ಮೈಸೂರು: ರಾಜ್ಯದಲ್ಲಿ ಆನ್ಲೈನ್ ತರಗತಿಗಳು ಪಿಯುಸಿವರೆಗೂ ರದ್ದಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದನೇ ತರಗತಿವರೆಗಿನ ಆನ್ಲೈನ್ ಶಿಕ್ಷಣವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಸರ್ಕಾರದ ಈ ನಿಲುವು ಸರಿಯಾಗಿದೆ. ನಾನು ಮೊದಲಿನಿಂದಲೂ ಆನ್ಲೈನ್ ಶಿಕ್ಷಣ ಪದ್ಧತಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ ಎಂದರು.
ನನ್ನ ಪ್ರಕಾರ ಪಿಯುಸಿವರೆಗೂ ಆನ್ಲೈನ್ ಶಿಕ್ಷಣ ರದ್ದು ಮಾಡಬೇಕು. ಶಾಲೆಯಲ್ಲೇ ಮಕ್ಕಳಿಗೆ ಪಾಠ ಮಾಡಬೇಕು ಎಂದ ಅವರು, ಬರುವ ಅಕ್ಟೋಬರ್ವರೆಗೂ ಶಾಲೆಗಳನ್ನು ತೆರೆಯಬಾರದು ಎಂದು ಹೇಳಿದರು.
ಪಿಯುಸಿವರೆಗೂ ಆನ್ಲೈನ್ ತರಗತಿ ರದ್ದಾಗಲಿ ಎಂದ ಸಿದ್ದರಾಮಯ್ಯ ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರವಾಗಿ ರಾಜ್ಯ ಸರ್ಕಾರ ತೀರ್ಮಾನ ಮಾಡಿ, ದೃಢ ನಿರ್ಧಾರ ಕೈಗೊಳ್ಳಬೇಕು. ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಾವು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ, ಈ ಬಗ್ಗೆ ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ ಎಂದರು.
ಇದೇ ವೇಳೆ ಕೋವಿಡ್ ನಿರ್ವಹಣೆ ಮಾಡುವ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಟೀಕಿಸಿದರು.