ಕರ್ನಾಟಕ

karnataka

ಧಾರ್ಮಿಕ ಸ್ವಾತಂತ್ರ್ಯ, ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ: ಅಂಬೇಡ್ಕರ್ ಮೊಮ್ಮಗ

ನಗರದ ಲಲಿತ ಮಹಲ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್ ಬೌದ್ಧ ಮಹಾಸಮ್ಮೇಳನ - ದೇಶದಲ್ಲಿ ಬೌದ್ಧ ಧರ್ಮೀಯರು ಬಹಳಷ್ಟು ಜನರಿದ್ದಾರೆ- ಆದರೆ ಅಂಕಿ-ಅಂಶಗಳನ್ನು ಮರೆಮಾಚಲಾಗುತ್ತಿದೆ - ಡಾ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಕಳವಳ

By

Published : Feb 26, 2023, 8:59 PM IST

Published : Feb 26, 2023, 8:59 PM IST

ETV Bharat / state

ಧಾರ್ಮಿಕ ಸ್ವಾತಂತ್ರ್ಯ, ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ: ಅಂಬೇಡ್ಕರ್ ಮೊಮ್ಮಗ

State level Buddhist Mahasamela in mysuru
ಧಾರ್ಮಿಕ ಸ್ವಾತಂತ್ರ್ಯ, ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ: ಅಂಬೇಡ್ಕರ್ ಮೊಮ್ಮಗ

ಮೈಸೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಸೇರುವ ಅಧಿಕಾರವನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಆದರೀಗ ಧಾರ್ಮಿಕ ಸ್ವಾತಂತ್ರ್ಯ, ಧಾರ್ಮಿಕ ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ. ಇದು ಸಂವಿಧಾನ ಬಾಹಿರ. ಇದಕ್ಕೆ ಅವಕಾಶ ಕೊಡಲ್ಲ ಎಂದು ಅಂಬೇಡ್ಕರ್ ಅವರ ಮೊಮ್ಮಗ ಡಾ. ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಹೇಳಿದರು.

ನಗರದ ಲಲಿತ ಮಹಲ್ ಮೈದಾನದ ಆವರಣದಲ್ಲಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್ ಬೌದ್ಧ ಮಹಾಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬೌದ್ಧ ಧರ್ಮೀಯರು ಬಹಳಷ್ಟು ಜನರಿದ್ದಾರೆ. ಆದರೆ ಅಂಕಿ-ಅಂಶಗಳನ್ನು ಮರೆಮಾಚಲಾಗುತ್ತಿದೆ. ಅಂಕಿ ಸಂಖ್ಯೆಗೂ ವಾಸ್ತವತೆಗೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ಶೀಘ್ರದಲ್ಲೇ ಜನಗಣತಿ ನಡೆಯಲಿದೆ. ಆ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಬುದ್ಧ ಎಂದು ಬರೆಸಬೇಕು. ಉಪಜಾತಿ ಕಾಲಂ ತಮ್ಮ ಉಪಜಾತಿಯನ್ನೂ ನಮೂದಿಸಬೇಕು ಎಂದು ಸಲಹೆ ನೀಡಿದರು.

ಬುದ್ಧ ಧಮ್ಮ ಕ್ರಾಂತಿ ದೇಶದೆಲ್ಲೆಡೆ ಮತ್ತೆ ಮೊಳಗಬೇಕು:ಬೌದ್ಧ ಧರ್ಮ ದೀಕ್ಷೆ ರಾಜಕೀಯ ದೀಕ್ಷೆಯಲ್ಲ. ಇದು ಧಾರ್ಮಿಕ ಅಸವಾಗಬೇಕು. ದೀಕ್ಷೆ ಪಡೆಯುವವರು ಮೊದಲು ರಾಜಕೀಯಕ್ಕೆ ಮಹತ್ವ ಬಳಿಕದ ಧರ್ಮ ಕಡೆಗೆ ಗಮನ ಕೊಡುತ್ತಾರೆ, ಇದು ಸರಿಯಲ್ಲ. ದಕ್ಷಿಣ ಭಾರತದಲ್ಲಿ ಬೌದ್ಧ ಧರ್ಮದ ಸಂಘಟನೆ ದುರ್ಬಲವಾಗಿದೆ. ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಕಡಿಮೆ ಇದೆ. ಬುದ್ಧ ಧಮ್ಮ ಕ್ರಾಂತಿ ದೇಶದೆಲ್ಲೆಡೆ ಮತ್ತೆ ಮೊಳಗಬೇಕು ಎಂದು ಮನವಿ ಮಾಡಿದರು.

