ಕರ್ನಾಟಕ

karnataka

By

Published : Oct 12, 2020, 4:07 PM IST

ETV Bharat / state

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಟೋಲ್ ಗೇಟ್​ ಸಿಬ್ಬಂದಿಯ ಮರ್ಡರ್

ಟೋಲ್​​ ಶುಲ್ಕ ನೀಡುವ ವಿಚಾರವಾಗಿ ಯುವಕರ ಗುಂಪೊಂದು ಟೋಲ್​ ಸಿಬ್ಬಂದಿ ಜೊತೆ ಕಲಹ ಮಾಡಿಕೊಂಡು ಮೈಸೂರು-ನಂಜನಗೂಡು ರಸ್ತೆಯ ಕಡಕೊಳ ಟೋಲ್ ಗೇಟ್ ನ ಸಿಬ್ಬಂದಿಯನ್ನೇ ಕೊಲೆ ಮಾಡಿರುವ ಪ್ರಕರಣ ನಡೆದಿದೆ.

mysore
ಟೋಲ್ ಸಿಬ್ಬಂದಿ ಕೊಲೆ

ಮೈಸೂರು:ಟೋಲ್ ಶುಲ್ಕ ನೀಡುವ ವಿಚಾರವಾಗಿ ಆರಂಭಗೊಂಡ ಕಲಹ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯ ಕಡಕೊಳ ಟೋಲ್ ಗೇಟ್​ ಬಳಿ ನಡೆದಿದೆ.

ಟೋಲ್ ಸಿಬ್ಬಂದಿ ಕೊಲೆ, ಬೆಚ್ಚಿಬಿದ್ದ ನಂಜನಗೂಡು
ಟೋಲ್ ನೌಕರ, ‌ಕಡಕೊಳ‌ ನಿವಾಸಿ ಗಣೇಶ್ ಕೊಲೆಯಾದ ಸಿಬ್ಬಂದಿ. ಟೋಲ್ ಸಂಗ್ರಹಣೆ ವಿಚಾರದಲ್ಲಿ ನಾಲ್ಕೈದು ಮಂದಿ ತಂಡದಿಂದ ಆರಂಭವಾದ ಗಲಾಟೆ ಗಣೇಶನ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕರ ತಂಡವೊಂದು ನಂಜನಗೂಡಿಗೆ ತೆರಳಿ, ಅಲ್ಲಿಂದ ಮೈಸೂರಿಗೆ ವಾಪಸಾಗುವ ವೇಳೆ ಟೋಲ್ ಸಿಬ್ಬಂದಿ ಗಣೇಶ್ ಶುಲ್ಕ‌ ಕೇಳಿದ್ದಾರೆ.‌ ಈ ವಿಚಾರವಾಗಿ ಭಾನುವಾರ ತಡರಾತ್ರಿ ಟೋಲ್​ನಲ್ಲಿ ಗಲಾಟೆ ಶುರುವಾಗಿದೆ. ಆಗ ಯುವಕರ ಗುಂಪು, ಗಣೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಬಳಿಕ ಗಣೇಶ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಣೇಶ್ ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.‌‌‌

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ಡರ್ ಹಿನ್ನೆಲೆ ಟೋಲ್ ಸಂಗ್ರಹಕ್ಕೆ ಬ್ರೇಕ್:

ಸಿಬ್ಬಂದಿ ಕೊಲೆಯಾದ ಹಿನ್ನೆಲೆಯಲ್ಲಿ ಇತರೆ ಸಿಬ್ಬಂದಿ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ್ದಾರೆ. ಇದರಿಂದ ವಾಹನಗಳು ಮುಕ್ತವಾಗಿ ಸಂಚರಿಸುವಂತಾಗಿದೆ. ಹಗಲು -ರಾತ್ರಿ ಕೆಲಸ ಮಾಡುವ ನಮಗೆ ಯಾವುದೇ ರಕ್ಷಣೆ ಇಲ್ಲ, ಭಯದಲ್ಲೇ ಕಾರ್ಯನಿರ್ವಹಿಸುವಂತಾಗಿದೆ. ಹೀಗಾಗಿ ಟೋಲ್ ಸಂಗ್ರಹಿಸುವ ನಮಗೆ ರಕ್ಷಣೆ ಕೊಡಿ‌ ಎಂದು ಪೊಲೀಸರ ಬಳಿ ಟೋಲ್​ ಸಿಬ್ಬಂದಿ ಮನವಿ ಮಾಡಿದ್ದಾರೆ.

ABOUT THE AUTHOR

...view details