ಕರ್ನಾಟಕ

karnataka

ETV Bharat / state

ಆಟೋದಲ್ಲಿ ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಮೂವರು ಪೊಲೀಸ್‌ ವಶಕ್ಕೆ - ಎನ್​ಐಎ ಮಧ್ಯರಾತ್ರಿವರೆಗೆ ತಪಾಸಣೆ

ಮಂಗಳೂರಿನಲ್ಲಿ ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

NIA inspection till midnight
ಮಧ್ಯರಾತ್ರಿವರೆಗೆ ಎನ್​ಐಎ ತಪಾಸಣೆ.. ಮೂವರು ವಶಕ್ಕೆ

By

Published : Nov 21, 2022, 12:19 PM IST

ಮೈಸೂರು: ಮಂಗಳೂರಿನಲ್ಲಿ ಇತ್ತೀಚೆಗೆ ಆಟೋವೊಂದರಲ್ಲಿ ನಡೆದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ವಾಸವಿದ್ದ ಶಂಕಿತನ ಕೊಠಡಿಯನ್ನು​ ಕಳೆದ ಮಧ್ಯರಾತ್ರಿಯವರೆಗೆ ತಪಾಸಣೆ ನಡೆಸಿರುವ ತನಿಖಾಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ತನಿಖೆಯ ಜಾಡು ಹಿಡಿದು..: ಶಂಕಿತ ಆರೋಪಿ ಶಾರಿಕ್ ಮೈಸೂರಿನ ಲೋಕನಾಯಕ್ ನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಅಲ್ಲಿ ಸ್ಫೋಟಕ ವಸ್ತುಗಳನ್ನು ತಯಾರು ಮಾಡಿ ಕುಕ್ಕರ್​ನಲ್ಲಿ ಇಟ್ಟುಕೊಂಡು ಬಸ್ಸಲ್ಲಿ ಮಂಗಳೂರಿಗೆ ತೆರಳಿದ್ದಾನೆ. ಆ ಬಳಿಕ ಅಲ್ಲಿ ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಹೋಗುವಾಗ ಕುಕ್ಕರ್ ಮಾದರಿಯ ವಸ್ತು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರಲ್ಲಿ ಶಂಕಿತನೂ ಗಾಯಗೊಂಡು ಆಸ್ಪತ್ರೆ ಸೇರಿದ್ದ.

ಈ ಘಟನೆಯ ಬೆನ್ನು ಹತ್ತಿದ ಮಂಗಳೂರು ಪೊಲೀಸರು ಶಂಕಿತ ವಾಸವಿದ್ದ ಮೈಸೂರಿನ ಲೋಕನಾಯಕ್ ನಗರದ ಮನೆಯ ಮೇಲೆ ದಾಳಿ ಮಾಡಿದ್ದರು. ಬಾಂಬ್ ಪತ್ತೆ ದಳ ಹಾಗೂ ಎಫ್ಎಸ್ಎಲ್ ತಂಡ ಶಂಕಿತ ವಾಸವಿದ್ದ ಕೊಠಡಿ ಪರಿಶೀಲಿಸಿದಾಗ ಸ್ಫೋಟಕಗಳನ್ನು ತಯಾರು ಮಾಡುವ ವಸ್ತುಗಳಿರುವುದು ಗೊತ್ತಾಗಿದೆ.

ಶಂಕಿತ ಶಾರಿಕ್​ಗೆ ಮೊಬೈಲ್ ರಿಪೇರಿ ಹಾಗೂ ಕಡಿಮೆ ಬೆಲೆಗೆ ಬೇಸಿಕ್ ಮೊಬೈಲ್​ಗಳನ್ನು ಸರಬರಾಜು ಮಾಡುತ್ತಿದ್ದ ಟಿ.ನರಸೀಪುರದ ಸೈಯದ್ ಹಾಗೂ ಮಂಡಿ ಮೊಹಲ್ಲಾದ ವ್ಯಕ್ತಿ ಹಾಗೂ ಮನೆ ಮಾಲೀಕನನ್ನು ಮಂಗಳೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ ರಾಷ್ಟ್ರೀಯ ತನಿಖಾ ದಳ, ಶಂಕಿತ ವಾಸವಿದ್ದ ಮನೆಯ ಮೇಲಿನ ಕೊಠಡಿಯನ್ನು ಮತ್ತೊಮ್ಮೆ ಮಧ್ಯರಾತ್ರಿಯವರೆಗೆ ತಪಾಸಣೆ ನಡೆಸಿದ್ದು, ಮಂಗಳೂರು ಪೊಲೀಸರು ವಶಕ್ಕೆ ಪಡೆದ ಮೂವರನ್ನು ಎನ್​ಐಎ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details