ಮೈಸೂರು: ಹುಣಸೂರು ನಗರಸಭಾ ಚುನಾವಣೆ ಪ್ರಚಾರದ ವೇಳೆ ಅಭ್ಯರ್ಥಿಗೆ ಮತದಾರರು ಪ್ರಶ್ನಿಸಿದ್ದನ್ನು ರೆಕಾರ್ಡ್ ಮಾಡುತ್ತಿದ್ದರೆಂದು ಶಂಕಿಸಿ ವರದಿಗಾರರ ಮೇಲೆ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಾರನ ಮೇಲೆ ಹಲ್ಲೆ ಪ್ರಕರಣ: ಮೂವರ ಬಂಧನ - ಮೈಸೂರು ಕ್ರೈಮ್ ಲೆಟೆಸ್ಟ್ ನ್ಯೂಸ್
ಹುಣಸೂರು ನಗರಸಭಾ ಚುನಾವಣೆ ಪ್ರಚಾರದ ವೇಳೆ ಅಭ್ಯರ್ಥಿಗೆ ಮತದಾರರು ಪ್ರಶ್ನಿಸಿದ್ದನ್ನು ರೆಕಾರ್ಡ್ ಮಾಡುತ್ತಿದ್ದರೆಂದು ಶಂಕಿಸಿ ವರದಿಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಮತದಾರರೊಬ್ಬರು ಅಭ್ಯರ್ಥಿಗೆ ಪ್ರಶ್ನಿಸಿದ್ದನ್ನು ಬೆಂಗಳೂರು ಮೂಲದ ಯೂಟ್ಯೂಬ್ ಚಾನೆಲ್ ವರದಿಗಾರ ಸೆರೆ ಹಿಡಿಯಲು ಮುಂದಾದಾಗ ನೀವು ಪಕ್ಷೇತರ ಅಭ್ಯರ್ಥಿ ಪರವಾಗಿ ಬಂದಿದ್ದೀರಿ, ಸೋಲಿನ ಭಯದಿಂದ ನಿಮ್ಮನ್ನು ಕರೆಸಿ ಅವರು ರೆಕಾರ್ಡ್ ಮಾಡಿಸುತ್ತಿದ್ದಾರೆ ಎಂದು ಹಲ್ಲೆ ನಡೆಸಿದ್ದರಂತೆ. ಈ ಸಂಬಂಧ ಯೂಟ್ಯೂಬ್ ಚಾನೆಲ್ ವರದಿಗಾರ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಹಲ್ಲೆ ನಡೆಸಿದ ಪುರಸಭೆ ಮಾಜಿ ಸದಸ್ಯ ಮುಜೀದ್, ಅಹಮ್ಮದ್ ಮತ್ತು ಹಸೀಬ್ ಅಹಮ್ಮದ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.