ಮೈಸೂರು: 'ಕೇಂದ್ರ ಸರ್ಕಾರ ಜಿಎಸ್ಟಿ ಜಾರಿಗೆ ತಂದು ರಾಜ್ಯಗಳ ಸ್ಥಿತಿಯನ್ನು ಭಿಕ್ಷುಕ ಮಾಡಿಬಿಟ್ಟಿದೆ. ಇಂದು ರಾಜ್ಯಗಳಿಗೆ ಅಸ್ತಿತ್ವ ಇದೆಯಾ?, ದೇಶದಲ್ಲಿ ಒಕ್ಕೂಟ ಸ್ವರೂಪ ಇದೆಯಾ?, ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳಬೇಕಾಗಿದೆ' ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ದೇವನೂರು ಮಹಾದೇವ ದಲಿತ ಸಂಘಟನೆಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಹಾಗೂ ಜನಜಾಗೃತಿ ಕರಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಭಾರತದ ಬುಡ ಕತ್ತರಿಸುತ್ತಿರುವ ಕೆಲವರನ್ನು ನಾವು ಮರೆಯಬಾರದು. ಇಂದು ಸ್ವಾಯತ್ತ ಸಂಸ್ಥೆಗಳ ಕತ್ತಿನ ನರ ಕೊಯ್ದು ಅವು ಕುತ್ತಿಗೆ ವಾಲಿಕೊಂಡು ನೇತಾಡುತ್ತಿವೆ. ಭಾರತವು ಭಾರತವಾಗಿ ಉಳಿಯುತ್ತದೆಯೇ? ಹೇಳುವುದು ತುಂಬಾ ಕಷ್ಟ' ಎಂದು ವಿಷಾದ ವ್ಯಕ್ತಪಡಿಸಿದರು.
ಓದಿ:ಮಾಸ್ಕ್ ಹಾಕದೇ ಓಡಾಡಿದ್ರೆ ಪ್ರಬಂಧ ಬರೆಯೋ 'ಶಿಕ್ಷೆ'!
'ಭಾರತದ ಸಂವಿಧಾನವನ್ನು ಒಪ್ಪದೇ ಇರುವವರು ತಮ್ಮದೇ ಒಂದು ಸಂವಿಧಾನವನ್ನು ಒಳಗಿಟ್ಟುಕೊಂಡವರು ಇಂದು ದೇಶದ ಆಳ್ವಿಕೆ ಮಾಡುತ್ತಿದ್ದಾರೆ. ಇವರು ಭಾರತದ ಸಂವಿಧಾನವನ್ನು ಮೊದಲು ಇಲ್ಲವಾಗಿಸಲು ನೋಡುತ್ತಾರೆ. ಸಾಧ್ಯವಾಗದೇ ಹೋದರೆ ಅದರ ಶೀಲ ಕೆಡಿಸುತ್ತಾರೆ. ಸಿಎಎ, ಎನ್ಪಿಆರ್, ಎನ್ಆರ್ಸಿ ಮೂಲಕ ಮಾಡಿದ್ದು ಇದೇ ಆಗಿದೆ' ಎಂದು ಅವರು ವ್ಯಾಖ್ಯಾನಿಸಿದರು.
'ದೇಶದಲ್ಲಿ ಸರ್ಕಾರವೇ ಜನಸಮುದಾಯವನ್ನು ಸದೆಬಡಿದು ಬಂಡವಾಳಶಾಹಿಗಳಿಗೆ ಉಣಬಡಿಸುವ ಹಬ್ಬ ನಡೆಯುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ, ಹಿನ್ನಡೆ ಮಾಡುತ್ತಿದೆ. ಇದು ಪೈಶಾಚಿಕ ನಡೆ' ಎಂದು ಆರೋಪಿದರು.
'ದೆಹಲಿಯಲ್ಲಿ ರೈತಾಪಿವರ್ಗ ಹಗಲು ರಾತ್ರಿಯೆನ್ನದೆ, ಚಳಿ, ಮಳೆ, ಧೂಳು ಲೆಕ್ಕಿಸದೆ ಕೊರೊನಾಗೂ ಹೆದರದೆ ಕೃಷಿ ನೀತಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿವೆ. ಹೀಗಿದ್ದರೂ ಕೇಂದ್ರ ಸರ್ಕಾರ ಮಾತುಕತೆಯಲ್ಲಿ ವಂಚಿಸುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಕಣ್ಣಿಲ್ಲ, ಹೃದಯದಲ್ಲಿ ಕಲ್ಲಿದೆ' ಎಂದು ದೇವನೂರು ಮಹಾದೇವ ಟೀಕಿಸಿದರು.