ಕರ್ನಾಟಕ

karnataka

ETV Bharat / state

ವಿಧಾನಸಭಾ ಚುನಾವಣೆ 2023: ಪಿರಿಯಾಪಟ್ಟಣ ಮತಕ್ಷೇತ್ರದ ರಾಜಕೀಯ ಲೆಕ್ಕಾಚಾರ ಹೀಗಿದೆ

ಪಿರಿಯಾಪಟ್ಟಣ ಮತಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಹಾಲಿ ಶಾಸಕ ಕೆ.ಮಹದೇವು ಹಾಗೂ ಕಾಂಗ್ರೆಸ್​ನಿಂದ ಮಾಜಿ ಶಾಸಕ ಕೆ. ವೆಂಕಟೇಶ್ ನಡುವೆ ಪ್ರಬಲ ಪೈಪೋಟಿ ಇದೆ. ಬಿಜೆಪಿಯಿಂದ ಸಿ.ಹೆಚ್​.ವಿಜಯಶಂಕರ್ ಸ್ಪರ್ಧಿಸುವ ಸಾಧ್ಯತೆಗಳಿವೆ.

By

Published : Mar 21, 2023, 9:32 PM IST

piriyapatna assembly constituency
piriyapatna assembly constituency

ಮೈಸೂರು: ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು, ಈ ಬಾರಿ ಬಿಜೆಪಿಯಿಂದಲೂ ಅಚ್ಚರಿಯ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದೆ. ಜೆಡಿಎಸ್​ನಿಂದ ಹಾಲಿ ಶಾಸಕ ಕೆ.ಮಹದೇವು ಹಾಗೂ ಕಾಂಗ್ರೆಸ್​ನಿಂದ ಮಾಜಿ ಶಾಸಕ ಕೆ. ವೆಂಕಟೇಶ್ ನಡುವೆ ಪ್ರಬಲ ಪೈಪೋಟಿ ಇದೆ. ಗೆಲ್ಲಲು ಎರಡು ಪಕ್ಷಗಳು ಈಗಾಗಲೇ ತಯಾರಿ ಕೂಡ ನಡೆಸಿವೆ.

ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಅನುಕಂಪವೋ ಅಥವಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರ್ಚಸ್ಸಿನಿಂದಲೋ ಎನೋ, ಅಧಿಕಾರಕ್ಕೆ ಬಂದ ಹಾಲಿ ಜೆಡಿಎಸ್‌ ಶಾಸಕ ಕೆ.ಮಹದೇವು ಅವರ ಪುತ್ರ ಪ್ರಸನ್ನ ದೊಡ್ಡಕೋಟೆ ಕೂಡ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಹಾಗೂ ಹೆಚ್​.ಡಿ.ಕುಮಾರಸ್ವಾಮಿಯ ತೀವ್ರ ಸಮರಕ್ಕೆ ಕಾರಣವಾಗಿದ್ದ ಮೈಮುಲ್‌ ಚುನಾವಣೆಯಲ್ಲಿ, ತನ್ನ ಬಣ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದ ಜಿಟಿಡಿ, ಅತೀ ಚಿಕ್ಕ ವಯಸ್ಸಿನ ಶಾಸಕ ಕೆ.ಮಹದೇವು ಅವರ ಪುತ್ರನನ್ನು ಅಧ್ಯಕ್ಷಗಾದಿಗೆ ಏರಿಸುವ ಮೂಲಕ, ಪಿರಿಯಾಪಟ್ಟಣದಲ್ಲಿ ತೆನೆ ಮತ್ತಷ್ಟು ಬಿಗಿಯಾಗಿ ನೆಲಯೂರಲು ಕಾರಣರಾಗಿದ್ದಾರೆ. ಇದೇ ಈಗ ಪಿರಿಯಾಪಟ್ಟಣ ಜೆಡಿಎಸ್‌ ಕೋಟೆಯಾಗಿ ಪರಿಣಮಿಸಿದೆ.

ಕ್ಷೇತ್ರದ ವೈಶಿಷ್ಟ್ಯ ಹೀಗಿದೆ:ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ಇವರೊಂದಿಗೆ ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕ್ರಿಶ್ಚಿಯನ್​ ಹಾಗೂ ಲಿಂಗಾಯತ ಸಮೂದಾಯ ಕೂಡ ಪ್ರಾಬಲ್ಯ ಹೊಂದಿವೆ. 1952 ರಿಂದ ಈವರೆಗೂ ನಡೆದ ಚುನಾವಣೆಗಳಲ್ಲಿ ಆರು ಬಾರಿ ಕಾಂಗ್ರೆಸ್‌ ಗೆದ್ದಿದ್ದರೆ ಮೂರು ಬಾರಿ ಜೆಡಿಎಸ್‌ ಗದ್ದುಗೆ ಏರಿದೆ. ಎರಡು ಬಾರಿ ಪಕ್ಷೇತರ, ಒಮ್ಮೆ ಜನತಾಪಕ್ಷ, ಒಮ್ಮೆ ಬಿಜೆಪಿ ಪಾಲಾಗಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ಇದೀಗ ಚುನಾವಣೆ ಹೊಸ್ತಿಲಲ್ಲಿರುವುದರಿಂದ ಕ್ಷೇತ್ರದಲ್ಲಿ ಮತ್ತೆ ಲೆಕ್ಕಾಚಾರ ನಡೆಯುತ್ತಿದೆ.

