ಕರ್ನಾಟಕ

karnataka

ETV Bharat / state

ಮೈಸೂರು ದಸರಾ: 'ಅಂಬಾರಿ ಡಬಲ್ ಡೆಕ್ಕರ್' ಬಸ್‌ನಲ್ಲಿ ಕುಳಿತು ಆಕರ್ಷಕ ದೀಪಾಲಂಕಾರ ನೋಡಿ!

ಮೈಸೂರು ದಸರಾ ದೀಪಾಲಂಕಾರ ದರ್ಶನಕ್ಕೆ ಸಿದ್ಧವಾಗಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ ವಿಶೇಷತೆಗಳೇನು ಗೊತ್ತೇ?

By ETV Bharat Karnataka Team

Published : Oct 12, 2023, 9:50 PM IST

Updated : Oct 12, 2023, 10:13 PM IST

ಅಂಬಾರಿ ಡಬಲ್ ಡೆಕ್ಕರ್ ಬಸ್
ಅಂಬಾರಿ ಡಬಲ್ ಡೆಕ್ಕರ್ ಬಸ್

ಮೈಸೂರು ದಸರಾ ದೀಪಾಲಂಕಾರ ದರ್ಶನಕ್ಕೆ ಸಿದ್ಧವಾಗಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್

ಮೈಸೂರು :ಮೈಸೂರು ದಸರಾ ಎಷ್ಟೊಂದು ಸುಂದರ.. ಎಂಬ ಹಾಡಿನಂತೆ ಜಂಬೂಸವಾರಿಯಲ್ಲಿ ಅಂಬಾರಿ ನೋಡಲು ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ಒಂದೆಡೆಯಾದರೆ, ದಸರಾದ ದೀಪಾಲಂಕಾರದಲ್ಲಿ ಪಾರಂಪರಿಕ ನಗರದ ದರ್ಶನ ಪಡೆಯಲು ಬರುವ ಪ್ರವಾಸಿಗರು ಮತ್ತೊಂದೆಡೆ. ಹೀಗಾಗಿ ಸಂಜೆ ವೇಳೆ ದೀಪಾಲಂಕಾರ ದರ್ಶನ ಮಾಡಿಸಲು ಅಂಬಾರಿ ಡಬಲ್ ಡೆಕ್ಕರ್ ಬಸ್​ಗಳ ವ್ಯವಸ್ಥೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಾಡಿದೆ.

ಸದ್ಯ ನಗರದಲ್ಲಿ 6 ಬಸ್​ಗಳು ಸೇವೆಗೆ ಸಿದ್ದವಾಗಿದ್ದು, ಅಕ್ಟೋಬರ್ 15 ರಿಂದ ಅಕ್ಟೋಬರ್ 30 ರ ವರೆಗೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಮೈಸೂರಿನಲ್ಲಿ ಸಿಗಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆರಂಭಿಸಿರುವ ಡಬಲ್ ಡೆಕ್ಕರ್ ಪ್ರತಿ ಬಸ್​ನಲ್ಲಿ 48 ಆಸನಗಳಿದ್ದು, ಕೆಳಗಿನ ಡೆಕ್ಕರ್‌ನಲ್ಲಿ 24 ಆಸನಗಳು ಹಾಗೂ ಮೇಲಿನ ಡೆಕ್ಕರ್‌ನಲ್ಲಿ 24 ಆಸನಗಳಿವೆ.

ಪ್ರತಿ ಟ್ರಿಪ್​ಗೆ ಕೆಳಗಿನ ಡೆಕ್ಕರ್ ಆಸನಕ್ಕೆ ತಲಾ 250 ರೂ ಹಾಗೂ ಮೇಲಿನ ಡೆಕ್ಕರ್ ಆಸನಕ್ಕೆ ತಲಾ 500 ರೂ ನಿಗದಿಪಡಿಸಲಾಗಿದೆ. ಈ ಬಸ್‌ನಲ್ಲಿ ಮೈಸೂರು ನಗರವನ್ನು 1 ಗಂಟೆಗಳ ಕಾಲ ಸುತ್ತಬಹುದು. ಅಕ್ಟೋಬರ್ 15 ರಿಂದ ಪ್ರತಿ ದಿನ ಸಂಜೆ 6, 8, ಮತ್ತು 9 ಗಂಟೆಗೆ ಸಿಟಿ ರೌಂಡ್ಸ್​ಗೆ ಈ ಬಸ್​ಗಳು ಹೋಟೆಲ್ ಮಯೂರ ಹೊಯ್ಸಳದಿಂದ ಹೊರಡಲಿವೆ.

ಬಸ್​ ಸಂಚರಿಸುವ ಮಾರ್ಗಗಳು ಹೀಗಿವೆ:ಮೈಸೂರಿನ ಹೋಟೆಲ್ ಮಯೂರ ಹೊಯ್ಸಳ ಹೊರಡುವ ಬಸ್​ಗಳು ನಗರದ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಾಂಸ್ಕೃತಿಕ ಪಠಶಾಲಾ, ಹಾರ್ಡಿಂಗ್ ಸರ್ಕಲ್, ಕೆ.ಆರ್.ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ವೈದ್ಯಕೀಯ ಕಾಲೇಜು, ರೈಲ್ವೆ ನಿಲ್ದಾಣದಿಂದ ಹಾದು ಹೋಟೆಲ್ ಮಯೂರ ಹೊಯ್ಸಳಕ್ಕೆ ಮರಳಲಿವೆ ಎಂದು ಅಂಬಾರಿ ಬಸ್​ನ ನೌಕರ ರಮೇಶ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಯುವ ದಸರಾ: ಯುವ ದಸರಾ ಅಕ್ಟೋಬರ್ 18 ರಿಂದ ಅಕ್ಟೋಬರ್ 21ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಉದ್ಘಾಟಕರಾಗಿ ನಟ ಶಿವ ರಾಜ್​ಕುಮಾರ್ ಹಾಗೂ ನಾದಬ್ರಹ್ಮ ಹಂಸಲೇಖ ಭಾಗವಹಿಸಲಿದ್ದಾರೆ. ಗಾಯಕ ಸಂಜಿತ್ ಹೆಗ್ಡೆ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಸಮಾರಂಭದಲ್ಲಿ ಗಣ್ಯರಿಗೆ ಸಾಥ್ ನೀಡಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6:30 ರಿಂದ 10:30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಾಧುಕೋಕಿಲ ತಂಡದಿಂದ ಸಂಗೀತ ರಸದೌತಣ ಕಾರ್ಯಕ್ರಮ ಇರಲಿದೆ. ಸ್ಥಳೀಯ ಪ್ರತಿಭೆಗಳ ಜೊತೆಗೆ ಬಾಲಿವುಡ್ ಹಾಡುಗಾರರು ಕೂಡ ಈ ಬಾರಿಯ ಯುವ ದಸರಾದಲ್ಲಿ ಭಾಗವಹಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು ದಸರಾ: ಗಜಪಡೆ, ಅಶ್ವದಳಗಳ ಮೊದಲ ಹಂತದ ಕುಶಾಲತೋಪು ತಾಲೀಮು

Last Updated : Oct 12, 2023, 10:13 PM IST

ABOUT THE AUTHOR

...view details