ಮೈಸೂರು:ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಬಿನಿ ಜಲಾನಯದ ವ್ಯಾಪ್ತಿಗೆ ಬರುವ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಆಗಸ್ಟ್ 5ರಿಂದ ಕಬಿನಿ ಜೊತೆಗೆ ಹುಲ್ಲಹಳ್ಳಿ ಅಣೆಕಟ್ಟು ನಾಲೆಗಳಾದ ಹುಲ್ಲಹಳ್ಳಿ ನಾಲೆ ಮತ್ತು ರಾಂಪುರ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಲೆಗಳಿಗೆ ಹರಿಸುವ ನೀರನ್ನು ಕೆರೆ-ಕಟ್ಟೆಗಳನ್ನು ತುಂಬಿಸಲು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸಬೇಕು. ರೈತ ಬಾಂಧವರು ಕಬಿನಿ ನಾಲೆಗಳ ನೀರನ್ನು ಅವಲಂಬಿಸಿ ಯಾವುದೇ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಇಲಾಖೆಯವರು ಜವಾಬ್ದಾರರಲ್ಲ. ಮುಂದಿನ ದಿನಗಳಲ್ಲಿ ನೀರಿನ ಒಳಹರಿವು ಆಧರಿಸಿ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಬಿನಿ ಜಲಾಶಯದ ಮುಖ್ಯ ಎಂಜಿನಿಯರ್ ಕಚೇರಿ ಹಾಗೂ ಕಾಡಾ ಕಚೇರಿ ಮುಂದೆ ಜಲಾಶಯಗಳ ಮೂಲಕ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರ ಪ್ರತಿಭಟನೆ ನಡೆಸಿದ್ದರು. ಇವರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತು ನೀರು ಹರಿಸಲು ಮುಂದಾಗಿದೆ.