡಿಸಲಾಗಿದೆ.

ಆದರೆ ಎಂಜಿನಿಯರ್ಸ್​ ಹೇಳುವ ಪ್ರಕಾರ, ಮೋಟಾರು ವೈಬ್ರೇಶನ್​ನಿಂದಾಗಿ ಟೆಕ್ನಿಕಲ್ ಸಮಸ್ಯೆ ಉಂಟಾಗಿದ್ದು, ಅದನ್ನು ಸರಿಪಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ವೈಬ್ರೆಷನ್​ನಿಂದ ನೀರು ಸರಬರಾಜು ಪೈಪ್​​ ಕ್ರ್ಯಾಕ್​ ಆಗುವ ಸಾಧ್ಯತೆ ಇದೆ. ಮೋಟಾರ್ ಸಂಪೂರ್ಣವಾಗಿ ಸರಿ ಹೋದಮೇಲೆ ನೀರು ಬಿಡುವುದು ಸೂಕ್ತ ಎಂದು ಹೇಳಿದ್ದಾರೆ. ಈಗಾಗಲೇ ಅರ್ಧ ಕಾರ್ಯ ಮುಗಿದಿದೆ. ಇಂದು ಈ ಸಮಸ್ಯೆ ಬಗೆಹರಿಸಿ, ನೀರು ಪೂರೈಕೆ ಮಾಡಲಾಗುವುದು ಡಿಸಿ ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರದಿಂದ ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶಗೊಂಡ ಬಡಾವಣೆ ನಿವಾಸಿಗಳು ಏಕಾಏಕಿ‌ ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು.

ನಗರದ ಹೈದರಾಬಾದ್ ರಸ್ತೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೀರು ಸರಬರಾಜು ಘಟಕದಲ್ಲಿನ ಐಪಿ ಪಂಪ್ ಸೆಟ್​​ಗಳು ಹಾಳಾಗಿವೆ ಎಂದು ನೆಪವೊಡ್ಡಿ ವಾರದಿಂದ ಕುಡಿಯುವ ನೀರು ಬಿಡದೆ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ತನ ತೋರಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್‌ಬಿಎಸ್ ನಗರ, ಗಂಜ್ ಏರಿಯಾ, ಮಡ್ಡಿಪೇಟ, ಸಿಯಾತಲಾಬ್, ಅಂದ್ರೂನ್ ಕಿಲ್ಲಾ, ಮಕ್ತಲ್‌ಪೇಟೆ, ಬೇಸ್ತ್ರವಾರ ಪೇಟೆ, ಲೋಹರ ವಾಡಿಗಳಲ್ಲಿ ನೀರು ಸರಬರಾಜು ಮಾಡಬೇಕು. ಆದರೆ ನೀರು ಪೂರೈಕೆಯಾಗಿಲ್ಲ. ಪರಿಣಾಮ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಪಿ ಪಂಪ್​ಸೆಟ್ ಕೆಲಸ ಮಾಡುವ ಮೇಸ್ತ್ರಿ ಹುಸೇನಪ್ಪ ಮೋಟಾರುಗಳನ್ನು ಬಂದ್ ಮಾಡಿ ನೀರು ಬರದಂತೆ ಮಾಡುತ್ತಿದ್ದಾರೆ ಎಂದು ದೂರಿ ಎರಡ್ಮೂರು ಗಂಟೆಗಳ ಕಾಲ ಜನ ಘಟಕದ ಮುಂಭಾಗ ಧರಣಿ ನಡೆಸಿದ್ದರು. ಈ ವೇಳೆ ನಗರ ಸಭೆಯ ಕಿರಿಯ ಅಭಿಯಂತರ ನವೀನ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ್ದರು. ಬಳಿಕ ಜನರಿಗೆ ನೀರು ಸರಬರಾಜು ಮಾಡುವಂತೆ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದರು.

ಇದನ್ನೂ ಓದಿ:ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶ: ರಾಯಚೂರು ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಜನರ ಮುತ್ತಿಗೆ

ABOUT THE AUTHOR

...view details