ಕರ್ನಾಟಕ

karnataka

ETV Bharat / state

ಎಸ್‌ಎಸ್‌ಎಲ್​ಸಿ ಪರೀಕ್ಷೆ ಕೇಂದ್ರದಲ್ಲಿನ ಬದಲಾವಣೆಗೆ ಎಂಎಲ್‌ಸಿ ಮರಿತಿಬ್ಬೇಗೌಡ ಅಸಮಾಧಾನ - ಎಂಎಲ್‌ಸಿ ಮರಿತಿಬ್ಬೇಗೌಡ ಅಸಮಾಧಾನ

ಎಸ್‌ಎಸ್‌ಎಸ್‌ಸಿ ಪರೀಕ್ಷೆ ಕೇಂದ್ರದಲ್ಲಿನ ಬದಲಾವಣೆಗೆ ಎಂಎಲ್‌ಸಿ ಮರಿತಿಬ್ಬೇಗೌಡ ಅಸಮಾಧಾನ ಹೊರಹಾಕಿದ್ದಾರೆ.

MLC Marithibbe Gowda
ಎಂಎಲ್‌ಸಿ ಮರಿತಿಬ್ಬೇಗೌಡ

By ETV Bharat Karnataka Team

Published : Nov 11, 2023, 6:07 PM IST

ಮೈಸೂರು:ಎಸ್ಎಸ್ಎಲ್​ಸಿ ಪರೀಕ್ಷಾ ಮಂಡಳಿ ಮುಂದಿನ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಗುಣಾತ್ಮಕ ಪರೀಕ್ಷೆಯ ಹೆಸರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ತಾಲೂಕಿನಲ್ಲಿ ಪ್ರಸ್ತುತ ಅಂದಾಜು 15-18 ಪರೀಕ್ಷಾ ಕೇಂದ್ರಗಳಿರುವಲ್ಲಿ ಅದನ್ನು 5 ರಿಂದ 7 ಪರೀಕ್ಷಾ ಕೇಂದ್ರಗಳನ್ನಾಗಿ ಪರಿವರ್ತಿಸಿ, ಒಂದು ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 800 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದರು.

ಈ ರೀತಿ ಶಿಕ್ಷಕರನ್ನು ಅಪಮಾನಗೊಳಿಸುವುದು ಅತ್ಯಂತ ಖಂಡನೀಯ, ಕನಿಷ್ಠ 5 ರಿಂದ 8 ಕಿಮೀ ದೂರದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ಇರುವ ತೊಂದರೆಗಳನ್ನು ಗಮನಿಸದೇ ಇರುವುದು ಅತ್ಯಂತ ಶೋಚನೀಯ ಸಂಗತಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪರೀಕ್ಷೆ ಬರೆಯುಂತಾಗಲಿದೆ. ಈ ರೀತಿ ಬದಲಾವಣೆಯ ಚಿಂತನೆ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಆಗಲಿದೆ. ಈ ಎರಡೂ ನಿರ್ಧಾರ ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಅಕ್ರಮ ನಡೆಯುವ ಪರೀಕ್ಷಾ ಕೇಂದ್ರಗಳ ಬಗ್ಗೆ ಇಲಾಖೆಗೆ ಮಾಹಿತಿ ಇರುತ್ತದೆ. ಅಂತಹ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ದಕ್ಷ ಅಧಿಕಾರಿಗಳನ್ನು ನೇಮಿಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು, ಶಿಕ್ಷಕರನ್ನು ಸಂಶಯಾಸ್ಪದವಾಗಿ ನೋಡುವುದು, ಇಡೀ ಸಮಾಜವೇ ತಲೆತಗ್ಗಿಸುವಂತಾಗುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಾರ್ಯವನ್ನು ಸಂಬಂಧಪಟ್ಟ ಜಿಲ್ಲೆಯ ಜಿಪಂ ಸಿಇಒ ಮತ್ತು ಸಂಬಂಧಪಟ್ಟ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಮೇಲುಸ್ತುವಾರಿಗೆ ಒಳಪಡಿಸುವಂತೆ ಸರಕಾರ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ ಎಂದರು.

ಪಂಚಾಯತ್ ರಾಜ್ ಇಲಾಖೆಯ ಕಾರ್ಯ ನಿರ್ವಹಣೆಯೇ ಕಷ್ಟ ಸಾಧ್ಯವಾಗಿದ್ದು, ಅದರ ಅಧಿಕಾರಿಗಳಿಗೆ ಹೆಚ್ಚುವರಿಯಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ವಹಿಸುವುದರಿಂದ, ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಶೀಘ್ರ ಆಡಳಿತ ನಿರ್ವಹಣೆಗೆ ತುಂಬಾ ತೊಂದರೆ ಉಂಟಾಗುತ್ತದೆ. ಇಂತಹ ನಿರ್ಧಾರಗಳಿಂದ ಉತ್ತಮ ವ್ಯವಸ್ಥೆಯಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವವೇ ಹಾಳಾಗುತ್ತದೆ ಎಂದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸದರಿ ಸುತ್ತೋಲೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ನ. 23 ರಂದು ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ನಡೆಸುವ ಚಳವಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಜಯರಾಮ್ ಕಿಲಾರ ಉಪಸ್ಥಿತರಿದ್ದರು.

ಇದನ್ನೂ ಓದಿ:ಎಸ್ಎಸ್ಎಲ್​ಸಿ, ದ್ವಿತೀಯ ಪಿಯುಸಿಗೆ 3 ವಾರ್ಷಿಕ ಪರೀಕ್ಷೆ: ಮಾರ್ಗಸೂಚಿಗಳು ಹೀಗಿವೆ..

ABOUT THE AUTHOR

...view details