ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಭಾವ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ನಾನಾ ಸಂಘ ಸಂಸ್ಥೆಗಳು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳು ಆಚಾರ, ವಿಚಾರಕ್ಕೆ ಕುಂದು ಬಾರದಂತೆ ವೈಚಾರಿಕ ವಿಚಾರಗಳಿಂದಲೂ ಹಿಂದೆ ಸರಿಯದಂತೆ ನಡೆದವರು. ದಲಿತರ ಕೇರಿಗೆ ಪಾದಯಾತ್ರೆ, ಸಂಕಷ್ಟದಲ್ಲಿರುವವರಿಗೆ ಸಹಾಯ, ಮುಸ್ಲಿಮರಿಗೆ ವಿಶೇಷ ಆದ್ಯತೆ ನೀಡಿದ ಅವರು ಧರ್ಮ ಎಂದರೆ ಮಾನವೀಯತೆ ಎಂದು ಅರ್ಥಮಾಡಿಕೊಂಡಿದ್ದರು, ಅದರಂತೆ ಬದುಕಿದರು ಎಂದು ಗುಣಗಾನ ಮಾಡಿದರು.
ಪೀಠಾಧಿಪತಿಗಳಿಂದ ಭಾವ ಪುಷ್ಪಾಂಜಲಿ ನಮನ ಕಿರಿಯ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಅವರು ದಣಿವರಿಯದೇ ದೀರ್ಘ ಸೇವೆ ಸಲ್ಲಿಸಿದರು. ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಮೂರ್ತಿಯಿದ್ದರೆ, ಕೃಷ್ಣನ ರೂಪದಲ್ಲಿ ಶ್ರೀಗಳು ನಡೆದಾಡುವ ಕೃಷ್ಣರಾಗಿದ್ದರು. ಶ್ರೀಗಳು ಅಷ್ಟಮಠದಲ್ಲಿಯೇ ಹೊಸ ಅಧ್ಯಾಯ ಬರೆದರು. ಹಿರಿಯರಾಗಿ ಅವರು ನಡೆದು ಬಂದ ಹಾದಿ ಅನುಕರಣೀಯ ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಅವರ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ವಿವಾದದ ಅಂತಿಮ ತೀರ್ಪಿಗಾಗಿ ಶ್ರೀಗಳ ಜೀವ ಕಾದಿತ್ತು ಎನಿಸುತ್ತದೆ. ಸಮಸ್ಯೆ ಬಗೆಹರಿದಾಗ ನಿಟ್ಟುಸಿರು ಬಿಡುವಂತೆ, ಕರ್ತವ್ಯ ಮುಗಿಸಿ ಅವರು ಹೋದರು ಎನಿಸುತ್ತದೆ. ಎಲ್ಲ ಧರ್ಮದವರು, ಬಡವರು, ದಲಿತರು ಹೀಗೆ ಸಮಾಜದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದರು. ಸಂಸ್ಕೃತಿ ಸಂರಕ್ಷಣೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ದೈಹಿಕವಾಗಿ ಸ್ವಾಮೀಜಿ ಅಗಲಿರಬಹುದಷ್ಟೇ, ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದರು.
ಅವಧೂತ ದತ್ತಪೀಠದ ಶ್ರೀ ದತ್ತವಿಜಯಾನಂದತೀರ್ಥ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಅಧ್ಯಕ್ಷ ಶ್ರೀ ಸೋಮನಾಥಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಚಿತ್ರದುರ್ಗ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.