ಕರ್ನಾಟಕ

karnataka

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ, ಆ ದೇವರಿಗೇ ಗೊತ್ತು: ಹೆಚ್.ವಿಶ್ವನಾಥ್​​

By

Published : Nov 20, 2020, 3:26 PM IST

ಸಚಿವ ಸಂಪುಟ ಪುನರ್​ರಚನೆ ಆಗುತ್ತದೆಯೋ ಅಥವಾ ವಿಸ್ತರಣೆ ಆಗುತ್ತದೆಯೋ ಎಂಬುದು ತಿಳಿದಿಲ್ಲ. ಆ ವಿಚಾರ ತಿಳಿದವರು ಅಮಿತ್ ಶಾ, ಮೋದಿ ಮತ್ತು ದೇವರು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಎಚ್.ವಿಶ್ವನಾಥ್ ಹೇಳಿಕೆ
ಎಚ್.ವಿಶ್ವನಾಥ್ ಹೇಳಿಕೆ

ಮೈಸೂರು:ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದು ಅಮಿತ್ ಶಾ, ಮೋದಿ ಮತ್ತು ದೇವರಿಗೆಯೇ ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆ ಬಲ್ಲವರು ಅಮಿತ್ ಶಾ, ಮೋದಿ. ಇಲ್ಲದಿದ್ದರೆ ಆ ದೇವರಿಗೇ ಗೊತ್ತು. ಇತ್ತೀಚೆಗಷ್ಟೇ ದೆಹಲಿಗೆ ಸಿಎಂ ಹೋಗಿ ಜೆ.ಪಿ.ನಡ್ಡಾ ಅವರನ್ನು ಮಾತನಾಡಿಸಿ ಬಂದಿದ್ದಾರೆ. ಅವರ ಮಾತುಕತೆಯಲ್ಲಿ ಏನು ನಡೆದಿದೆ ಎಂಬುದು ತಿಳಿದಿಲ್ಲ ಎಂದರು.

ಇನ್ನು ಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗಾದರೂ ಮಂತ್ರಿ ಮಾಡುತ್ತೀನಿ ಎಂದರೆ ಬೇಡಾ ಅನ್ನುವುದಕ್ಕೆ ಆಗುತ್ತಾ. ಸಂದರ್ಭಗಳು, ಅವಕಾಶಗಳು ಇದ್ದರೆ ಆಗುತ್ತದೆ. ಆಸೆಯೂ ಇದೆ ಎಂದರು.

ಹೆಚ್.ವಿಶ್ವನಾಥ್, ವಿಧಾನ ಪರಿಷತ್​ ಸದಸ್ಯ

ಕೇಂದ್ರ ಸಚಿವ ಸದಾನಂದಗೌಡ ಅವರು ಈ ಹಿಂದೆ ನೀಡಿದ್ದ ವಲಸಿಗರು ಪಕ್ಷ ಕಟ್ಟಿದರವಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಲೆಕ್ಕಾಚಾರದಲ್ಲಿ 51 ದೊಡ್ಡ ಸಂಖ್ಯೆ. 49 ಅಲ್ಲ. 51 ಆದಾಗ ಮಾತ್ರ ಮೌಲ್ಯ ಬರುತ್ತದೆ. ರಾಜಕೀಯ ಲೆಕ್ಕಾಚಾರ ಬೇರೆ ಎಂದು ಹೇಳಿದರು. ರಾಜ್ಯದಲ್ಲಿ ಪೂರ್ಣಪ್ರಮಾಣದ ಸಂಪುಟ ಇರಬೇಕು ಅನಿಸುತ್ತದೆ. ಆಗ ಒಟ್ಟಾಗಿ ಕೆಲಸ ಮಾಡಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆ ಬೇಕಿರಲಿಲ್ಲ. ಇದರಿಂದ ಕರ್ನಾಟಕದ ಏಕೀಕರಣ, ಐಕ್ಯತೆ, ಭದ್ರತೆಗೆ ಧಕ್ಕೆಯಾಗಲಿದ್ದು, ಭಾಷಾವಾರು, ಪ್ರಾಂತ್ಯವಾರು ಹೋರಾಟಗಳು ಬೆಳಗಾವಿಯಲ್ಲಿ ನಡೆಯುತ್ತಿವೆ. ಯಡಿಯೂರಪ್ಪನವರು ಅನುಭವಿ ರಾಜಕಾರಣಿಯಾಗಿದ್ದು, ಈ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕು. ಚೆಲುವ ಕನ್ನಡ ನಾಡಿನ ಒಗ್ಗಟ್ಟಿಗೆ ಧಕ್ಕೆ ತರದ ರೀತಿಯಲ್ಲಿ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು. ಜಾತಿಗೊಂದು, ಭಾಷೆಗೊಂದು ಪ್ರಾಧಿಕಾರದ ರಚನೆ ಸರಿಯಲ್ಲ ಎಂದರು.

ಇನ್ನು ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ರಾಜಕೀಯ ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದ್ದಾರೆ. ಅಸ್ತಿತ್ವಕ್ಕಾಗಿ ಯಾರದರೂ ಬೇಕಲ್ಲ ಎಂದು ಸಖನಿಲ್ಲದೆ ಸುಖವೆಲ್ಲಿ, ಪ್ರಿಯಗಾಯಕಿ ಜಗದೊಳಗೆ ಎಂದು ಹಾಡಿನ ಮೂಲಕ ಮೈತ್ರಿಯ ಬಗ್ಗೆ ವಿವರಿಸಿದರು.

ABOUT THE AUTHOR

...view details