ಕರ್ನಾಟಕ

karnataka

ETV Bharat / state

ಇಂದು ರಾಷ್ಟ್ರಪತಿ ಮುರ್ಮುರಿಂದ ನಾಡಹಬ್ಬ ದಸರಾಗೆ ಚಾಲನೆ.. ವೈವಿಧ್ಯಮಯ ಕಾರ್ಯಕ್ರಮಗಳ ವಿವರ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿಗಳು ಚಾಲನೆ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 9.45 ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡ ಹಬ್ಬ ದಸರಾ ಉದ್ಘಾಟನೆಯಾಗಲಿದೆ.

By

Published : Sep 25, 2022, 3:41 PM IST

Updated : Sep 26, 2022, 6:43 AM IST

Inauguration of Nadahabba Dasara
ಅದ್ಧೂರಿ ಜಂಬೂಸವಾರಿ

ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಯನ್ನು ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು, ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 5 ರಂದು ಜಂಬೂಸವಾರಿ ನಡೆಯಲಿದ್ದು, ವೈವಿಧ್ಯಮಯ ವರ್ಣರಂಜಿತ ಅದ್ಧೂರಿ ದಸರಾದ 9 ದಿನಗಳ ವಿಶೇಷತೆ ಬಗೆಗಿನ ಮಾಹಿತಿ ಇಲ್ಲಿದೆ.

ಅದ್ಧೂರಿ ಜಂಬೂಸವಾರಿಗೆ ಮೈಸೂರು ಸಜ್ಜು

ಇಂದು(ಸೆಪ್ಟೆಂಬರ್ 26) ಚಾಮುಂಡಿ ಬೆಟ್ಟದಲ್ಲಿ 9.45 ರಿಂದ 10.05 ನಿಮಿಷದ ಶುಭ ವೃಶ್ಚಿಕ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾಗುವ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮಾಡಲಿದ್ದಾರೆ. ಈ ಮೂಲಕ ಅವರು ಸಾಂಪ್ರದಾಯಿಕ ಹಾಗೂ ಅದ್ಧೂರಿ ದಸರಾಗೆ ಚಾಲನೆ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಅವರು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುತ್ತಿರುವುದು.

ಅದ್ಧೂರಿ ಜಂಬೂಸವಾರಿಗೆ ಮೈಸೂರು ಸಜ್ಜು

ವೈವಿಧ್ಯಮಯ ಕಾರ್ಯಕ್ರಮಗಳು:ಇಂದು ದಸರಾ ಉದ್ಘಾಟನೆ ಆದ ನಂತರ ಅದೇ ದಿನ ಕೈಗಾರಿಕಾ ವಿಚಾರ ಸಂಕೀರ್ಣ, ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಸಾಂಪ್ರದಾಯಿಕ ದಸರಾ ಕುಸ್ತಿ ಪಂದ್ಯಾವಳಿ, ವಸ್ತು ಪ್ರದರ್ಶನ ಉದ್ಘಾಟನೆ, ಯೋಗ ದಸರಾ, ಅರಮನೆಯಲ್ಲಿ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ, ರಾಜ್ಯಮಟ್ಟದ ಶಿಲ್ಪ ಚಿತ್ರಕಲಾ ಪ್ರದರ್ಶನ ಮೈಸೂರು ನಗರದಲ್ಲಿ 124 ಕಿ.ಮೀ ವ್ಯಾಪ್ತಿಯ ದೀಪಾಲಂಕಾರ ಪ್ರದರ್ಶನ, ಯುವಜನರನ್ನು ಸೆಳೆಯುವ ಯುವ ದಸರಾ, ನಟ ಪುನೀತ್ ಸವಿ ನೆನಪಿಗಾಗಿ ಒಂದು ದಿನದ ಪುನೀತ್ ಚಲನಚಿತ್ರೋತ್ಸವ, ದಸರಾ ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಪಾರಂಪರಿಕ ಸೈಕಲ್ ಸವಾರಿ ಹಾಗೂ ಪಾರಂಪರಿಕ ಟಾಂಗಾ ಸವಾರಿ, ರೈತ ದಸರಾ, ಪೊಲೀಸ್ ವಾದ್ಯಗೋಷ್ಠಿ, ಕೃಷಿ ವಸ್ತು ಪ್ರದರ್ಶನ, ರೈತ ದಸರಾ ಮೆರವಣಿಗೆ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು 7 ದಿನಗಳ ಕಾಲ ಮೈಸೂರು ನಗರದ ವಿವಿಧ ವೇದಿಕೆಗಳಲ್ಲಿ ನಡೆಯಲಿವೆ.

ಅದ್ಧೂರಿ ಜಂಬೂಸವಾರಿಗೆ ಮೈಸೂರು ಸಜ್ಜು

ಇದೇ ರೀತಿ ಅರಮನೆಯ ವೇದಿಕೆಯಲ್ಲಿ 7 ದಿನಗಳ ಕಾಲ ಸುಗಮ ಸಂಗೀತ, ನಾದಸ್ವರ, ಭಕ್ತಿಗೀತೆ, ಕಂಸಾಳೆ, ಕೂಚಿಪುಡಿ, ಜಾನಪದ ಗಾಯನ, ಜನಪದ ಗೀತೆ, ಭರತನಾಟ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಅರಮನೆ ಮುಂಭಾಗದಲ್ಲಿ ಪ್ರತಿದಿನ ಸಂಜೆ 4 ಗಂಟೆಗಳ ಕಾಲ ನಡೆಯಲಿವೆ.

