ಕರ್ನಾಟಕ

karnataka

ಮೈಸೂರು ದಸರಾ: ಮಂಗಳವಾರ ಅರಮನೆಗೆ ಗಜಪಡೆ ಪ್ರವೇಶ: ಸಿದ್ಧತೆ ಹೇಗಿದೆ ಗೊತ್ತಾ?

By ETV Bharat Karnataka Team

Published : Sep 4, 2023, 6:10 PM IST

ಅರಮನೆಗೆ ಗಜಪಡೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಮಾಡಲು ಎಲ್ಲ ಸಿದ್ದತೆ ನಡೆದಿವೆ.

ಅರಮನೆಗೆ ಗಜಪಡೆ ಪ್ರವೇಶ
ಅರಮನೆಗೆ ಗಜಪಡೆ ಪ್ರವೇಶ

ಮೈಸೂರು : ಜಂಬೂಸವಾರಿಯಲ್ಲಿ ಭಾಗವಹಿಸಲು ಅಭಿಮನ್ಯು ನೇತೃತ್ವದ 9 ಗಜಪಡೆ ಮಂಗಳವಾರ ಅರಮನೆಯನ್ನು ಗಜಪಡೆ ಪ್ರವೇಶ ಮಾಡಲಿದ್ದು, ಅವುಗಳ ಸ್ವಾಗತಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 12:01 ರಿಂದ 12:51 ರ ಶುಭ ಅಭಿಜಿತ್ ಲಗ್ನದಲ್ಲಿ ಅರಮನೆಯ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಮಾಡುವ ಮೂಲಕ ಅರಮನೆಗೆ ಗಜಪಡೆ ಪ್ರವೇಶ ಮಾಡಲಿವೆ.

ಅರಣ್ಯ ಭವನದಲ್ಲಿ ಗಜಪಯಣದ ಮೂಲಕ ಆಗಮಿಸಿ ವಾಸ್ತವ್ಯ ಹೂಡಿರುವ, ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಅದರ ಜೊತೆ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ವಿಜಯ, ವರಲಕ್ಷ್ಮಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನಂತರ ಕಾಲ್ನಡಿಗೆಯಲ್ಲಿ ಅರಣ್ಯ ಭವನದಿಂದ ಪೊಲೀಸ್​ ಬಂದೋಬಸ್ತ್ ನಲ್ಲಿ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆ ಆಗಮಿಸಲಿದ್ದು. ಅಲ್ಲಿ ಉಸ್ತುವಾರಿ ಸಚಿವರಾದ ಡಾ. ಹೆಚ್​.ಸಿ ಮಹಾದೇವಪ್ಪ ನೇತೃತ್ವದಲ್ಲಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆ ಪ್ರವೇಶ ಮಾಡಲಿವೆ.

45 ದಿನ ಅರಮನೆಯಲ್ಲಿ ಗಜಪಡೆ ವಾಸ್ತವ್ಯ : ಮಂಗಳವಾರ ಅರಮನೆಗೆ ಆಗಮಿಸಲಿರುವ ಗಜಪಡೆ ಅರಮನೆಯ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ತಾತ್ಕಾಲಿಕ ಷೆಡ್​ಗಳಲ್ಲಿ ಮಾವುತರು ಹಾಗು ಗಜಪಡೆ ​ವಿಶ್ರಾಂತಿ ಪಡೆಯಲಿದ್ದು, ಬುಧವಾರ ಬೆಳಗ್ಗೆ ಎಲ್ಲ ಆನೆಗಳನ್ನು ಆರೋಗ್ಯ ತಪಾಸಣೆ ಮಾಡಿ, ನಂತರ ದೇವಾಲಯದಿಂದ ಧನ್ವಂತರಿ ರಸ್ತೆಯಲ್ಲಿರುವ ವೇ ಬ್ರಿಡ್ಜ್​ ನಲ್ಲಿ ಎಲ್ಲ ಆನೆಗಳ ತೂಕ ಹಾಕಲಾಗುವುದು.

ಬಳಿಕ ಗುರುವಾರದಿಂದ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ಗಜಪಡೆ ತಾಲೀಮು ಆರಂಭವಾಗಲಿದೆ. 15 ದಿನದ ನಂತರ ಎರಡನೇ ಹಂತದಲ್ಲಿ 5 ಆನೆಗಳಾದ ರೋಹಿತ್, ಲಕ್ಷ್ಮಿ, ಹಿರಣ್ಯ, ಪ್ರಶಾಂತ ಹಾಗೂ ಸುಗ್ರೀವ ಅರಮನೆಗೆ ಆಗಮಿಸಿ, ತಾಲೀಮಿನಲ್ಲಿ ಭಾಗವಹಿಸಲಿವೆ. 14 ಆನೆಗಳು ದಸರಾ ತಾಲೀಮಿನಲ್ಲಿ ಭಾಗವಹಿಸಲಿದ್ದು. ದಸರಾ ಹತ್ತಿರವಾಗುತ್ತಿದ್ದಂತೆ ಅಭಿಮನ್ಯು ಸೇರಿದಂತೆ ಇತರ ಮೂರ್ನಾಲ್ಕು ಆನೆಗಳಿಗೆ 750ಕೆಜಿ ತೂಕದ ಮರಳಿನ ಮೂಟೆ ಕಟ್ಟಿ ಮೊದಲಿಗೆ ತಾಲೀಮು ನಡೆಸಲಾಗುತ್ತದೆ. ಆನಂತರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಿದ್ದಾರೆ. ದಸರಾ ಹತ್ತಿರವಾಗುತ್ತಿದ್ದಂತೆ ಗಜಪಡೆಗೆ ಹಾಗೂ ಅಶ್ವಪಡೆಗೆ ಸಿಡಿಮದ್ದು ತಾಲೀಮನ್ನು ನಡೆಸಲಾಗುವುದು. ಆ ಮೂಲಕ ಗಜಪಡೆಯನ್ನು ಜಂಬೂಸವಾರಿಗೆ ಸನ್ನದ್ಧಗೊಳಿಸಲಾಗುವುದು.

ಡಿಸಿಎಫ್ ಹೇಳಿಕೆ : ನಾಳಿನ ಗಜಪಡೆಯ ಸ್ವಾಗತಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ಆನೆಗಳು ಆರೋಗ್ಯವಾಗಿದ್ದು, ಮೊದಲು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಅರಣ್ಯ ಇಲಾಖೆಯಿಂದ ಪೂಜೆ ಸಲ್ಲಿಸಿ ಅರಮನೆಗೆ ಕಳಿಸಲಾಗುತ್ತದೆ. ಅರಮನೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಮಾಡಲಾಗುತ್ತದೆ ಎಂದು ಡಿಸಿಎಫ್ ಸೌರವ್ ಕುಮಾರ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.

ಇದನ್ನೂ ಓದಿ :ಮೈಸೂರು ದಸರಾ: ನಾಳೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ

ABOUT THE AUTHOR

...view details