ಮೈಸೂರು: ಬೇಸಿಗೆಯ ಬಿಸಿಲಿನ ತಾಪಕ್ಕೆ ಕಪಿಲಾ ಸೇತುವೆ ನೀರು ತಳಮಟ್ಟಕ್ಕೆ ತಲುಪಿದ್ದು, ಮಳೆ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆ.
ಹೌದು, ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ದಿನೆ ದಿನೇ ಕಪಿಲಾ ಸೇತುವೆಯ ನೀರಿನ ಮಟ್ಟ ತಳಮಟ್ಟಕ್ಕೆ ಹೋಗುತ್ತಿರುವುದು ನಂಜನಗೂಡು, ತಿ.ನರಸೀಪುರ ತಾಲೂಕಿನ 400 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ಆತಂಕ ಎದುರಾಗಿದೆ. ಕಳೆದ ವರ್ಷ ಭೀಕರ ಪ್ರವಾಹ ಬಂದಾಗ ನಾಲೆಗಳ ಮೂಲಕ ಕೆರೆ ಕಟ್ಟೆ ತುಂಬಿಸಿಕೊಳ್ಳಲು ಮುಂದಾಗದೇ, ಕಪಿಲಾ ಸೇತುವೆ ಮೂಲಕ ನೀರು ಸಮುದ್ರ ಪಾಲಾಗುವಂತೆ ಮಾಡಲಾಗಿದೆ. ಇದರಿಂದ ಬರಗಾಲ ಬಂದಾಗ ನೀರಿನ ಅಭಾವ ಎದುರಾಗುತ್ತದೆ. ಜಾನುವಾರು ಹಾಗೂ ಗ್ರಾಮಸ್ಥರಿಗೂ ಕುಡಿಯಲು ನೀರು ಇಲ್ಲದಂತಾಗುತ್ತದೆ. ಮುಂಗಾರು ಆರಂಭವಾಗಲು ಕೆಲವು ದಿನಗಳು ಬಾಕಿ ಇದ್ದು, ಉತ್ತಮ ಮಳೆಯಾದರೆ ಕಪಿಲಾ ಸೇತುವೆ ತುಂಬಿ ಹರಿಯುತ್ತದೆ. ಇಲ್ಲವಾದರೆ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.