ಗಜಪಡೆ ತಾಲೀಮು:ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ 14 ಗಜಪಡೆ ಈಗಾಗಲೇ ಕಳೆದ 2 ತಿಂಗಳಿನಿಂದ ಅರಮನೆ ಆವರಣದ ಕೊಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿವೆ. ಪ್ರತಿದಿನ ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ಸಾಗುವ ತಾಲೀಮು ಆರಂಭಿಸಲಾಗಿದೆ. ಇದರ ಜೊತೆಗೆ ಮರದ ಅಂಬಾರಿ ತಾಲೀಮು ಸಹಾ ನಡೆಸುತ್ತಿದ್ದು, 3 ಬಾರಿ ಕುಶಾಲತೋಪು ತಾಲೀಮನ್ನು ನಡೆಸಲಾಗಿದೆ. ಈ ಬಾರಿ ಜಂಬೂಸವಾರಿಯ ನೇತೃತ್ವವನ್ನು ಅರ್ಜುನ ಆನೆ ಮುನ್ನಡೆಸಲಿದ್ದು, ಅಂಬಾರಿಯನ್ನು ಅಭಿಮನ್ಯು ಆನೆ ಹೊತ್ತು ಸಾಗಲಿದೆ.

ಅದ್ಧೂರಿ ಜಂಬೂಸವಾರಿಗೆ ಮೈಸೂರು ಸಜ್ಜು

ಅದ್ಧೂರಿ ಜಂಬೂಸವಾರಿ:ಈ ಬಾರಿ ಅಕ್ಟೋಬರ್ 5 ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಜಂಬೂಸವಾರಿಯಲ್ಲಿ 100 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಮತ್ತು ಕಲಾ ತಂಡಗಳು ಭಾಗವಹಿಸಲಿದೆ. ಅಕ್ಟೋಬರ್ 5 ರ 2.36 ರಿಂದ 2.50 ರ ವರೆಗಿನ ಮಕರ ಲಗ್ನದಲ್ಲಿ ಕೋಟೆ ಆಂಜನೇಯ ದೇವಾಲಯದ ಬಳಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಜಂಬೂಸವಾರಿಯ ಮೆರವಣಿಗೆ ಆರಂಭವಾಗಲಿದೆ. ಸಂಜೆ 5.07 ರಿಂದ 5.18 ಗಂಟೆಯ ವರೆಗಿನ ಶುಭ ಮೀನಾ ಲಗ್ನದಲ್ಲಿ ಚಿನ್ನದ ಅಂಬಾರಿಯ ಮೇಲೆ ಆಸಿನಳಾಗಿರುವ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಾಗುವುದು. ಬಳಿಕ ಸಂಜೆ 7.30 ಕ್ಕೆ ಬನ್ನಿ ಮಂಟಪದ ಮೈದಾನದಲ್ಲಿ ಆಕರ್ಷಕ ಪಂಜಿನ ಕವಾಯತು ನೆರವೇರಲಿದೆ.

ಅದ್ಧೂರಿ ಜಂಬೂಸವಾರಿಗೆ ಮೈಸೂರು ಸಜ್ಜು

ಈ ಬಾರಿ ದಸರಾದ ವಿಶೇಷತೆಗಳು:ಕೋವಿಡ್ ನಂತರ 412ನೇ ಅದ್ಧೂರಿ ದಸರಾವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಬಾರಿಗೆ ಭಾರತದ ಮೊದಲ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದು ವಿಶೇಷ. ಅದ್ಧೂರಿ ದಸರಾ ಜಂಬೂಸವಾರಿಯಲ್ಲಿ ನೂರಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಭಾಗವಹಿಸುತ್ತಿವೆ.

ಇದನ್ನೂ ಓದಿ:ಮೈಸೂರು ದಸರಾ: ಉದ್ಘಾಟನೆಗೆ ಸಿದ್ಧವಾದ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ

ಜೊತೆಗೆ ದಸರಾದಲ್ಲಿ ಮೊದಲ ಬಾರಿಗೆ 14 ಗಜಪಡೆ ಭಾಗವಹಿಸುತ್ತಿರುವುದು ವಿಶೇಷ. ಅಲ್ಲದೆ ಅರಮನೆ ಮುಂಭಾಗದ ಆವರಣದಲ್ಲಿ 280ಕ್ಕೂ ಹೆಚ್ಚು ವೈವಿಧ್ಯಮ ಕಾರ್ಯಕ್ರಮಗಳು ನಡೆಯಲಿವೆ. 7 ದಿನ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.

Last Updated : Sep 26, 2022, 6:43 AM IST

ABOUT THE AUTHOR

...view details