ಮೈಸೂರು: ರಾಜ್ಯದಲ್ಲಿರುವ 9 ಮೃಗಾಲಯಗಳಿಂದ 16ರಿಂದ 18 ಕೋಟಿ ಆದಾಯ ನಷ್ಟವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ರಾಜ್ಯದಲ್ಲಿರುವ 9 ಮೃಗಾಲಯಗಳಿಂದ ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ 16ರಿಂದ 18 ಕೋಟಿ ಆದಾಯ ನಷ್ಟವಾಗಿದೆ. ಅದರಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಿಂದ 6ರಿಂದ 7 ಕೋಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ 8 ಕೋಟಿ ಹಾಗೂ ಉಳಿದ ಮೃಗಾಲಯದಿಂದ ಸುಮಾರು 1ರಿಂದ 3 ಕೋಟಿ ನಷ್ಟವಾಗಿದೆ ಎಂದರು.
ಕೊರೊನಾದಿಂದ ರಾಜ್ಯದ ಮೃಗಾಲಯಗಳಿಗಾದ ನಷ್ಟ ಎಷ್ಟು? ಮೈಸೂರು ಮೃಗಾಲಯದಲ್ಲಿ ಕೊರೊನಾ ಸಂದರ್ಭದಲ್ಲಿ 250 ಲಕ್ಷ ರೂ. ಪ್ರಾಣಿಗಳ ದತ್ತು ಸ್ವೀಕಾರದಿಂದ ಬಂದಿದೆ. ಬನ್ನೇರುಘಟ್ಟ ಇತರ ಮೃಗಾಲಯಗಳಿಂದ 280 ಲಕ್ಷದಿಂದ 300 ಲಕ್ಷದವರೆಗೂ ಪ್ರಾಣಿಗಳ ದತ್ತು ಸ್ವೀಕಾರವಾಗಿದೆ. ಮೇ 21ರಂದು ಮೃಗಾಲಯ ಪ್ರಾಧಿಕಾರದ ಸಭೆ ನಡೆಸಿ ಮೃಗಾಲಯ ಓಪನ್ ಮಾಡುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದ್ದು, ಸರ್ಕಾರದಿಂದ ಅನುಮತಿ ದೊರೆತ ತಕ್ಷಣ ಮೃಗಾಲಯ ಓಪನ್ ಮಾಡಲು ಎಲ್ಲಾ ಸಿದ್ಧತೆ ಮಾಡಕೊಳ್ಳಲಾಗಿದೆ ಎಂದರು.
ಪ್ರಾಣಿಗಳಿಗೆ ಕೊರೊನಾ ಭಯವಿಲ್ಲ. ಕಳೆದ 6 ತಿಂಗಳಿನಿಂದ ಕೊರೊನಾ ಭೀತಿ ಇದ್ದು, ಪ್ರಪಂಚದಾದ್ಯಂತ ಹಾಂಕಾಂಗ್ ಮತ್ತು ಅಮೆರಿಕಾದ ಮೃಗಾಲಯದಲ್ಲಿ ವೈರಸ್ ಹರಡಿದೆ ಎಂದು ವರದಿಯಾಗಿತ್ತು. ಆದರೆ ಇದು ಮನುಷ್ಯರಿಗೆ ಮಾತ್ರ ಎಫೆಕ್ಟ್ ಆಗಿರುವುದು ಎಂದು ವರದಿಯಾಗಿದೆ. ಎಲ್ಲೂ ಕೂಡ ಕೊರೊನಾ ಪ್ರಾಣಿಗಳಿಗೆ ಬಾಧಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯ ಓಪನ್ ಆದ ಮೇಲೆ ಕೊರೊನಾ ಇರುವ ವ್ಯಕ್ತಿಗಳು ಪ್ರಾಣಿಗಳ ಹತ್ತಿರ ಹೋಗುವುದಕ್ಕೆ ಅವಕಾಶ ಇಲ್ಲ. ಇದಕ್ಕೆ ಮೃಗಾಲಯವನ್ನು ತೆಗೆದ ತಕ್ಷಣ ಮೃಗಾಲಯದ ಒಳಗೆ ಬರುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.