ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ, ಕೊಲೆ ಬೆದರಿಕೆ, ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜಮೀನು ಅತಿಕ್ರಮಣ, ಕೊಲೆ ಬೆದರಿಕೆ ಆರೋಪ: ಹೆಚ್.ವಿಶ್ವನಾಥ್ ಪುತ್ರನ ವಿರುದ್ಧ ಎಫ್ಐಆರ್ - ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್
ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಕೇಳಲು ಹೋದ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಎಂಎಲ್ಸಿ ಹೆಚ್.ವಿಶ್ವನಾಥ್ ಪುತ್ರ ಸೇರಿದಂತೆ ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
![ಜಮೀನು ಅತಿಕ್ರಮಣ, ಕೊಲೆ ಬೆದರಿಕೆ ಆರೋಪ: ಹೆಚ್.ವಿಶ್ವನಾಥ್ ಪುತ್ರನ ವಿರುದ್ಧ ಎಫ್ಐಆರ್ FIR against H Vishwanath Son](https://etvbharatimages.akamaized.net/etvbharat/prod-images/768-512-11916544-thumbnail-3x2-hrs.jpg)
ಹೆಚ್.ವಿಶ್ವನಾಥ್ ಪುತ್ರ, ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ನಗರದ ಹಿನಕಲ್ ಬಳಿಯ ಖಾಲಿ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದರು. ಇದನ್ನು ತಡೆಯಲು ಮುಂದಾದ ನಿವೇಶನದ ಮೂಲ ವಾರಸುದಾರ ಯೋಗೀಶ್ ಎಂಬುವರ ಕುಟುಂಬಕ್ಕೆ ಜಿಪಂ ಸದಸ್ಯ, ವಿಶ್ವನಾಥ್ ಪುತ್ರರಾಗಿರುವ ಅಮಿತ್ ದೇವರಹಟ್ಟಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ನಿವೇಶನದ ಮಾಲೀಕ ಯೋಗೀಶ್ ದೂರು ನೀಡಿದ್ದರು. ದೂರು ಸ್ವೀಕರಿಸಿದ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, ಐಪಿಸಿ ಸೆಕ್ಷನ್ 504, 506ರಡಿ ಅಮಿತ್, ಪಟೇಲ್, ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಅಮಿತ್ ದೇವರಹಟ್ಟಿ ಮೂರನೇ ಆರೋಪಿಯಾಗಿದ್ದಾರೆ.