ಕರ್ನಾಟಕ

karnataka

ETV Bharat / state

ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರನ್ನ ಸೆಳೆಯಲು ಸಿದ್ಧತೆ ನಡೆಸುತ್ತಿದೆಯಾ ಬಿಜೆಪಿ!?

ಹಳೆ ಮೈಸೂರು ಭಾಗಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲವಾಗಿವೆ. ಅಲ್ಲದೇ ರಹಸ್ಯ ಸಮೀಕ್ಷೆಯೊಂದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎಂಬ ಮಾಹಿತಿ ಹೊರ ಬಂದಿದೆ. ಹೀಗಾಗಿ, ಬಿಜೆಪಿ ಇತರ ಪಕ್ಷದ ಪ್ರಭಾವಿ ನಾಯಕರನ್ನ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗ್ತಿದೆ..

By

Published : May 16, 2022, 5:58 PM IST

ಬಿಜೆಪಿ
ಬಿಜೆಪಿ

ಮೈಸೂರು :ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನ ಬಲಪಡಿಸಲು ಇತರ ಪಕ್ಷದ ಪ್ರಭಾವಿ ನಾಯಕರನ್ನ ಸೆಳೆಯಲು ಬಿಜೆಪಿ ಮಾಸ್ಟರ್‌ಪ್ಲ್ಯಾನ್ ಹಾಕಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಷ್ಟೊಂದು ಪ್ರಬಲವಾಗಿಲ್ಲ. ಈ ಭಾಗದ ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲವಾಗಿವೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಈ ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್​ನ ಮುಖಂಡರನ್ನ ಸೆಳೆಯಲು ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಹಲವು ಸುತ್ತಿನ ಮಾತುಕತೆಗಳು ಸಹ ನಡೆದಿವೆ.

ಸುಳಿವು ನೀಡಿದ ಸಚಿವ ಎಸ್ ಟಿ ಸೋಮಶೇಖರ್ :ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸೇರಲು ಐದಾರು ಮಂದಿ ಘಟಾನುಘಟಿ ನಾಯಕರುಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಅನುಮತಿ ಪಡೆದ ನಂತರ 2ನೇ ಹಂತದ ಆಪರೇಷನ್ ನಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಎರಡೂ ಪಕ್ಷದಿಂದ ದೊಡ್ಡ ನಾಯಕರೇ ಬಿಜೆಪಿಗೆ ಬರಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ. ನಂತರ ಯಾರ್ಯಾರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆಗಳು ಈಗ ಆರಂಭ ಆಗಿವೆ.

ಈ ನಡುವೆ ಮೊನ್ನೆ ಮಾಧ್ಯಮಗಳ ಜೊತೆ ಮಾತನಾಡುತ್ತ ಬಿಜೆಪಿ ಶಾಸಕ ಎಲ್. ನಾಗೇಂದ್ರ, ಶಾಸಕ ಜಿ.ಟಿ. ದೇವೇಗೌಡರು ಬಿಜೆಪಿ ಪಕ್ಷಕ್ಕೆ ಬರುವುದಾದರೆ ಅವರ ಮಗನಿಗೆ ನನ್ನ ಚಾಮರಾಜ ಕ್ಷೇತ್ರವನ್ನ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ ಎಂದಿದ್ದರು. ಈ ಹೇಳಿಕೆ ಬಂದ ನಂತರ ಹಳೇ ಮೈಸೂರು ಭಾಗದಲ್ಲಿ ಯಾರ್ಯಾರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆಗಳು ಆರಂಭ ಆಗಿವೆ.

ಶಾಸಕ ಜಿ.ಟಿ ದೇವೇಗೌಡ ಬಿಜೆಪಿ ಸೇರ್ತಾರಾ?:ಚಾಮುಂಡೇಶ್ವರಿ ಕ್ಷೇತ್ರದ ಜೆಡಿಸ್ ಶಾಸಕ ಜಿ.ಟಿ. ದೇವೇಗೌಡ ಈಗಾಗಲೇ ಜೆಡಿಎಸ್​ನಿಂದ ದೂರ ಇದ್ದಾರೆ. ಅವರು ಹಾಗೂ ಅವರ ಮಗ ಜಿ.ಟಿ. ಹರೀಶ್ ಗೌಡ ಕಾಂಗ್ರೆಸ್ ಸೇರಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಜಿ.ಟಿ ದೇವೇಗೌಡ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ನಡೆದಿದ್ದವು.

ಇದನ್ನೂ ಓದಿ:ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಆರೋಪ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ, ಆಕ್ರೋಶ

ಆದರೆ, ಉತ್ತರ ಭಾರತದ ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ಸೋತಿದೆ. ಅಲ್ಲದೇ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜಿ.ಟಿ ದೇವೇಗೌಡ ಅವರನ್ನ ಒಪ್ಪುವುದು ಕಷ್ಟವಾಗಿದೆ. ಇದರ ಜೊತೆಗೆ ಅವರ ಮಗ ಜಿ.ಡಿ. ಹರೀಶ್ ಗೌಡರ ರಾಜಕೀಯ ಭವಿಷ್ಯಕ್ಕಾಗಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ, ಶಾಸಕ ಜಿ.ಟಿ ದೇವೇಗೌಡ ಎರಡನೇ ಹಂತದಲ್ಲಿ ಬಿಜೆಪಿ ಪಕ್ಷ ಸೇರಲು ಈಗಾಗಲೇ ಉಸ್ತುವಾರಿ ಸಚಿವರಾದ ಎಸ್. ಟಿ ಸೋಮಶೇಖರ್ ಮತ್ತು ರಾಜ್ಯಮಟ್ಟದ ನಾಯಕರುಗಳ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ರಹಸ್ಯ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ :ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವುದು ಕಷ್ಟ. ಈ ಭಾಗದಲ್ಲಿ ಗೆದ್ದಿರುವ ಒಂದೆರಡು ಮಂದಿ ಬಿಜೆಪಿ ಶಾಸಕರು ಅವರವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಹೀಗಾಗಿ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಎಂಬುದು ರಹಸ್ಯ ಸಮೀಕ್ಷೆಯಿಂದ ತಿಳಿದು ಬಂದಿದೆ. ಇದರಿಂದ ಎಚ್ಚೆತ್ತ ಕೇಂದ್ರ ನಾಯಕರು ಹಳೆ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರನ್ನ ಸೆಳೆಯಲು ಮುಂದಾಗಿದ್ದಾರೆ.

ಇದರ ಭಾಗವಾಗಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ನ ಹಾಲಿ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವರ ಜೊತೆ ಮಾತುಕತೆ ಸಹ ನಡೆಸಲಾಗಿದೆ. ಮಾತುಕತೆ ವಿವರವನ್ನ ಬಹಿರಂಗಪಡಿಸಲು ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ನಿರಾಕರಿಸಿದ್ದು, ಹಳೆ ಮೈಸೂರು ಭಾಗದಲ್ಲಿ ಯಾರ್ಯಾರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಮುಂಬರುವ ದಿನಗಳಲ್ಲಿ ತಿಳಿಯಲಿದೆ.

For All Latest Updates

TAGGED:

ABOUT THE AUTHOR

...view details