ಮೈಸೂರು: ಇತ್ತೀಚೆಗೆ ಸಾಮಾನ್ಯವಾಗಿ ಪ್ರತಿದಿನ ಕೇಳಿಬರುತ್ತಿರುವ ಶಬ್ದ ಚಿರತೆ ದಾಳಿ, ಚಿರತೆ ಸೆರೆ, ಚಿರತೆ ಸಂಚಾರ, ಆತಂಕದಲ್ಲಿ ಗ್ರಾಮಸ್ಥರು ಎಂಬುದು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಹಾಗಾದರೆ ಏಕಾಏಕಿ ಚಿರತೆ ದಾಳಿ ಹೆಚ್ಚಾಗಲು ಕಾರಣವೇನು. ಅರಣ್ಯ ಇಲಾಖೆ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಮಾಹಿತಿಯ ವಿಶೇಷ ವರದಿ ಇಲ್ಲಿದೆ.
ಚಿರತೆ ಕುರುಚಲು ಅರಣ್ಯ ಪ್ರದೇಶ ಅಥವಾ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುವ ಪ್ರಾಣಿಯಾಗಿದೆ. ಇತ್ತೀಚೆಗೆ ನಗರೀಕರಣ ಹೆಚ್ಚಾಗಿದ್ದು, ಕಾಡುಗಳ ಹಾಗೂ ಕುರುಚಲು ಗಿಡಗಳ ನಾಶದಿಂದ ತಮ್ಮ ಆಹಾರ ಅರಸಿ ಗ್ರಾಮಗಳತ್ತ ಚಿರತೆಗಳು ಬರುತ್ತಿದ್ದು ಅಲ್ಲಿ ಬೀದಿ ನಾಯಿಗಳ, ಮೇಕೆ/ಕುರಿ, ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯ.
ಆದರೇ, ಇತ್ತೀಚೆಗೆ ತಿ.ನರಸೀಪುರದ ಲಿಂಗಯ್ಯನ ಹುಂಡಿ ಗ್ರಾಮದ ಯುವಕನ ಮೇಲೆ ಮಲ್ಲಪ್ಪನ ಬೆಟ್ಟದ ಸಮೀಪ ಚಿರತೆ ದಾಳಿ ಮಾಡಿ ಯುವಕನನ್ನು ಕೊಂದಿತ್ತು. ಜೊತೆಗೆ ಬೀದಿ ನಾಯಿ ಹಿಡಿಯಲು ಬಂದ ಚಿರತೆ ಗಾಬರಿಯಿಂದ ಕೆ.ಆರ್ ನಗರದ ಹೊರ ಹೊಲಯದ ಕನಕ ಬಡಾವಣೆಗೆ ನುಗ್ಗಿ 3 ಜನರ ಮೇಲೆ ದಾಳಿ ಮಾಡಿತ್ತು. ಹಾಗೂ ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ಗ್ರಾಮವೊಂದರ ಮನೆಯ ಕುರಿ ಕೊಟ್ಟಿಗೆಗೆ ನುಗ್ಗಿತ್ತು. ಇಂದು ಕೆ.ಆರ್.ಎಸ್ನ ವಿಶ್ವ ಪ್ರಸಿದ್ಧ ಬೃಂದಾವನ ಬಳಿ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಆತಂಕ ಉಂಟುಮಾಡಿದೆ. ಹೀಗೆ ಪ್ರತಿದಿನ ಒಂದೊಂದು ಚಿರತೆ ದಾಳಿಯ ಪ್ರಕರಣಗಳು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯ ಗಡಿ ಭಾಗಗಳಲ್ಲಿ ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಜನ ಪ್ರತಿನಿಧಿಗಳು ಚಿರತೆ ದಾಳಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ.
ಚಿರತೆ ದಾಳಿ ಬಗ್ಗೆ ತಜ್ಞರು ಹೇಳುವುದೇನು?:ಚಿರತೆಯ ದಾಳಿಯ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಪರಿಸರ ತಜ್ಞರಾದ ರವಿಕುಮಾರ್ ಮಾತನಾಡಿ, ಚಿರತೆಗಳು ಕಾಡಿನಿಂದ ಬಂದು ದಾಳಿ ಮಾಡುತ್ತಿಲ್ಲ. ನಾವೇ ಕಾಡನ್ನು ಅತಿಕ್ರಮಣ ಮಾಡಿಕೊಂಡಿದ್ದೇವೆ. ಚಿರತೆ ವಾಸವಿರುವ ಪ್ರದೇಶ ಕುರುಚಲು ಹುಲ್ಲುಗಾವಲು ಪ್ರದೇಶವಾಗಿದ್ದು, ಅತಿಯಾದ ನೀರು ಹಾಗೂ ಹಸಿರಾದ ಪ್ರದೇಶವು ಚಿರತೆಯ ವಾಸಸ್ಥಾನವಾಗಿದೆ. ಮುಖ್ಯವಾಗಿ ನಗರದ ಹೊರವಲಯದ ಕುರುಚಲು ಗಿಡಗಳಿರುವ ಹಾಗೂ ಬೆಟ್ಟಗಳಿರುವ ಜಾಗದಲ್ಲಿ ಚಿರತೆ ವಾಸವಾಗಿರುತ್ತದೆ.
ಅಲ್ಲಿ ಅವುಗಳಿಗೆ ಬೇಕಾದ ಆಹಾರಗಳು ಮತ್ತು ಸಣ್ಣ ಪ್ರಾಣಿಗಳು ಇರುತ್ತವೆ. ಆದರೇ, ಅವುಗಳನ್ನು ನಗರೀಕರಣ ಹೆಸರಿನಲ್ಲಿ ನಾವು ಬಡಾವಣೆಗಳನ್ನು ನಿರ್ಮಿಸಿಕೊಂಡು ಅವುಗಳ ಆಶ್ರಯತಾಣವನ್ನು ಆಕ್ರಮಿಸಿಕೊಂಡಿದ್ದೇವೆ. ಈಗ ಅವುಗಳಿಗೆ ಆಹಾರ ಸಮಸ್ಯೆ ಎದುರಾಗಿದ್ದು, ಅದಕ್ಕಾಗಿ ಅವು ದಾಳಿ ಮಾಡುತ್ತಿವೆ ಎಂದರು.