ಕರ್ನಾಟಕ

karnataka

ETV Bharat / state

ಕೊರೊನಾ ಟೆಸ್ಟಿಂಗ್ ವೇಳೆ ತಪ್ಪು ಮಾಹಿತಿ ನೀಡಿದರೆ ಎಫ್ಐಆರ್.. ಮೈಸೂರು ಡಿಸಿ ಎಚ್ಚರಿಕೆ

ಸಾಮಾನ್ಯವಾಗಿ ಗಂಟಲು ದ್ರವ ಪರೀಕ್ಷೆಯಲ್ಲಿ ನೀಡುವ ವಿವರವನ್ನು ಸರಿಯಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ..

By

Published : Jul 31, 2020, 6:37 PM IST

DC abhiram G Shankar
DC abhiram G Shankar

ಮೈಸೂರು: ಕೊರೊನಾ ಟೆಸ್ಟಿಂಗ್ ಸಮಯದಲ್ಲಿ ಸುಳ್ಳು ವಿಳಾಸ ಮತ್ತು ನಕಲಿ ಮೊಬೈಲ್ ನಂಬರ್ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆ ಜಿಲ್ಲಾಡಳಿತ ಅತಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ. ಕೊರೊನಾ ಟೆಸ್ಟಿಂಗ್ ವೇಳೆ ಕೆಲವರು ತಪ್ಪು ಮಾಹಿತಿ ನೀಡಿ ಆರೋಗ್ಯಾಧಿಕಾರಿಗಳನ್ನು ಯಾಮಾರಿಸುತ್ತಿದ್ದು, ಕೆಲವರು ಚಿಕಿತ್ಸೆ ಪಡೆಯದೆ ನಾಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದೆ ಎಂದು ತಿಳಿಸಿದರು.

30ಕ್ಕೂ ಹೆಚ್ಚಿನ ಸೋಂಕಿತರು ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಕ್ಕಿಲ್ಲ :ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್‌ಗಳನ್ನು ಎಲ್ಲಾ ಭಾಗಗಳಲ್ಲೂ ಚುರುಕುಗೊಳಿಸಲಾಗಿದೆ. ತಪಾಸಣೆ ವೇಳೆ 30ಕ್ಕೂ ಹೆಚ್ಚಿನ ಸೋಂಕಿತರು ತಪ್ಪು ವಿಳಾಸ ನೀಡಿದ್ದು, ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಕ್ಕಿಲ್ಲ. ಪರೀಕ್ಷೆ ವರದಿ ಪಾಸಿಟಿವ್ ಬಂದಾಗ ಆರೋಗ್ಯಾಧಿಕಾರಿಗಳು ಕರೆ ಮಾಡಿದರೆ ಬೇರೆ ಯಾರೋ ಕರೆ ಸ್ವೀಕರಿಸುತ್ತಾರೆ ಅಥವಾ ನಂಬರ್ ತಪ್ಪಾಗಿರುತ್ತದೆ. ವಿಳಾಸ ಹುಡುಕಿ ಹೋದರೆ ಅಲ್ಲಿಯೂ ಸೋಂಕಿತರು ಸಿಗುವುದಿಲ್ಲ. ಹೀಗೆ ಆರೋಗ್ಯಾಧಿಕಾರಿಗಳನ್ನು ಕೊರೊನಾ ಟೆಸ್ಟಿಂಗ್ ವೇಳೆ ತಪ್ಪು ಮಾಹಿತಿ ನೀಡಿ ಯಾಮಾರಿಸುತ್ತಿದ್ದಾರೆ ಎಂದರು.

ಜನರಿಗೆ ಕೊರೊನಾ ಭಯ :ಸಾಮಾನ್ಯವಾಗಿ ಗಂಟಲು ದ್ರವ ಪರೀಕ್ಷೆಯಲ್ಲಿ ನೀಡುವ ವಿವರವನ್ನು ಸರಿಯಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪಾಸಿಟಿವ್ ಬಂದರೆ ಏರಿಯಾ ಸೀಲ್‌ಡೌನ್ ಆಗುತ್ತೆ ಅಥವಾ ನಮ್ಮನ್ನು ಯಾವುದೋ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬ ಭಯದಿಂದ ತಪ್ಪು ತಪ್ಪು ವಿಳಾಸ ನೀಡುತ್ತಿದ್ದಾರೆ ಎಂದರು.

ಪರೀಕ್ಷೆ ಸಂದರ್ಭದಲ್ಲಿ ಆಧಾರ್, ರೇಷನ್ ಕಾರ್ಡ್ ಕಡ್ಡಾಯ :ಪರೀಕ್ಷೆ ವೇಳೆ ತಪ್ಪು ಮಾಹಿತಿ ನೀಡುತ್ತಿರುವ ಹಿನ್ನೆಲೆ ಇನ್ಮುಂದೆ ಪರೀಕ್ಷೆ ವೇಳೆ ಆಧಾರ್ ಕಾರ್ಡ್ ನಂಬರ್, ಮತದಾರರ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಯಾವುದಾದ್ರೂ ಒಂದು ದಾಖಲೆಯನ್ನು ವ್ಯಕ್ತಿ ನೀಡಲೇಬೇಕು ಎಂಬ ನಿಯಮವನ್ನು ಜಿಲ್ಲಾಡಳಿತ ರೂಪಿಸಿದೆ. ಇದರಿಂದ ತಪ್ಪು ಮಾಹಿತಿ ನೀಡುವುದನ್ನು ತಪ್ಪಿಸಬಹುದು ಜೊತೆಗೆ ಸೋಂಕು ಇತರರಿಗೂ ಹರಡದಂತೆ ತಡೆಗಟ್ಟಬಹುದಾಗಿದೆ.

ಕೊರೊನಾ ಟೆಸ್ಟಿಂಗ್ ವೇಳೆಯಲ್ಲಿ ತಪ್ಪು ವಿಳಾಸ, ನಕಲಿ ನಂಬರ್ ನೀಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸಿದರೆ ಅಂತಹ ಸೋಂಕಿತರನ್ನು ಹುಡುಕಿ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೌಢ್ಯತೆ ತೊರೆದು ಧೈರ್ಯವಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ABOUT THE AUTHOR

...view details