ಮೈಸೂರು: ಪುನೀತ್ ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಹೆಸರಿನಲ್ಲಿ ಇನ್ನು ಮುಂದೆ ಎರಡು ಚಿನ್ನದ ಪದಕವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ನೀಡಲಾಗುವುದು ಎಂದು ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿವಿಯ 102 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷದಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಾರ್ವತಮ್ಮ ರಾಜ್ಕುಮಾರ್ ಹೆಸರಿನಲ್ಲಿ ಬಿಸ್ನೆಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಲಲಿತ ಕಲಾ ವಿಭಾಗದಲ್ಲಿ ಒಂದು ಚಿನ್ನದ ಪದಕ ನೀಡಲಾಗುವುದು ಎಂದರು.
ತಂದೆ, ತಮ್ಮನಿಗೂ ಗೌರವ ಡಾಕ್ಟರೇಟ್:ಜೀವನ ಒಂದು ಚಕ್ರವಿದ್ದಂತೆ. ನಮ್ಮ ತಂದೆಗೂ ಮೈಸೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಈಗ ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. ಅಪ್ಪು ಮಾಡಿರುವ ಕೆಲಸಗಳು ಮತ್ತು ಸೇವೆಗಳಿಗೆ ಮನ್ನಣೆ ನೀಡಿದ್ದಾರೆ. ಅಪ್ಪು ಯಾವ ಪ್ರಶಸ್ತಿಗಳಿಗೂ ಆಸೆ ಪಡದೆ ಕೆಲಸ ಮಾಡುತ್ತಿದ್ದರು. ಈಗ ಪ್ರಶಸ್ತಿಗಳೇ ಅವರನ್ನು ಹಿಂಬಾಲಿಸುತ್ತಿವೆ. ಇದಕ್ಕೆ ಅಭಿಮಾನಿಗಳೇ ಕಾರಣ ಎಂದು ಹೇಳಿದರು.