ಮೈಸೂರಿನ ಮಹಾರಾಜರು ಅಂಬೇಡ್ಕರ್ ಅವರಿಗೆ ಬೆಂಗಳೂರಿನಲ್ಲಿ 5 ಎಕರೆ ಜಾಗವನ್ನು ಬುದ್ಧವಿಹಾರ, ಶಿಕ್ಷಣ ಸಂಸ್ಥೆ, ತರಬೇತಿ ಕೇಂದ್ರ ನಿರ್ಮಾಣಕ್ಕೆ ನೀಡಿದ್ದರು. ಆದರೆ, ಭೂವ್ಯಾಜ್ಯದಿಂದಾಗಿ ಇದು ಸಕಾರಗೊಂಡಿಲ್ಲ. ಮೈಸೂರಿನಲ್ಲಿ ಬೃಹತ್ ಬುದ್ಧವಿಹಾರ ನಿರ್ಮಿಸಬೇಕಾಗಿದೆ. ಜಾಗ ಕೊಟ್ಟರೆ ಸ್ವಂತ ಹಣದಲ್ಲಿ ಇದನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಭಾರತ ಬುದ್ಧನ ನಾಡು:ನಗರದ ಉರಿಲಿಂಗಪೆದ್ದಿಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಭಾರತ ಬುದ್ಧನ ನಾಡು. ಬೌದ್ಧ ಧರ್ಮ ಎಂದರೆ ಸತ್ಯ, ಸಮಾನತೆ, ಭಾತೃತ್ವ, ಮಾನವೀಯತೆ, ಜ್ಞಾನ, ಪ್ರಜ್ಞೆ, ವಿದ್ಯೆ. ಈ ಕಾರಣಕ್ಕೆ ಅಂಬೇಡ್ಕರ್​ ಈ ಧರ್ಮದ ದೀಕ್ಷೆ ಪಡೆದರು. ಆದ್ದರಿಂದ ಘನತೆ, ಸ್ವಾಭಿಮಾನದ ಬದುಕಿಗಾಗಿ ಅವರ ಅನುಯಾಯಿಗಳು, ದಲಿತರು ಬೌದ್ಧಧರ್ಮ ಕಡೆ ಮುಖ ಮಾಡಬೇಕು ಎಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಬೀದರ್​ನ ಧಮ್ಮಾನಂದ ಭಂತೇಜಿ, ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಭಂತೇಜಿ, ವೀರ್ಯಶೀಲಾ ಭಂತೇಜಿ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಡಿ.ಜಗನ್ನಾಥ್, ಮಾಜಿ ಮೇಯರ್ ಪುರುಷೋತ್ತಮ್, ಎಸ್.ಕೆ.ಭಂಡೇರಿ, ಹೊರವಾಡೆ, ಡಾ.ಜಯಪ್ರಕಾಶ್, ಮಲ್ಲಿಕಾರ್ಜುನ ಬಾಲ್ಕಿ, ಎಂ.ಸಿ.ಶಿವರಾಜು ಭಾಗವಹಿಸಿದ್ದರು.

ಧಮ್ಮ ನಡಿಗೆ:ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಧಮ್ಮ ನಡಿಗೆ ನಡೆಯಿತು. ಪುರ ಭವನದ ಆವರಣದಿಂದ ಸಾವಿರಾರು ಜನರೊಂದಿಗೆ ಹೊರಟ ಮೆರವಣಿಗೆಯು ಸಭಾ ಕಾರ್ಯಕ್ರಮ ನಡೆಯುವ ಲಲಿತಮಹಲ್ ಅರಮನೆ ಮೈದಾನದಲ್ಲಿ ಸಮಾವೇಶಗೊಂಡಿತು.

ರಾಜ್ಯ ಮಟ್ಟದ ಬೌದ್ಧ ಮಹಾ ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:ಬುದ್ಧ ಪೂರ್ಣಿಮೆಯನ್ನು ಸರ್ಕಾರದಿಂದಲೇ ಆಚರಣೆ ಮಾಡುವುದರೊಂದಿಗೆ ಬೌದ್ಧ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಸ್ಥಾಪಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಯಿತು. ರಾಜ್ಯಾದ್ಯಂತ ಬುದ್ಧ ವಿಹಾರಗಳ ನಿರ್ಮಾಣ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 25 ಎಕರೆ, ತಾಲೂಕು ಕೇಂದ್ರಗಳಲ್ಲಿ 5 ಎಕರೆ, ಹಳ್ಳಿಗಳಲ್ಲಿ ಒಂದು ಎಕರೆ ನೀಡಿ ಬುದ್ಧವಿಹಾರ, ಧ್ಯಾನ ಕೇಂದ್ರ, ಶಾಲಾ ಕಾಲೇಜು ಮಂಜೂರು, ಬೌದ್ಧರು ನಡೆಸುವ ಶಾಲಾ ಕಾಲೇಜುಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳಿಗೆ ಅನುದಾನ ನೀಡಬೇಕು, ಬೌದ್ಧ ಸಾಹಿತ್ಯದ ತ್ರಿಪೀಠಕಗಳು, ಅದಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶನ ಮಾಡಲು ಅನುದಾನ ನೀಡಬೇಕು, ಬೌದ್ಧಯಾತ್ರ ಸ್ಥಳಗಳಿಗೆ ಪ್ರವಾಸ ಮಾಡಲು ಅನುದಾನ, ಬೌದ್ಧರಾದವರಿಗೆ ಧರ್ಮ ಪ್ರಮಾಣಪತ್ರ ನೀಡಬೇಕು, ಬೌದ್ಧ ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅನುದಾನ ನೀಡಬೇಕು ಎಂದು ನಿರ್ಣಯಗಳನ್ನು ಮಾಡಲಾಯಿತು.

ಇದನ್ನೂ ಓದಿ:ಸಪ್ತಪದಿ ಯೋಜನೆಯಂತೆ, ಅಕ್ಷರಾಭ್ಯಾಸ ಯೋಜನೆ ತರಬೇಕು: ಶಾಸಕ ಎಸ್ ಎ ರಾಮದಾಸ್

ABOUT THE AUTHOR

...view details