ಕರ್ನಾಟಕ

karnataka

ETV Bharat / state

ಸರಕು ಸಾಗಣೆಯಿಂದ ಮೈಸೂರು ರೈಲ್ವೆ ವಿಭಾಗಕ್ಕೆ ₹877 ಕೋಟಿ ಆದಾಯ

2023 ರ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸರಕು ಸಾಗಣೆ 9378 ಮಿಲಿಯನ್ ಟನ್‌ಗಳಿಗೆ ತಲುಪಿದೆ.

By

Published : Mar 31, 2023, 11:27 AM IST

transportation goods in Mysore Railway Division
ಮೈಸೂರು ರೈಲ್ವೆ ವಿಭಾಗದಲ್ಲಿ ಸರಕು ಸಾಗಣೆ

ಮೈಸೂರು:ಭಾರತೀಯ ರೈಲ್ವೆಯ ಮಹತ್ವದ ಯೋಜನೆ 'ಹಂಗ್ರಿ ಫಾರ್ ಕಾರ್ಗೋ' ಉಪಕ್ರಮದಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಸರಕು ಸಾಗಣೆಯಲ್ಲಿ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ. ಆರ್ಥಿಕ ವರ್ಷ 2023 ರಲ್ಲಿ (ಮಾರ್ಚ್ 28, 2023 ರವರೆಗೆ) ಮೈಸೂರು ವಿಭಾಗದಿಂದ ಸರಕು ಸಾಗಣೆ 9,378 ಮಿಲಿಯನ್ ಟನ್‌ಗಳಿಗೆ ತಲುಪಿದೆ. 2023ರ 27ನೇ ಮಾರ್ಚ್ ತನಕ 877 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ. ಸರಕು ಸಾಗಣೆ ಆದಾಯವನ್ನು ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ಇದು ಅತ್ಯಧಿಕ.

2021-22ರಲ್ಲಿ ಒಟ್ಟು ಸರಕು ಸಾಗಣೆಯಿಂದ ಗಳಿಸಿದ ಆದಾಯಕ್ಕಿಂತ ಶೇ. 27.43 ರಷ್ಟು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ ನೈಋತ್ಯ ರೈಲ್ವೆ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿಗಿಂತ ಶೇ. 18.52 ಹೆಚ್ಚು ಆದಾಯ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರಕು ಸಾಗಣೆಗೆ ಆದಾಯ ನಿಗದಿಪಡಿಸಿದ್ದ 739.99 ಕೋಟಿ ರೂಪಾಯಿಗಳನ್ನು 329 ದಿನಗಳಲ್ಲೇ ತಲುಪಲಾಗಿದೆ.

ಆರ್ಥಿಕ ವರ್ಷ 2021-22 ರ ಸಾಗಣೆಗೆ ಹೋಲಿಸಿದರೆ ಸರಕು ಸಾಗಣೆ ಆದಾಯದಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆ ಕಂಡಿದೆ. ವಲಯದ ಪ್ರಧಾನ ಕಾರ್ಯಾಲಯ ನಿಗದಿಪಡಿಸಿದ ಗುರಿ ಮುಟ್ಟುವಲ್ಲಿ ಮೈಸೂರು ರೈಲ್ವೆ ವಿಭಾಗ ಯಶಸ್ವಿಯಾಗಿದೆ. ಆರ್ಥಿಕ ವರ್ಷ 2022-23 ಕ್ಕೆ ವಿಭಾಗಕ್ಕೆ ನಿಗದಿಪಡಿಸಿದ ಗುರಿಯನ್ನು ಕೇವಲ 329 ದಿನಗಳಲ್ಲಿ ತಲುಪಿದ್ದು, ಹೊಸ ಮೈಲಿಗಲ್ಲಿಗೆ ನಾಂದಿ ಹಾಡಿದೆ.

9,230 ಮಿಲಿಯನ್ ಟನ್​ಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ 9,378 ಮಿಲಿಯನ್ ಟನ್‌ ಸರಕು ಸಾಗಣೆ ಮಾಡಲಾಗಿದೆ. ಇದು ಮೈಸೂರು ವಿಭಾಗದ ಮೂಲದಿಂದ ಹೊರಟ ಸರಕು ಸಾಗಣೆ ಆಗಿದೆ. ಸರಕು ಸಾಗಣೆಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮೂಲಗಳಾಗಿರುವ ಹೊಸ ಸರಕುಗಳ ಸಾಗಣೆಯನ್ನು ಸುಧಾರಿಸಲು ವಿಭಾಗವು ಗಮನ ಕೇಂದ್ರೀಕರಿಸಿದೆ.