ಪಿರಿಯಾಪಟ್ಟಣ ಮತಕ್ಷೇತ್ರದ ಲೆಕ್ಕಾಚಾರ

ಐದು ಬಾರಿ ಗೆದ್ದಿದ್ದ ವೆಂಕಟೇಶ್:ಮತ್ತೊಂದು ವಿಶೇಷ ಎಂದರೆ ಕಳೆದ ಬಾರಿ ಸೋತ ಕೆ.ವೆಂಕಟೇಶ್‌, ಈ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಇವರ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯ ಅಷ್ಟಾಗಿ ಮುನ್ನಲೆಗೆ ಬಾರದಿರುವುದು ಹಾಗೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲರಾಗಿದ್ದೇ ಅವರ ಸೋಲಿಗೂ ಕಾರಣವಾಯಿತೆನ್ನುವುದು ಕ್ಷೇತ್ರದ ಜನರ ಮಾತು. ಇನ್ನೂ ಕ್ಷೇತ್ರದಲ್ಲಿ ತೋಟದ ಮನೆಯಿದ್ದರೂ ಜನರಿಗೆ ಲಭ್ಯವಾಗದ ಶಾಸಕರೆಂಬ ಹಣೆ ಪಟ್ಟಿಯೂ ಸಹ ವೆಂಕಟೇಶ್‌ ಅವರ ಸೋಲಿಗೆ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.

ಅಭಿವೃದ್ಧಿ ರಾಜಕಾರಣದ್ದೇ ಕೋಲ್ಡ್‌ ವಾರ್‌:ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್‌ ಹಾಗೂ ಕೈ ಕಾರ್ಯಕರ್ತರ ನಡುವೆ ಇನ್ನಿಲ್ಲದ ಪೈಪೋಟಿ ಚರ್ಚೆ ನಡೆಯುತ್ತಲೇ ಇದೆ. ಕೆ.ವೆಂಕಟೇಶ್‌ ಅವರ ಅವಧಿಯಲ್ಲಿ ಬಸ್ ಡಿಪೋ, ಅರಸು ಭವನ, ಅಗ್ನಿಶಾಮಕ ಕೇಂದ್ರ, ಬೆಟ್ಟದಪುರ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು, ಬೆಟ್ಟದಪುರ ಪೊಲೀಸ್ ಠಾಣೆ, ತಾಲೂಕಿನ ಬೆಟ್ಟದಪುರ ಹೆದ್ದಾರಿ, ಪುರಸಭೆ ಕಟ್ಟಡ ನಿರ್ಮಾಣ, ತಾಲೂಕು ಸಾರ್ವಜನಿಕ ಆಸ್ಪತ್ರೆ, ವಾಲ್ಮೀಕಿ ಭವನಕ್ಕೆ ಚಾಲನೆ ದೊರೆತಿದೆ ಎಂಬುದು ಕೈ ಕಾರ್ಯಕರ್ತರ ಮಾತಾಗಿದೆ.

