ಮೈಸೂರು :ಗೀತಾ ಜಯಂತಿ ಪ್ರಯುಕ್ತ ಮೈಸೂರಿನ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರಗಳ ಸಂಪೂರ್ಣ ಭಗವದ್ಗೀತಾ ಪಾರಾಯಣ ಮಹಾಯಜ್ಞಕ್ಕೆ ಭಾನುವಾರ ಸಹಸ್ರಾರು ಭಕ್ತರು ಸಾಕ್ಷಿಯಾದರು. ಸಹಸ್ರಗಳ ಪಾರಾಯಣ ಯಜ್ಞ ಆಶ್ರಮದ ನಾದಮಂಟಪದಲ್ಲಿ ಜರುಗಿತು.
ಈ ಬೃಹತ್ ಕಾರ್ಯಕ್ರಮಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದರು. ಗೀತೆಯನ್ನು ಕಂಠಪಾಠ ಮಾಡಿರುವ 1600 ಮಂದಿ ಹಾಗೂ ಭಗವದ್ಗೀತೆ ಗ್ರಂಥ ನೋಡಿ ಸುಲಲಿತವಾಗಿ ಪಾರಾಯಣ ಮಾಡುವ ಸುಮಾರು 2000 ಮಂದಿ ಸೇರಿ ಒಟ್ಟು 3600 ಮಂದಿ ಏಕಕಾಲದಲ್ಲಿ ಭಗವದ್ಗೀತೆ ಪಾರಾಯಣ ಮಾಡಿದರು.
ಮೈಸೂರು : ಸಾವಿರಾರು ಭಕ್ತರಿಂದ ಭಗವದ್ಗೀತಾ ಪಾರಾಯಣ ದತ್ತಪೀಠವು ಉಚಿತ ಆನ್ ಲೈನ್ ಗೀತಾ ತರಗತಿಗಳನ್ನು ನಡೆಸುತ್ತಿದೆ. ಪೀಠದ ವತಿಯಿಂದ ನಡೆಸುತ್ತಿರುವ ಭಗವದ್ಗೀತಾ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದವರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಚಿನ್ನದ ಪದಕಗಳನ್ನು ನೀಡಿ ಗೌರವಿಸಿದರು. ನಂತರ ನಾದಮಂಟಪದಲ್ಲಿ ಗೀತಾ ಪಾರಾಯಣ ನಡೆಯುವಾಗ ಶ್ರೀಗಳು ಪ್ರತಿ ಸಾಲಿಗೂ ಹೋಗಿ ಒಬ್ಬೊಬ್ಬರ ಮೇಲೂ ಪುಷ್ಪವೃಷ್ಟಿ ಮಾಡಿ ಆಶೀರ್ವದಿಸಿದರು.
4 ವರ್ಷದಿಂದ ಹಿಡಿದು 80 ವರ್ಷದವರಗಿವರೆಲ್ಲ ಗೀತೆಯನ್ನು ನಿರರ್ಗಳವಾಗಿ ಪಠಿಸಿದರು. ಗೀತೆಯನ್ನು ಪೂರ್ಣವಾಗಿ ಕಂಠಸ್ಥ ಮಾಡಿರುವ ಆರು ವರ್ಷದ ವಿಷ್ಣುದತ್ತ ಹಾಗೂ 75 ವರ್ಷದ ಎಸ್.ವಿ.ಪಿ.ಸತ್ಯನಾರಾಯಣ ಮೂರ್ತಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಭಗವದ್ಗೀತೆಯು ಭಾರತದ ಸನಾತನ ಧರ್ಮದ ಪವಿತ್ರ ಗಂಥವಾಗಿದ್ದು ಅತ್ಯಂತ ಮೌಲ್ಯವುಳ್ಳದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿ ದಿನ ಭಗವದ್ಗೀತೆಯ ಒಂದು ಅಧ್ಯಾಯ ಓದಬೇಕು ಅಥವಾ ಕನಿಷ್ಠ ಪಕ್ಷ ಒಂದು ಶ್ಲೋಕವನ್ನಾದರೂ ಪಠಣ ಮಾಡಬೇಕು. ಇದು ನಮ್ಮ ಕರ್ತವ್ಯವಾಗಬೇಕು. ಆಡಂಬರಕ್ಕಾಗಿ ಗೀತೆಯನ್ನು ಓದಬಾರದು. ಭಕ್ತಿ,ಶ್ರದ್ಧೆಯಿಂದ ಪಾರಾಯಣ ಮಾಡಬೇಕು, ಯಾವುದೇ ವಿಷಯಾಸಕ್ತರಾಗದೆ ಭಕ್ತಿಯಿಂದ ಅಭ್ಯಾಸ ಮಾಡಬೇಕು ಎಂದರು. ಭಗವದ್ಗೀತೆಯನ್ನು ತೋರಿಕೆಗಾಗಿ ಅಧ್ಯಯನ ಮಾಡಿದರೆ ಪ್ರಯೋಜನವಿಲ್ಲ, ಅದರಲ್ಲಿ ಶ್ರೀ ಕೃಷ್ಣ ಬೋಧಿಸಿರುವುದನ್ನು ಮನನ ಮಾಡಿಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಬೇಕು. ಆಗ ಮಾತ್ರ ಪರಮಾತ್ಮ ಕೈಬಿಡದೆ ನಿಮ್ಮ ರಕ್ಷಣೆಗೆ ನಿಲ್ಲುತ್ತಾನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಇಲ್ಲಿ ನಡೆದಿರುವ ಗೀತಾಜಯಂತಿ ಮತ್ತೆಲ್ಲೂ ನಡೆಯಲು ಸಾಧ್ಯವೇ ಇಲ್ಲ, ಅಷ್ಟು ಅದ್ಭುತವಾಗಿ ನಡೆದಿದೆ. ಭಗವದ್ಗೀತೆಯನ್ನು ಪೂಜೆ ಮಾಡಿ ಶೆಲ್ಫ್ ನಲ್ಲಿಟ್ಟರೆ ಪ್ರಯೋಜನವಿಲ್ಲ, ಪ್ರತಿ ದಿನ ಓದಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ :ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಪುಣ್ಯಟ್ಟ ಕಣಗಾಲ್ ಮರೆಯದ ಹೆಸರು: ಡಾ. ಮಹೇಶ ಜೋಶಿ