ಕರ್ನಾಟಕ

karnataka

ETV Bharat / state

Mysuru Dasara: ಸಾಂಸ್ಕೃತಿಕ ನಗರಿಯಲ್ಲಿ ವಿಜಯದಶಮಿ, ಜಂಬೂ ಸವಾರಿ ಸಂಭ್ರಮಕ್ಕೆ ಕ್ಷಣಗಣನೆ

ಇಂದು ಸಂಜೆ 4.36ರಿಂದ 4.46ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ ಸಂಜೆ 5 ರಿಂದ 5.30ರೊಳಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಅಂಬಾರಿ ಹೊರಲಿರುವ ಆನೆ ಅಭಿಮನ್ಯು ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಹೆಜ್ಜೆ ಹಾಕಲಿವೆ.

By

Published : Oct 15, 2021, 6:27 AM IST

Updated : Oct 15, 2021, 3:33 PM IST

Mysuru dasara jamboo savari today
Musuru Dasara: ಸಾಂಸ್ಕೃತಿಕ ನಗರಿಯಲ್ಲಿ ವಿಜಯದಶಮಿ, ಜಂಬೂ ಸವಾರಿ ಸಂಭ್ರಮ

ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಮನೆ ಮಾಡಿದೆ. ವಿಜಯ ದಶಮಿಯ ಈ ದಿನ ಜಂಬೂ ಸವಾರಿ ನಡೆಯಲಿದೆ. ಅಂಬಾರಿ ಹೊರಲಿರುವ ಆನೆ ಅಭಿಮನ್ಯುವಿನ ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳು ಹೆಜ್ಜೆ ಹಾಕಲಿವೆ. ಒಂದು ತಾಸಿನಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಮೆರವಣಿಗೆ ಮೂಲಕ ಅರಮನೆಗೆ ತರಲಾಗಿದೆ. ಇಂದು ಬೆಳಗ್ಗೆ 8:00 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶ ಮಾಡಿವೆ.

ಅರಮನೆಯ ಧಾರ್ಮಿಕ ಕಾರ್ಯದ ವಿವರ:

ಪಟ್ಟದ ಆನೆ, ಕುದುರೆ, ಹಸುಗಳು, ಒಂಟೆ 5.45ಕ್ಕೆ ಅರಮನೆ ಒಳಾವರಣಕ್ಕೆ ಆಗಮಿಸಿವೆ. 6.13ರಿಂದ 6.32ರವರೆಗೆ ಕಾಸಾ ಆಯುಧಗಳಿಗೆ ಪೂಜಾ ಕೈಂಕರ್ಯ ನಡೆಯಿತು. ನಂತರ ಯದುವೀರ್‌ರಿಂದ ಉತ್ತರ ಪೂಜೆ ನಡೆಸಲಾಯಿತು.

ಚಾಮುಂಡಿ ದೇವಿಯ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗಿದ್ದು, ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಲಾಗಿದೆ. 7.20ರಿಂದ 7.40ರವರೆಗೆ ವಿಜಯ ಯಾತ್ರೆ ನಡೆಯಿತು. ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಮಾಡುತ್ತಾರೆ. ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಈ ಮೆರವಣಿಗೆ ನಡೆಯಿತು.

ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಯದುವೀರ ಒಡೆಯರು ಪೂಜೆ ಮಾಡುವರು. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್​​ ಆಗಿ‌ ಕಂಕಣ ವಿಸರ್ಜನೆ ಮಾಡುವರು. ಬೆಳಗ್ಗೆ 8 ಗಂಟೆಗೆ ಮೈಸೂರು ಅರಮನೆ ದಸರಾ ಕಾರ್ಯಕ್ರಮ ಮುಕ್ತಾಯಗೊಂಡವು.