ಪೆಟ್ರೋಲಿಯಂ ಉತ್ಪನ್ನ ಸಾಗಣೆಯಿಂದ ಆದಾಯವು 2022 ರಲ್ಲಿ ರೂ.122 ಕೋಟಿಗಳಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 185 ಕೋಟಿ ರೂಗೆ ತಲುಪಿದೆ. ಇತರ ಸರಕು ಆಹಾರ ಧಾನ್ಯ, ಸಕ್ಕರೆ, ಸಿಮೆಂಟ್ ಮತ್ತು ದ್ವಿಚಕ್ರ ವಾಹನಗಳು ಸಾಗಣೆಯಲ್ಲೂ ಏರಿಕೆಯಾಗಿದೆ.

ಗ್ರಾಹಕ-ಕೇಂದ್ರಿತ ವಿಧಾನಗಳ ಅಳವಡಿಕೆ, ವ್ಯಾಪಾರ ಅಭಿವೃದ್ಧಿ ಘಟಕಗಳ (BDUs) ಪರಿಶ್ರಮ, ಸಮರ್ಪಕ ನೀತಿ ಅಳವಡಿಕೆ, ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಸುಧಾರಿಸಲು ನಿರಂತರ ಪ್ರಯತ್ನಗಳು ಹಾಗು ಸ್ಪರ್ಧಾತ್ಮಕ ಬೆಲೆಗಳಲ್ಲಿ ವರ್ಧಿತ ಸೇವೆ ವಿತರಣೆ - ಇವೆಲ್ಲವೂ ಅತ್ಯಧಿಕ ಆದಾಯ ಗಳಿಸಲು ಸಹಕಾರವಾಗಿವೆ.

ಕಬ್ಬಿಣದ ಅದಿರು ಸಾಗಣೆಯಿಂದ ಆದಾಯ 646.55 ಕೋಟಿ ರೂ ಆಗಿದ್ದು, 2022 ರಲ್ಲಿ ಸರಕು ಸಾಗಣೆಗೆ ಹೋಲಿಸಿದರೆ ಸಮನಾಗಿದೆ. ಕರ್ನಾಟಕ ರಾಜ್ಯದ ಗಣಿಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂ ಕೋರ್ಟ್​ ಅನುಮೋದನೆ ನೀಡಿದ ಬಳಿಕ, ಗೋವಾ ಮತ್ತು ಆಂಧ್ರಪ್ರದೇಶದ ಬಂದರುಗಳಿಗೆ ಸರಕು ಸಾಗಣೆ ಮಾಡಿ ಆದಾಯವನ್ನು ಕ್ರೋಢೀಕರಿಸಲು ಅನುಕೂಲವಾಗಿದೆ.

ರೈಲ್ವೆ ಅಭಿವೃದ್ಧಿಗೆ ತ್ವರಿತ ಕ್ರಮ: ಮೈಸೂರು ರೈಲ್ವೆ ವಿಭಾಗದಲ್ಲಿ ಹಳಿ ದ್ವಿಗುಣಗೊಳಿಸುವಿಕೆ, ಮುಖ್ಯ ಮಾರ್ಗಗಳ ವಿದ್ಯುದೀಕರಣ, ಸರಕು ಸಾಗಣೆ ನಿರ್ವಹಣೆಯ ಟರ್ಮಿನಲ್‌ಗಳ ಉನ್ನತೀಕರಣ ಮತ್ತು ರೌಂಡ್-ದಿ-ಕ್ಲಾಕ್ ಲೋಡಿಂಗ್‌ ಸೌಲಭ್ಯದಂತಹ ನಿರ್ಣಯಗಳು ಮತ್ತು ಮೂಲಸೌಕರ್ಯ ಸಾಮರ್ಥ್ಯ-ನಿರ್ಮಾಣ ಯೋಜನೆಗಳ ತ್ವರಿತ ಕಾರ್ಯಗತಗೊಂಡಿದ್ದು, ಇದು ಸರಕು ಸಾಗಣೆ ಕಾರ್ಯಕ್ಷಮತೆಯನ್ನು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ವಿಶ್ವಾಸ ಹೆಚ್ಚಿಸಿದೆ.

ರೈಲ್ವೆ ಸಾರಿಗೆ ಕ್ಷೇತ್ರದಲ್ಲಿ ದೇಶಾದ್ಯಂತ ಖನಿಜ ಜಿಲ್ಲೆಗಳನ್ನು ಗುರುತಿಸಿರುವುದರಿಂದ ಮೈಸೂರು ವಿಭಾಗವು ಸದ್ಯದ ಭವಿಷ್ಯದಲ್ಲಿ ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರವನ್ನೂ ವಹಿಸಿದೆ. ಈ ಅದ್ಭುತ ದಾಖಲೆ ಸಾಧನೆಗೆ ಸಹಕರಿಸಿದ ಎಲ್ಲ ಇಲಾಖೆಗಳ ಕಾರ್ಯಕ್ಕೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರ್ವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ:ಇಂದಿನಿಂದ ಎಸ್ಎಸ್ಎಲ್​ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಿಎಂ, ಶಿಕ್ಷಣ ಸಚಿವರು

ABOUT THE AUTHOR

...view details