ರಾಯಚೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ಹಲವು ವಲಯಗಳಿಗೆ ನಷ್ಟವನ್ನುಂಟು ಮಾಡಿದೆ. ಕೊರೊನಾ ಸೋಂಕಿನ ಪರಿಣಾಮ ಹೆಚ್ಐವಿ ಸೋಂಕಿನ ತಪಾಸಣೆಯಲ್ಲೂ ಇಳಿಮುಖವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಏಡ್ಸ್ ತಪಾಸಣೆಯಲ್ಲಿ ಇಳಿಮುಖ ಕಳೆದ ವರ್ಷ ಹೆಚ್ಐವಿ ಪರೀಕ್ಷೆಗೆ ಒಳಗಾದವರ ಸಂಖ್ಯೆಯನ್ನು ಗಮನಿಸಿದರೆ, ಈ ಬಾರಿ ಎರಡ್ಮೂರು ಪಟ್ಟು ಕುಸಿತ ಕಂಡಿದೆ. ಹಿಂದಿನ ಒಂದು ದಶಕದಿಂದ ಪ್ರತಿ ವರ್ಷ ಸರಾಸರಿ ತಲಾ 50 ಸಾವಿರ ಸಾಮಾನ್ಯ ಜನರಿಗೆ ಹಾಗೂ ಗರ್ಭಿಣಿಯರಿಗೆ ಹೆಚ್ಐವಿ ತಪಾಸಣೆ ಮಾಡಲಾಗುತ್ತಿತ್ತು. ಆದ್ರೆ ಈ ವರ್ಷದಲ್ಲಿ ಏಪ್ರಿಲ್ನಿಂದ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಕೊರೊನಾ ಸೋಂಕಿನ ಭೀತಿಯಿಂದ ತಪಾಸಣೆಗೆ ಒಳಗಾದವರ ಸಂಖ್ಯೆ ಕಡಿಮೆಯಾಗಿರುವುದು ಕಂಡು ಬಂದಿದೆ.
2014-15ನೇ ಸಾಲಿನಲ್ಲಿ 57,203 ಸಾಮಾನ್ಯ ಜನರ ತಪಾಸಣೆ ನಡೆಸಲಾಗಿದ್ದು, 1,169 ಜನರಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. 42,374 ಗರ್ಭಿಣಿಯರ ತಪಾಸಣೆ ನಡೆಸಿದಾಗ 46 ಜನರಿಗೆ ಸೋಂಕು ಕಂಡುಬಂದಿತ್ತು.
2015-16ರಲ್ಲಿ 55,835 ಸಾಮಾನ್ಯ ಜನರ ತಪಾಸಣೆ ನಡೆಸಲಾಗಿದ್ದು, 928 ಜನರಿಗೆ ಸೋಂಕು ದೃಢಪಟ್ಟಿದ್ದರೆ, 40,889 ಗರ್ಭಿಣಿಯರಲ್ಲಿ 50 ಜನರಿಗೆ ಸೋಂಕು ಹರಡಿತ್ತು.
2016-17ರಲ್ಲಿ 59,215 ಸಾಮಾನ್ಯ ಜನರ ತಪಾಸಣೆ ನಡೆಸಿದಾಗ 825 ಜನರಿಗೆ ಸೋಂಕು ಇರುವುದು ದೃಢಪಟ್ಟಿತ್ತು. 52,073 ಗರ್ಭಿಣಿಯರಲ್ಲಿ 31 ಜನರಿಗೆ ಸೋಂಕು ಪತ್ತೆಯಾಗಿತ್ತು. 2017-18ನೇ ಸಾಲಿನಲ್ಲಿ 61,451 ಸಾಮಾನ್ಯ ಜನರ ತಪಾಸಣೆ ಮಾಡಿದ್ದರೆ, 752 ಸೋಂಕಿತರು ಕಂಡು ಬಂದಿದ್ದು, 56,618 ಗರ್ಭಿಣಿಯರಲ್ಲಿ 38 ಜನರಿಗೆ ಸೋಂಕು ಪತ್ತೆಯಾಗಿತ್ತು.
2018-19ನೇ ಸಾಲಿನಲ್ಲಿ 63,880 ಸಾಮಾನ್ಯ ಜನರ ತಪಾಸಣೆ ನಡೆಸಿದಾಗ 684 ಜನರಿಗೆ ಸೋಂಕು ಕಂಡು ಬಂದ್ರೆ, 59,271 ಗರ್ಭಿಣಿಯಲ್ಲಿ 30 ಜನರಿಗೆ ಸೋಂಕು ತಾಕಿತ್ತು. ಕಳೆದ ವರ್ಷ 73,939 ಸಾಮಾನ್ಯ ಜನರ ತಾಪಸಣೆ ನಡೆಸಿದಾಗ 606 ಜನರಿಗೆ ಸೋಂಕು ದೃಡಪಟ್ಟಿದ್ದು, 66,414 ಗರ್ಭಿಣಿಯಲ್ಲಿ 30 ಜನರಿಗೆ ಪಾಸಿಟಿವ್ ಬಂದಿತ್ತು. ಪ್ರಸಕ್ತ ವರ್ಷದಲ್ಲಿ ಏಪ್ರಿಲ್ನಿಂದ ಅಕ್ಟೋಬರ್ ತಿಂಗಳವರೆಗೆ 21,546 ಸಾಮಾನ್ಯ ಜನರಿಗೆ ತಪಾಸಣೆ ಮಾಡಿದ್ದು 225 ಜನರಿಗೆ ಸೋಂಕು ಪತ್ತೆಯಾಗಿದ್ದು, ತಪಾಸಣೆಗೆ ಒಳಪಡಿಸಲಾದ 33,450 ಗರ್ಭಿಣಿಯಲ್ಲಿ 13 ಜನರಿಗೆ ಪಾಸಿಟಿವ್ ಬಂದಿದೆ.
ಓದಿ:ಇಂದು ವಿಶ್ವ ಏಡ್ಸ್ ದಿನಾಚರಣೆ: ದೇಶದಲ್ಲಿ ಹೆಚ್ಚು ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಜಿಲ್ಲೆಯಲ್ಲಿ 2014-15ನೇ ಸಾಲಿನಿಂದ ಒಟ್ಟು 5,198 ಹೆಚ್ಐವಿ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 35 ರಿಂದ 49 ವರ್ಷದೊಳಗಿನವರ ಸಂಖ್ಯೆ ಹೆಚ್ಚಳವಿದೆ. ಸೋಂಕಿತರಲ್ಲಿ 256 ಜನರು 14 ವರ್ಷದೊಳಗಿನವರಾಗಿದ್ದರೆ, 15 ರಿಂದ 24 ವರ್ಷದಗೊಳಿನ 346, 25 ರಿಂದ 34 ವರ್ಷದೊಳಗಿನ 1,339 ಜನರು 35 ರಿಂದ 49 ವರ್ಷದೊಳಗಿನ 2,303 ಹಾಗೂ 50 ವರ್ಷ ಮೇಲ್ಪಟ್ಟ 954 ಜನರಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ರಾಯಚೂರು ಜಿಲ್ಲೆ ಪ್ರಸಕ್ತ ವರ್ಷದಲ್ಲಿಯೂ ನಾಲ್ಕನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ಐವಿ, ಏಡ್ಸ್ ಸೋಂಕಿತರ ಸಂಖ್ಯೆಯನ್ನ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.