ಕರ್ನಾಟಕ

karnataka

By

Published : Mar 14, 2023, 5:44 PM IST

ETV Bharat / state

ಮೈಸೂರು: ಅಂಗಡಿ ಮುಂಗಟ್ಟು ಬಂದ್​ ಮಾಡಿ ಹೆಡಿಯಾಲ ಗ್ರಾಮಸ್ಥರಿಂದ ಧ್ರುವನಾರಾಯಣ್​ಗೆ ಶ್ರದ್ಧಾಂಜಲಿ

ನಂಜನಗೂಡಿನ ಹೆಡಿಯಾಲ ಗ್ರಾಮದ ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಅವರಿಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

mysuru: hediala-village-complete-bandh
ಮೈಸೂರು: ಆರ್.ಧ್ರುವನಾರಾಯಣ ಶ್ರದ್ಧಾಂಜಲಿ ಹಿನ್ನಲೆ ಹೆಡಿಯಾಲ ಗ್ರಾಮ ಸಂಪೂರ್ಣ ಬಂದ್

ಮೈಸೂರು: ಆರ್.ಧ್ರುವನಾರಾಯಣ ಶ್ರದ್ಧಾಂಜಲಿ ಹಿನ್ನಲೆ ಹೆಡಿಯಾಲ ಗ್ರಾಮ ಸಂಪೂರ್ಣ ಬಂದ್

ಮೈಸೂರು: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್. ಧ್ರುವನಾರಾಯಣ್​ ಅವರ ಅಗಲಿಕೆ ನೋವನ್ನು ಅಭಿಮಾನಿಗಳಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮರೆಯಲು ಆಗುತ್ತಿಲ್ಲ. ಆದರೆ, ನಂಜನಗೂಡಿನ ಹೆಡಿಯಾಲ ಗ್ರಾಮದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಗ್ರಾಮಸ್ಥರು ಆರ್. ಧ್ರುವನಾರಾಯಣ್ ಅವರಿಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮಿಂಚಿ ಮರೆಯಾದ ರಾಜ್ಯದ ಕಣ್ಮಣಿ ಆರ್. ಧ್ರುವನಾರಾಯಣ ಅವರಿಗೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಿದ್ದಾರೆ. ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ಸಮಯದಲ್ಲಿ ಮಜ್ಜಿಗೆ ಪಾನಕವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ನಂತರ ಗ್ರಾಮ ಪಂಚಾಯತಿ ಸದಸ್ಯ ಗೋವಿಂದರಾಜು ಮಾತನಾಡಿ, ನಮ್ಮ ರಾಜ್ಯದಲ್ಲೇ ಅದ್ಭುತ ರಾಜಕಾರಣಿ ಹಾಗೂ ನಮ್ಮೆಲ್ಲರ ಅಚ್ಚುಮೆಚ್ಚಿನ ಆರ್​ ಧ್ರುವನಾರಾಯಣ ಅವರನ್ನು ಕಳೆದುಕೊಂಡು ಈ ರಾಜ್ಯ ದುಃಖದಲ್ಲಿ ಮುಳುಗಿದೆ. ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ. ಇಂತಹ ಸರಳ ಸಜ್ಜನಿಕೆಯ ರಾಜಕಾರಿಣಿ ನಮಗೆ ಇನ್ನೆಂದು ಸಿಗುವುದಿಲ್ಲ. ಪಕ್ಷಾತೀತವಾಗಿ ಇಂದು ನಾವು ಅವರನ್ನು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಬ್ರಮಣಿ, ಸಾಧಿಕ್, ರವೀಂದ್ರ, ಸಿದ್ದರಾಜು, ನಾರಾಯಣ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ನಂಜನಗೂಡಿನಲ್ಲಿ ಧ್ರುವ ಪುತ್ರನಿಗೆ ಟಿಕೆಟ್ ನೀಡಿ:ನಂಜನಗೂಡು ಮೀಸಲು ಕ್ಷೇತ್ರದಲ್ಲಿ ದಿವಂಗತ ಆರ್. ಧ್ರುವನಾರಾಯಣ್ ಅವರ ಪುತ್ರನಿಗೆ ಟಿಕೆಟ್ ನೀಡಬೇಕು, ಟಿಕೆಟ್ ನೀಡದೇ ಹೋದರೆ ಚುನಾವಣೆಯಲ್ಲಿ ನಾವೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂದು ಪಕ್ಷದ ಕಾರ್ಯಕರ್ತರು ಎಚ್ಚರಿಕೆ ರವಾನಿಸಿದ್ದಾರೆ.

