ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ಭಾರತ ಆಗಬೇಕು: ಪ್ರೊ.ಮಹೇಶ್ ಚಂದ್ರಗುರು - ಮೋದಿ ಮುಕ್ತ ಭಾರತ

ನರೇಂದ್ರ ಮೋದಿ ಕೇವಲ ಕೆಲವೇ ಶ್ರೀಮಂತರಿಗೆ ಮಾತ್ರ ಪ್ರಧಾನಿ ಎಂದು ಪ್ರೊ.ಮಹೇಶ್​ ಚಂದ್ರಗುರು ಟೀಕಿಸಿದರು.

ಮೋದಿ ಮುಕ್ತ ಭಾರತ ಆಗಬೇಕು ಪ್ರೊ.ಮಹೇಶ್ ಚಂದ್ರಗುರು
ಮೋದಿ ಮುಕ್ತ ಭಾರತ ಆಗಬೇಕು ಪ್ರೊ.ಮಹೇಶ್ ಚಂದ್ರಗುರು

By ETV Bharat Karnataka Team

Published : Dec 27, 2023, 9:55 PM IST

ಮೈಸೂರು: 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ಭಾರತ ಆಗಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿವುಮುಕ್ತ, ನಿರುದ್ಯೋಗ ಮುಕ್ತದೇಶ ಮಾಡುವಲ್ಲಿ ಮೋದಿ ವಿಫಲರಾಗಿದ್ದಾರೆ. ದೇಶದ 130 ಕೋಟಿ ಜನರ ಪ್ರಧಾನಿ ಮೋದಿ ಆಗಿಲ್ಲ. ಕೇವಲ ಕೆಲವೇ ಶ್ರೀಮಂತರಿಗೆ ಅವರು ಪ್ರಧಾನಿಯಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ದೇಶದಲ್ಲಿ ಹಿಂದೂ ಧರ್ಮದಲ್ಲಿ ಹಿಂದುಳಿದ ಸಮುದಾಯಗಳು ಸುರಕ್ಷಿತವಾಗಿಲ್ಲ. ಸಂವಿಧಾನದ ಆಶಯಗಳು ಜಾರಿಗೆ ಬರಬೇಕೆಂದರೆ ಮೋದಿ ಮುಕ್ತ ಭಾರತ ಆಗಬೇಕು. ಕರ್ನಾಟಕದಲ್ಲಿ ಬಿಜೆಪಿಯನ್ನು ತೊಲಗಿಸಿದ್ದಾರೆ. ಅದೇ ರೀತಿ ದೇಶದಲ್ಲಿ ಮೋದಿಯನ್ನು ಕಿತ್ತೆಸೆಯಬೇಕು ಎಂದರು.

ನೂತನ ಸಂಸತ್ ಭವನದ ಒಳಾವರಣದಲ್ಲಿ ನಡೆದ ಸ್ಮೋಕ್ ದಾಳಿ ಪ್ರಕರಣವು ಕೇಂದ್ರ ಸರ್ಕಾರದ ಬಹು ದೊಡ್ಡ ನಿರ್ಲಕ್ಷ್ಯ. ಸಂಸತ್​ನಲ್ಲಿ ಸಂಸದರಿಗೆ ಭದ್ರತೆ ನೀಡದ ಸರ್ಕಾರ ಬಹು ಸಂಖ್ಯಾತರನ್ನು ಹೇಗೆ ರಕ್ಷಣೆ ಮಾಡುತ್ತದೆ ಎಂದು ಪ್ರಶ್ನಿಸಿದರು. ಶ್ರೀಮಂತರಿಂದ ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಇರುವ ಯಾವುದಾದರೂ ಸರ್ಕಾರವಿದ್ದರೆ ಅದು ಮೋದಿ ಸರ್ಕಾರ. ಮೋದಿ ಯುಗದಲ್ಲಿ ಬಡ ಸಾಮಾನ್ಯರಿಗೆ ಬದುಕಲು ಸಾಧ್ಯವಿಲ್ಲ. ಬಿಲಿಯನ್ ಮಿಲಿಯನ್‌ಗೂ ವ್ಯತ್ಯಾಸ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್ ನಮ್ಮ ದೇಶದ ವಿತ್ತ ಸಚಿವರು. ದೇಶದಲ್ಲಿ ಅಪೌಷ್ಟಿಕತೆ, ಬಡತನ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ನಮ್ಮ ಹಕ್ಕಿಗಾಗಿ ನಾವು ಇಡೀ ದೇಶಾದ್ಯಂತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಂಜನಗೂಡಿನಲ್ಲಿ ಮಹಿಷನ ರಂಗೋಲಿಯನ್ನು ಚಪ್ಪಲಿ ಕಾಲಿನಿಂದ ತುಳಿದು ಅಪಮಾನಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಾಲಿನಿಂದ ತುಳಿದು ಅವಮಾನಿಸಿದ್ದನ್ನು ವಿರೋಧಿಸಿದ ಕೆಲವರ ಮೇಲೆ ದೂರು ನೀಡಲಾಗಿದೆ. ನಾವೂ ಸಹ ಪ್ರತಿ ದೂರು ನೀಡಲಿದ್ದೇವೆ. ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ನ್ಯಾ.ಕಾಂತರಾಜು ಆಯೋಗದ ವರದಿಯನ್ನು ಜಾರಿಗೊಳಿಸುವ ಸಾಮರ್ಥ್ಯ ಕೇವಲ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ವರದಿ ಬಿಡುಗಡೆಗೂ ಮೊದಲೇ ಅದನ್ನು ವಿರೋಧಿಸುವುದು ಬೇಡ. ಬಳಿಕವಷ್ಟೇ ಚರ್ಚೆ ನಡೆಯಲಿ ಎಂದರು. ಜಾತಿಗಣತಿ ವರದಿ ಜಾರಿಯಾಗಬೇಕು. ಈ ರೀತಿಯ ವರದಿಯಲ್ಲಿಯೇ ಮೂಲ ನಿವಾಸಿಗಳು, ಬಹುಸಂಖ್ಯಾತರ ಭವಿಷ್ಯ ಅಡಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕಾಂತರಾಜ ಜಾತಿ ಗಣತಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ದಿನಗಳಲ್ಲಿ ನವ ಮಂಡಲ್ ಚಳವಳಿ ನಡೆಯಬೇಕಾದ ಅಗತ್ಯವಿದೆ. ಧರ್ಮಾತೀತ, ಜಾತ್ಯತೀತವಾಗಿ ಎಲ್ಲರಿಗೂ ಸವಲತ್ತು ಸಿಗಬೇಕಾದರೆ ಇಡೀ ದೇಶದಾದ್ಯಂತ ಜಾತಿ ಗಣತಿ ನಡೆಯಬೇಕು. ಅದಕ್ಕೆ ಅನುಗುಣವಾಗಿ ಎಲ್ಲರಿಗೂ ಸವಲತ್ತು ಸಿಗಬೇಕು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾ ಸಾಮಾಜಿಕ, ಆರ್ಥಿಕ ಸಮಾನತೆಗೆ ಬದ್ಧರಾಗಿರಬೇಕು ಎಂದರು.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರನ್ನು ನಾನು ನಿಂದಿಸಿಲ್ಲ: ಸಂಸದ ಪ್ರತಾಪ್ ಸಿಂಹ

ABOUT THE AUTHOR

...view details