ಆದರೆ, ಹಾಲಿ ಶಾಸಕ ಕೆ.ಮಹದೇವು 180 ನೂತನ ಶಾಲಾ ಕೊಠಡಿ ನಿರ್ಮಾಣ, ತಾಲೂಕಿಗೆ 2 ಪಬ್ಲಿಕ್ ಶಾಲೆ ಮಂಜೂರಾತಿ, ಪಿರಿಯಾಪಟ್ಟಣ ಹಾಗೂ ಬೆಟ್ಟದಪುರದಲ್ಲಿ ತಲಾ 30.91ಕೋಟಿ ರೂ. ವೆಚ್ಚದ ಆಧುನಿಕ ತಂತ್ರಜ್ಞಾನ ಉಳ್ಳ ಐಟಿಐ ಕಾಲೇಜು ನಿರ್ಮಾಣ, 8ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ, 4ಕೋಟಿ ರೂ. ವೆಚ್ಚದಲ್ಲಿ ಬೆಟ್ಟದಪುರ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ, 10 ನೂತನ ಅಂಗನವಾಡಿ ಕಟ್ಟಡ, ಹಾರನಹಳ್ಳಿ ಹಾಗೂ ಬೆಟ್ಟದಪುರ ಗ್ರಾಮದಲ್ಲಿ ನೂತನ ನಾಡಕಚೇರಿ, 239 ಕೋಟಿ ರೂ ವೆಚ್ಚದಲ್ಲಿ 303 ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ, ಪುರಸಭಾ ವ್ಯಾಪ್ತಿಯಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ, 60 ಮೇಲ್ತೊಟ್ಟಿ ನಿರ್ಮಾಣ, 45 ಕುಡಿಯುವ ನೀರಿನ ಘಟಕ, ಪುರಸಭಾ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ, ಚಪ್ಪರದಹಳ್ಳಿ ಹಾಗೂ ಬೈಲಕುಪ್ಪೆ ಗ್ರಾಮದಲ್ಲಿ ತಲಾ 1.35ಕೋಟಿ ರೂ ವೆಚ್ಚದ ನೂತನ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ರಾವಂದೂರು ಗ್ರಾಮದಲ್ಲಿ 1.50 ಕೋಟಿ ರೂ ವೆಚ್ಚದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ನವೀಕರಣ, ಒಟ್ಟು 8 ವಿದ್ಯುತ್ ಉಪಕೇಂದ್ರಗಳ ಅನುಮೋದನೆ ಕಣಗಾಲು, ಕಂಪಲಾಪುರ, ಕಗ್ಗುಂಡಿ, ಆಯಿತನಹಳ್ಳಿ, ಹುಣಸವಾಡಿ, ಚಿಕ್ಕ ನೇರಳೆ, ಮುತ್ತೂರು, ಪಂಚವಳ್ಳಿ ಅಭಿವೃದ್ಧಿಯಾಯಿತು. ಹೀಗೆ ಒಂದಿಲ್ಲೊಂದು ಯೋಜನೆಯನ್ನು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ನೀಡಿರುವ ಬಗ್ಗೆ ಹಾಗೂ ಇದರ ಬಗ್ಗೆ ಮುಕ್ತ ಚರ್ಚೆಗೆ ಬರುವಂತೆ ತಮ್ಮ ಫೇಸ್‌ ಬುಕ್‌ ಖಾತೆ ಮೂಲಕವೇ ಶಾಸಕರು ಕರೆದಿರುವುದು ಕ್ಷೇತ್ರದ ವಿಶೇಷ.

ಬಿಜೆಪಿಯಲ್ಲೂ ಚುನಾವಣಾ ತಯಾರಿ ಜೋರು:ಇನ್ನು ಕಳೆದ ಬಾರಿ ಬೆಂಗಳೂರು ಮೂಲದ ಮಂಜುನಾಥ್‌ಗೆ ಮಣೆ ಹಾಕಿದ್ದ ಬಿಜೆಪಿ, ಈ ಬಾರಿ ಪ್ರಬಲ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿರುವ ಹಿರಿಯ ನಾಯಕ ಸಿ.ಹೆಚ್​.ವಿಜಯಶಂಕರ್‌ ಅವರಿಗೆ ಟಿಕೆಟ್​ ಖಚಿತ ಎನ್ನಲಾಗುತ್ತಿದೆ. ಒಕ್ಕಲಿಗರಾದ ಕೌದಹಳ್ಳಿ ಸೋಮಶೇಖರ್‌, ವೀರಶೈವ ಸಮುದಾಯದವರಾದ ಬಿಜೆಪಿ ತಾಲೂಕು ಅಧ್ಯಕ್ಷರಾದ ಆರ್‌.ಟಿ.ಸತೀಶ್‌, ಮಾಜಿ ಸೈನಿಕ ವಿಕ್ರಂಗೌಡ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಹುತೇಕ ವಿಜಯಶಂಕರ್‌ಗೆ ಟಿಕೇಟ್‌ ಖಚಿತ ಎನ್ನಲಾಗುತ್ತಿದೆ.

