ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವು ಮಾಜಿ ಸಚಿವರು, ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಪರೋಕ್ಷವಾಗಿ ಸಚಿವನಾಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಮೈಸೂರು ಭಾಗಕ್ಕೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ನೀಡದೇ ಇರುವುದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲಿ ಮೈಸೂರು ಭಾಗಕ್ಕೆ ಸಚಿವ ಸ್ಥಾನ ಪ್ರಾತಿನಿಧ್ಯ ಸಿಕ್ಕಿಲ್ಲ. ರಾಮದಾಸ್ ಅವರೂ ಇದ್ದಾರೆ. ನಾವೂ ಬಹಳ ವರ್ಷಗಳಿಂದ ಪಕ್ಷದಲ್ಲಿದ್ದೇವೆ, ನಮಗೂ ಅವಕಾಶ ಸಿಕ್ಕಿಲ್ಲ ಎಂದು ಸಚಿವ ಸ್ಥಾನ ಇಂಗಿತ ವ್ಯಕ್ತಪಡಿಸಿದರು.
ಯಾರಿಗೆಲ್ಲ ಸಮಸ್ಯೆ ಆಗಿದೆಯೋ ಅವರೆಲ್ಲಾ ರಾಷ್ಟ್ರೀಯ ಅಧ್ಯಕ್ಷರನ್ನೊ, ರಾಜ್ಯಾಧ್ಯಕ್ಷರನ್ನೋ ಭೇಟಿ ಮಾಡಿ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪನವರೇ ತಿಳಿಸಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಯಾರು ಬೇಕಾದರೂ ಭೇಟಿ ಮಾಡಬಹುದು, ಎಲ್ಲರಿಗೂ ಅವಕಾಶವಿದೆ ಎಂದು ನಾಗೇಂದ್ರ ಹೇಳಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ವಿಶ್ವನಾಥ್ ಬಹಿರಂಗ ಅಸಮಾಧಾನ ವಿಚಾರವಾಗಿ ಮಾತನಾಡಿ, ಹೆಚ್. ವಿಶ್ವನಾಥ್ ಅವರು ಹಿರಿಯ ರಾಜಕಾರಣಿ, ಅವರಿಗೆ ಏನೂ ಹೇಳುವ ಅವಶ್ಯಕತೆ ಇಲ್ಲ. ಅವರಿಗೆ ನಮ್ಮ ಪಕ್ಷದ ಸಿದ್ಧಾಂತ ಗೊತ್ತಿಲ್ಲ. ಅವರು ಬೇರೆ ಬೇರೆ ಪಕ್ಷಗಳಿಗೆ ಹೋಗಿ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲದ್ದಕ್ಕೂ ಶಿಸ್ತು ಎನ್ನುವುದಿದೆ. ಎಲ್ಲವನ್ನೂ ರಾಜ್ಯದ ಜನತೆಗೆ ಹೇಳುವ ಅವಶ್ಯಕತೆ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ, ನಾಲ್ಕು ಗೋಡೆಗಳ ಮಧ್ಯದಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದರು.
ಓದಿ:ದಾವಣಗೆರೆಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಿದ್ದೇಶ್ವರ್ ಅವರನ್ನೇ ಕೇಳಿ: ಶಾಮನೂರು ಶಿವಶಂಕರಪ್ಪ