ಜಂಬೂ ಸವಾರಿ:

ಸಂಜೆ 4.36ರಿಂದ 4.46ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ 5ರಿಂದ 5.30ರೊಳಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಅಂಬಾರಿ ಹೊರಲಿರುವ ಅಭಿಮನ್ಯು ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಹೆಜ್ಜೆ ಹಾಕಲಿವೆ.

ಅರಮನೆ ಬಲಬದಿಯಲ್ಲಿ ಅಂಬಾರಿ ಕಟ್ಟುವ ಜಾಗದಿಂದ ವರಹಾ ದ್ವಾರಕ್ಕೆ ಗಜಪಡೆ ಬರಲಿದ್ದು, ಬಳಿಕ ಪುಷ್ಪಾರ್ಚನೆಗೆ ಅರಮನೆ ಮುಂಭಾಗ ನಿಂತು, ಬಲರಾಮ ದ್ವಾರದ ಕಡೆ ತೆರಳಲಿವೆ. ಅಲ್ಲಿಂದ ಎಡಕ್ಕೆ ತಿರುವು ಪಡೆದು ಅಂಬಾರಿ ಕಟ್ಟುವ ಜಾಗಕ್ಕೆ ತೆರಳಲಿದ್ದು, ಒಂದು ತಾಸಿನಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಕಲಾ ತಂಡಗಳು ಭಾಗಿ:

ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡಗಳು ಪಾಲ್ಗೊಳ್ಳುತ್ತಿದ್ದು, ಮೆರವಣಿಗೆಯ ಆರಂಭದಲ್ಲಿ ನಿಶಾನೆ, ನಂತರ ನೌಪತ್ ಆನೆಗಳು ಹೊರಡಲಿವೆ. ಬಳಿಕ ನಾದಸ್ವರ ಹಾಗೂ ಸ್ಯಾಕ್ಸೋಪೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಮುಂದೆ ಹೋಗಲಿದ್ದಾರೆ. ಅವರ ಹಿಂದೆ ವೀರಗಾಸೆ ಕಲಾವಿದರು ಸಾಗಲಿದ್ದಾರೆ.

ಆ ನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ಧಚಿತ್ರ ಸಾಗಲಿದೆ. ನಂತರ ಕಂಸಾಳೆ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಲಿದ್ದು, ಅದರ ಹಿಂದೆ ಮುಡಾ ಬಹುಮನೆ ಗುಂಪು ವಸತಿ ಸ್ತಬ್ಧಚಿತ್ರ ಸಾಗಲಿದೆ. ನಂತರ ಡೊಳ್ಳುಕುಣಿತ ಕಲಾವಿದರು‌ ಸಾಗಿದರೆ ಅದರ ಹಿಂದೆ ಕೋವಿಡ್ ಸ್ತಬ್ಧ ಚಿತ್ರ, ಬಳಿಕ ನಗಾರಿ, ಪೂಜಾ ಕುಣಿತ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ‌ಸಾಗಲಿದ್ದಾರೆ.‌‌

ಇವರ ಹಿಂದೆಯೇ ಪರಿಸರ ಪ್ರಾಮುಖ್ಯತೆಯ ಸ್ತಬ್ಧಚಿತ್ರ, ಅದರ ಹಿಂದೆ ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ ಸಾಗಲಿದೆ. ನಂತರದಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರ, ಚಂಡೆವಾದನ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ ಅನೆಬಂಡಿ ಅವರನ್ನು ಹಿಂಬಾಲಿಸಲಿದೆ. ಕೊನೆಯದಾಗಿ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಲಿದ್ದಾರೆ.

ಇದನ್ನೂ ಓದಿ:IPL 2021 Final: ಚಾಂಪಿಯನ್​ ಪಟ್ಟಕ್ಕಾಗಿ ದುಬೈನಲ್ಲಿ ಸೂಪರ್ ಕಿಂಗ್ಸ್- ನೈಟ್ ರೈಡರ್ಸ್ ಕಾದಾಟ

Last Updated : Oct 15, 2021, 3:33 PM IST

ABOUT THE AUTHOR

...view details