ತಾಲೂಕಿನಲ್ಲಿ ಕಿತ್ತೂರು ಗ್ರಾಮದ ವೈಶಿಷ್ಟ್ಯತೆ:1952ರಿಂದ 2018ರವರೆಗೆ 15 ಚುನಾವಣೆಗಳು ನಡೆದಿದ್ದು, ಈ ಪೈಕಿ 8 ಚುನಾವಣೆಗಳಲ್ಲಿ ಕಿತ್ತೂರು ಗ್ರಾಮದವರೇ ಆಯ್ಕೆಯಾಗಿದ್ದು, ಮಾಜಿ ಶಾಸಕ ದಿ.ಕಾಳಮರೀಗೌಡ ಮತ್ತು ಕ.ವೆಂಕಟೇಶ್ ದಾಯಾದಿಗಳಾಗಿದ್ದರು ಎನ್ನುವುದು ವಿಶೇಷ. ಹಾಗಾಗಿ, ಪಿರಿಯಾಪಟ್ಟಣ ಕ್ಷೇತ್ರ ಜಿಲ್ಲೆಯಲ್ಲಿ ದಾಯಾದಿ ಕಲಹಕ್ಕೆ ಹೆಸರುವಾಸಿಯಾಗಿತ್ತು. ಇನ್ನು ಬಹುತೇಕ ಚುನಾವಣೆಗಳಲ್ಲಿ ಜನತಾ ಪರಿವಾರ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದೆ. ಒಂದೆರಡು ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕೆ.ಮಹದೇವು, ಕಾಂಗ್ರೆಸ್‌ನಿಂದ ಕೆ.ವೆಂಕಟೇಶ್ ಹಾಗೂ ಬಿಜೆಪಿಯಿಂದ ಸಿ.ಹೆಚ್​. ವಿಜಯಶಂಕರ್ ಸ್ಪರ್ಧಿಸಿದರೆ ಮತ್ತೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.

ಮತದಾರ ಮಾಹಿತಿ: 180411 ಒಟ್ಟು ಮತದಾರರನ್ನು ಹೊಂದಿರುವ ಪಿರಿಯಾಪಟ್ಟಣ ವಿಧಾನಸಭಾ ಮತಕ್ಷೇತ್ರದಲ್ಲಿ, 91227 ಪುರುಷರು, 89181 ಮಹಿಳೆಯರು ಹಾಗೂ 3 ಮತಗಳಿವೆ.

ಇದುವರೆಗೆ ಗೆದ್ದವರ ವಿವರ:ಕ್ಷೇತ್ರದಲ್ಲಿಈವರೆಗೆ 15 ಚುನಾವಣೆಗಳು ನಡೆದಿವೆ. ಅದರಲ್ಲಿ ಕಾಂಗ್ರೆಸ್​ 5 ಬಾರಿ ಗೆಲುವು ಬರೆದರೆ, ಪಕ್ಷೇತರ ಎರಡು ಬಾರಿ, ಜನತಾಪಕ್ಷ ಹಾಗೂ ಜನತಾದಳ ಒಂದು ಬಾರಿ, ಜೆಡಿಎಸ್ ಎರಡು ಬಾರಿ ಗೆಲುವು ಸಾಧಿಸಿವೆ. ​ಕಾಂಗ್ರೆಸ್​ ಅಭ್ಯರ್ಥಿಗಳು ಹೆಚ್ಚು ಬಾರಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.

1952 : ಎಸ್.ಎಂ.ಮರಿಯಪ್ಪ (ಪಕ್ಷೇತರ)
1957 : ಎನ್.ಆರ್.ಸೋಮಣ್ಣ (ಕಾಂಗ್ರೆಸ್‌)
1962 : ಕೆ.ಎಂ.ದೇವಯ್ಯ (ಕಾಂಗ್ರೆಸ್‌)
1967 : ಎಚ್.ಎಂ.ಚನ್ನಬಸಪ್ಪ (ಪಕ್ಷೇತರ)
1972 : ಎಚ್.ಎಂ. ಚನ್ನಬಸಪ್ಪ (ಕಾಂಗ್ರೆಸ್‌)
1985 : ಕೆ.ವೆಂಕಟೇಶ್‌ (ಜನತಾಪಕ್ಷ)
1989 : ಕೆ.ಎಸ್‌.ಕಾಳಮರೀಗೌಡ (ಕಾಂಗ್ರೆಸ್‌)
1994 : ಕೆ.ವೆಂಕಟೇಶ್ (ಜನತಾದಳ)
1999 : ಎಚ್.ಸಿ.ಬಸವರಾಜು (ಬಿಜೆಪಿ)
2004 : ಕೆ.ವೆಂಕಟೇಶ್ (ಜೆಡಿಎಸ್‌)
2008 : ಕೆ.ವೆಂಕಟೇಶ್ (ಕಾಂಗ್ರೆಸ್‌)
2013 : ಕೆ.ವೆಂಕಟೇಶ್ (ಕಾಂಗ್ರೆಸ್‌)
2018 : ಕೆ.ಮಹದೇವ್ (ಜೆಡಿಎಸ್‌)

ಇದನ್ನೂ ಓದಿ:ಸಿದ್ದರಾಮಯ್ಯ ಕುಟುಂಬದ ಭದ್ರಕೋಟೆ ವರುಣಾದಲ್ಲಿ ಬಯಲಾಗದ ಬಿಜೆಪಿಯ ತಂತ್ರ!

ABOUT THE AUTHOR

...view details