ಮೈಸೂರು: 'ಸರಸ್ವತಿ ಸಮ್ಮಾನ್' ಹಾಗೂ 'ಪದ್ಮಶ್ರೀ' ಪ್ರಶಸ್ತಿ ಪುರಸ್ಕೃತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಅವರ 'ಪರ್ವ' ಕಾದಂಬರಿ ದೇಶ-ವಿದೇಶಗಳಲ್ಲಿ ಜನ ಮನ್ನಣೆಗೊಂಡು ರಷ್ಯಾ ಹಾಗೂ ಚೀನಾ ಭಾಷೆಗೆ ಭಾಷಾಂತರಗೊಂಡಿದೆ.
ಎಸ್.ಎಲ್.ಭೈರಪ್ಪನವರ 'ಪರ್ವ' ಕಾದಂಬರಿ ಚೀನಿ, ರಷ್ಯನ್ ಭಾಷೆಗೆ ಭಾಷಾಂತರ.. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಯಿಂದ ಹೇಳಲಾದ ಈ ಕಾದಂಬರಿ ಚೀನಿ ಹಾಗೂ ರಷ್ಯನ್ ಭಾಷೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಮಾಡಿದೆ. 40 ವರ್ಷದ ಹಿಂದೆ 1979ರಲ್ಲಿ ರಚಿತವಾದ ಪರ್ವ ಕಾದಂಬರಿ 23 ಬಾರಿ ಮರು ಮುದ್ರಣಗೊಂಡು ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ಚೀನಿ ಹಾಗೂ ರಷ್ಯಾ ಭಾಷೆಗೆ ಭಾಷಾಂತರ ಗೊಂಡಿರುವುದು ಭೈರಪ್ಪನವರ ಸಾಹಿತ್ಯ ಅಭಿಮಾನಿಗಳಿಗೆ ಸಂತೋಷ ತಂದಿದೆ.
2019ರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ಭಾರತದ 10 ಕೃತಿಗಳನ್ನು ಇತರ ದೇಶದ ಭಾಷೆಗಳಿಗೆ ಭಾಷಾಂತರಿಸಬೇಕು ಎಂಬ ಹೇಳಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ದೇಶದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಭೈರಪ್ಪ ಅವರ 'ಪರ್ವ' ಕಾದಂಬರಿ ಭಾಷಾಂತರಗೊಂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಭೈರಪ್ಪ, ರಷ್ಯಾ ಮತ್ತು ಚೀನಾ ಭಾಷೆಗಳಿಗೆ 'ಪರ್ವ'ಅನುವಾದ ಗೊಂಡಿರುವುದು ಸಂತಸ ತಂದಿದೆ. ದೇಶ ದೇಶಗಳ ನಡುವೆ ಸಾಹಿತ್ಯದ ಮೂಲಕ ಸಾಂಸ್ಕೃತಿಕ ವಿನಿಮಯ ಆಗುತ್ತಿರುವುದು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯಾಗಲಿದೆ. ರಷ್ಯಾ ಮತ್ತು ಚೀನಾ ದೇಶಗಳಿಂದ ಸಹ ಉತ್ತಮ ಸಾಹಿತ್ಯಗಳು ಹೊರ ಬಂದಿದೆ. ಆ ಸಾಹಿತ್ಯಗಳು-ನಮ್ಮ ದೇಶಕ್ಕೆ ಅನುವಾದಗೊಂಡರೆ, ಅಲ್ಲಿನ ಕಲೆ, ಸಂಸ್ಕೃತಿ ತಿಳಿಯಲು ಸಾಧ್ಯವಾಗಲಿದೆ. ಈ ರೀತಿ ಕಾರ್ಯಗಳು ಹೆಚ್ಚಾದರೆ ಸಾಹಿತಿಗಳಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರ 'ಪರ್ವ' ಕಾದಂಬರಿಯನ್ನು ರಂಗ ಪದ್ಯಗೊಳಿಸಿ ನಂತರ ರಂಗ ಪ್ರದರ್ಶನ ಮಾಡಲು ಮುಂದಾಗಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ 'ಪರ್ವ' ಕಾದಂಬರಿ ಚೀನಾ ಮತ್ತು ರಷ್ಯಾ ಭಾಷೆಗೆ ಅನುವಾದಗೊಂಡಿರುವುದು ಸಂತಸ ತಂದಿದೆ ಎಂದರು.
ಮುಂದಿನ ಜನವರಿಯಲ್ಲಿ ರಂಗಾಯಣ,ಎಸ್.ಎಲ್ ಭೈರಪ್ಪನವರ ಸಾಹಿತ್ಯ ಪ್ರತಿಷ್ಠಾನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮೆ ಸಂಸ್ಥೆಗಳ ಆಶ್ರಯದಲ್ಲಿ ಅನುವಾದಗೊಂಡ ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದರು.