ಕರ್ನಾಟಕ

karnataka

By

Published : Jun 3, 2022, 7:17 AM IST

ETV Bharat / state

ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ ಬದಲಿಸಿ ವಂಚಿಸುತ್ತಿದ್ದ ಕಟ್ಟಡ ಕಾರ್ಮಿಕ ಅರೆಸ್ಟ್​

ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಬರುತ್ತಿದ್ದವರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನ ನಂಬಿಸಿ, ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..

ಎಟಿಎಂ
ಎಟಿಎಂ

ಮೈಸೂರು: ಹಣ ಬಿಡಿಸಲು ಎಟಿಎಂ ಕೇಂದ್ರಕ್ಕೆ ಬರುತ್ತಿದ್ದ ವಯಸ್ಸಾದವರು ಹಾಗೂ ಎಟಿಎಂ ಬಳಕೆ ತಿಳಿಯದವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಖದೀಮನನ್ನು ಕೆ.ಆರ್‌.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎಸ್​ಪಿ ಆರ್‌‌.ಚೇತನ್, ಎಟಿಎಂ ಕೇಂದ್ರಕ್ಕೆ ಬರುತ್ತಿದ್ದ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನ ನಂಬಿಸಿ, ಅವರಿಗೆ ಬೇರೆ ಕಾರ್ಡ್​ ಕೊಟ್ಟು ವಂಚಿಸುತ್ತಿದ್ದ ಮೈಸೂರಿನ 30 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ. ಈತನಿಂದ 7 ನಕಲಿ ಎಟಿಎಂ ಕಾರ್ಡ್, 12 ಸಾವಿರ ನಗದು, 3 ಗ್ರಾಂ ಚಿನ್ನ, ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು‌.

ಪ್ರಕರಣ ಕುರಿತು ಮಾಹಿತಿ ನೀಡಿದ ಎಸ್​ಪಿ ಆರ್‌‌.ಚೇತನ್

2022ರ ಫೆ.2ರಂದು ಸುನಂದಬಾಯಿ ಹಾಗೂ ಮೇ 4ರಂದು ತಿಮ್ಮಶೆಟ್ಟಿ ಎಂಬುವರಿಗೆ ಕೆ.ಆರ್.ನಗರ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನನ್ನ ಎಟಿಎಂ ಕಾರ್ಡ್ ಕೆಲಸ ನಿರ್ವಹಿಸುತ್ತಿಲ್ಲವೆಂದು ನೆಪ ಹೇಳಿ, ಇಬ್ಬರ ಎಟಿಎಂ ಪಡೆದು ನಕಲಿ ಕಾರ್ಡ್ ನೀಡಿ ಹಣ ಡ್ರಾ ಮಾಡಿದ್ದಾನೆ. ವಂಚನೆಗೊಳಗಾದ ಇವರಿಬ್ಬರೂ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಬೇಧಿಸಲು ಕೆ.ಆರ್.ನಗರ ಠಾಣೆ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಈ ತಂಡ ಎಟಿಎಂ ಕೇಂದ್ರಗಳ ಬಳಿ ಸಿಬ್ಬಂದಿ ನೇಮಿಸಿ ಅನುಮಾನಾಸ್ಪದ ವ್ಯಕ್ತಿಗಳನ್ನ ಪರಿಶೀಲಿಸುತ್ತಿರುವಾಗ ಮೇ 30ರಂದು ಕೆ.ಆರ್.ನಗರದ ಬಸ್ ನಿಲ್ದಾಣದ ಒಳಗಡೆ ಇರುವ ಕರ್ನಾಟಕ ಬ್ಯಾಂಕ್‍ ಎಟಿಎಂ ಕೇಂದ್ರದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ.

ಆರೋಪಿ ಕಟ್ಟಡ ಕಾರ್ಮಿಕನೆಂದು ತಿಳಿಸಿದ್ದಾನೆ. ಈತನ ವಿರುದ್ಧ ಕೆ.ಆರ್.ನಗರ ಠಾಣೆಯಲ್ಲಿ 3, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತೆ ಉಗ್ರರ ಗುಂಡಿನ ದಾಳಿ: ಇಬ್ಬರು ನಾಗರಿಕರಿಗೆ ಗಾಯ

ABOUT THE AUTHOR

...view details