ನಂಜನಗೂಡು ನಗರದ ನಂದಿ ಭವನದಲ್ಲಿ ಧ್ರುವನಾರಾಯಣ್ ಬೆಂಬಲಿಗರು ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರ ನೇತೃತ್ವದಲ್ಲಿ ನಡೆದ ಆರ್. ಧ್ರುವನಾರಾಯಣ್ ಶ್ರದ್ಧಾಂಜಲಿ ಪೂರ್ವಭಾವಿ ಸಭೆಯಲ್ಲಿ ದರ್ಶನ್ ಧ್ರುವನಾರಾಯಣ್‌ಗೆ ಟಿಕೆಟ್ ನೀಡುವಂತೆ ಒಕ್ಕೋರಲಿನ ಆಗ್ರಹ ಕೇಳಿಬಂದಿದೆ.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಆರ್. ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ತುಂಬಾಲಾರದ ನಷ್ಟವಾಗಿದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಭೆಯನ್ನು ನಡೆಸುತ್ತಿದ್ದೇವೆ. ಮಾ.18 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಮಾಡಲಾಗಿದೆ. ಸದ್ಯ ಕಾರ್ಯಕ್ರಮದ ರೂಪುರೇಷೆ, ಕಾರ್ಯಕ್ರಮದ ಸ್ಥಳ ನಿಗದಿಗಾಗಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆಯ ಧ್ರುವನಾರಾಯಣ್ ಬೆಂಬಲಿಗರು ಹಾಗೂ ಪ್ರಮುಖ ಮುಖಂಡರು ಭಾಗಿಯಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕರ್ತರ ಒತ್ತಾಯ: ನಂಜನಗೂಡಿನಲ್ಲಿ ದರ್ಶನ್​ಗೆ ಟಿಕೆಟ್ ಕೊಡುವಂತೆ ಕೈ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ದರ್ಶನ್ ಅವರಿಗೆ ಟಿಕೆಟ್ ನೀಡಬೇಕು. ಗೊಂದಲ ಇದ್ದರೆ ಇಲ್ಲೇ ಬಿಟ್ಟು ಹೋಗಿ ಎಂದು ನಂಜನಗೂಡು ಯೂತ್ ಕಾಂಗ್ರೆಸ್ ಮುಖಂಡ ದೇಬೂರು ಅಶೋಕ್ ಹೇಳಿದ್ದಾರೆ.

ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಬೇಕು ಎಂಬುದು ಧ್ರುವನಾರಾಯಣ್ ಕನಸಾಗಿತ್ತು, ಇದೀಗ ಅವರ ಪುತ್ರನ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಅವರು ಒಪ್ಪಿದರೆ ಅವರ ಪರ ಕೆಲಸ ಮಾಡೋಣ. ನಾವು ನಮ್ಮ ಚೌಕಟ್ಟಿನಲ್ಲೇ ಕೇಳೋಣ. ಯಾರನ್ನು ಟೀಕೆ ಮಾಡುವುದು ಬೇಡ ಎಂದು ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಕೆ. ರವಿ ಕುಮಾರ್​ ಹೇಳಿದರು.

ಇದನ್ನೂ ಓದಿ:ಮಣ್ಣಲ್ಲಿ-ಮಣ್ಣಾದ ಧ್ರುವನಾರಾಯಣ: ಜನನಾಯಕನಿಗೆ ಅಶೃತರ್ಪಣ, ಸ್ನೇಹಿತನಿಗೆ ಹೆಗಲು ಕೊಟ್ಟ ಡಿಕೆಶಿ

ABOUT THE AUTHOR

...view details