ಕರ್ನಾಟಕ

karnataka

ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ; ಹಣ, ಗಾಂಜಾ, ಆಯುಧ ವಶ

By

Published : Feb 10, 2023, 7:35 AM IST

ಮೈಸೂರಿನಲ್ಲಿ ನಗರ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ಅಲ್ಲದೆ ನಗರದ ವಿವಿಧ ವ್ಯಾಪ್ತಿಗಳಲ್ಲಿ ದಾಳಿ ನಡೆಸಿ ಹಲವು ಕಾರ್ಯಾಚರಣೆ ನಡೆಸಿದ್ದಾರೆ.

Police attack on Central Jail in Mysore
ಕಾರಗೃಹದ ಮೇಲೆ ಕಾರ್ಯಚರಣೆ ನಡೆಸುತ್ತಿರುವ ನಗರ ಪೊಲೀಸರು

ಮೈಸೂರು:ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ದಿಢೀರ್​ ದಾಳಿ ನಡೆಸಿದ್ದು, ಕೈದಿಗಳಿಂದ ಮೊಬೈಲ್, ಹಣ, ಗಾಂಜಾ, ಚಾಕು ಕತ್ತರಿ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಚರಣೆಯ ನೇತೃತ್ವ ವಹಿಸಿದ್ದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿರವರು ತಂಡ ರಚಿಸಿ ಎಲ್ಲಾ ವಿಭಾಗದ ಎಸಿಪಿ, ಇನ್ಸ್‌ಪೆಕ್ಟರ್‌ಗಳು, ಎಸ್‌ಐಗಳು, ಕಮಾಂಡೋ ಪಡೆ, ಮಾದಕ ವಸ್ತು ಪತ್ತೆ ಹಚ್ಚುವ ಶ್ವಾನ ದಳದೊಂದಿಗೆ ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಏಕಾಏಕಿ ದಾಳಿ ನಡೆಸಿದರು.

ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿಯೇ ಕಾದಿತ್ತು. ತಮ್ಮ ಅಪರಾಧದಿಂದ ಕಾನೂನಿ ಚೌಕಟ್ಟಿನ ಒಳಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಲ್ಲಿ ನಿಯಮ ಮೀರಿ ಅವರ ಬಳಿ 15 ಸಾವಿರ ಹಣ, 5 ಮೊಬೈಲ್ ಫೋನ್‌ಗಳು, 20 ಗ್ರಾಂ ಗಾಂಜಾ, ಚಾಕು ಕತ್ತರಿ ಹಾಗೂ ಸ್ಪೂನ್‌ಗಳಿಂದ ಮಾಡಿದ ಆಯುಧಗಳು ದೊರಕಿದ್ದು ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡರು. ಅಲ್ಲದೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ ಹಾಗೂ ಇತರೆ ಅಧಿಕಾರಿಗಳು ಇದ್ದರು.

ಈ ಕುರಿತು ಮಾಧ್ಯಮಗಳೊಂದಿಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪ್ರತಿಕ್ರಿಯಿಸಿ , ಮೈಸೂರು ಕೇಂದ್ರ ಕಾರಾಗೃಹದ ಹಿಂಭಾಗದಲ್ಲಿರುವ ಸ್ಮಶಾನದ ಕಡೆಯಿಂದ ಕಾರಾಗೃಹದ ಆವರಣದೊಳಕ್ಕೆ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಕಾರಾಗೃಹದ ಸಿಬ್ಬಂದಿ ಏನಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

22 ಮಂಗಳ ಮುಖಿಯರು ವಶಕ್ಕೆ:ಭಿಕ್ಷೆಯ ನೆಪದಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದ ತೃತೀಯ ಲಿಂಗಿಗಳ ಮೇಲೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 22 ಮಂದಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರದ ಪ್ರಮುಖ ವೃತ್ತಗಳು, ಸಿಗ್ನಲ್, ಜಂಕ್ಷನ್‌ಗಳಲ್ಲಿ ತೃತೀಯ ಲಿಂಗಿಗಳು ಭಿಕ್ಷೆಯ ನೆಪದಲ್ಲಿ ಬಲವಂತವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದ ಮೇರೆಗೆ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 22 ಜನ ತೃತೀಯ ಲಿಂಗಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಸೂಕ್ತ ಕಾನೂನು ಕ್ರಮ ವಹಿಸಿದ್ದಾರೆ.

ಭಿಕ್ಷಾಟನೆ ಕಾರ್ಯಾಚರಣೆ:ಇನ್ನು ನಗರದ ವಿವಿಧ ಠಾಣೆಗಳ ವ್ಯಾಪ್ತಿಯ ಪ್ರಮುಖ ವೃತ್ತಗಳು, ಸಿಗ್ನಲ್, ಜಂಕ್ಷನ್‌ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದವರ ವಿರುದ್ಧ ಕೂಡ ನಗರ ಪೊಲೀಸ್ ವತಿಯಿಂದ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 8 ಜನರನ್ನು ವಶಕ್ಕೆ ಪಡೆದು ಸೂಕ್ತ ತಿಳುವಳಿಕೆ ನೀಡಿ ಪುನರ್ವಸತಿಗಾಗಿ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಒಟ್ಟಾರೆ ಈ ರೀತಿಯ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿಯೂ ನಡೆಸಲಾಗುವುದು ಎಂದು ನಗರದ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ ಹಿರಿಯ ನಟಿ ಅಭಿನಯ ನಾಪತ್ತೆ: ಪೊಲೀಸರಿಂದ ಲುಕ್​ಔಟ್​ ನೋಟಿಸ್ ಜಾರಿ

ABOUT THE AUTHOR

...view details