ಮೈಸೂರು:ಕಂದಾಯ ಇಲಾಖೆ ವತಿಯಿಂದ ಜಾರಿಗೆ ತಂದಿರುವ`'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತರಿಕಲ್ಲು ಗ್ರಾಮದಲ್ಲಿ ಶನಿವಾರ ವಾಸ್ತವ್ಯ ಹೂಡಿದರು.
ಕಾರ್ಯಕ್ರಮದ ಅಂಗವಾಗಿ 685 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 625 ಅರ್ಜಿಗಳಿಗೆ ಪರಿಹಾರ ಒದಗಿಸಲಾಯಿತು. ಸಾರ್ವಜನಿಕವಾಗಿ 261 ಆಧಾರ್ ಕಾರ್ಡ್, 21 ಪಡಿತರ ಕಾರ್ಡ್, 30 ಮಾಶಾಸನ ಪತ್ರ, 161 ವಿವಿಧ ಮಾಶಾಸನ ಪತ್ರಗಳು, ನಿವೇಶನ ಪತ್ರ ವಿತರಣೆ, ತರಿಕಲ್ಲು ಮತ್ತು ರಂಗಯ್ಯನ ಕೊಪ್ಪಲಿನಲ್ಲಿ ಎರಡು ಸ್ಮಶಾನಗಳಿಗೆ ಸಂಬಂಧಿಸಿದಂತೆ ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಈ ಪೈಕಿ 60 ಅರ್ಜಿದಾರರ ಸಮಸ್ಯೆಯನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಅರ್ಜಿಗಳಿಗೂ ಪರಿಹಾರ ನೀಡಲಾಗಿದೆ.
ಧರ್ಮಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ತರಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಖಾತೆ, ಪಹಣಿ, ಪೋಡಿ, ಪಿಂಚಣಿ, ಪಡಿತರ ಸಮಸ್ಯೆಗಳು, ಸಂತ್ರಸ್ತರ ಸಮಸ್ಯೆ ಹಾಗೂ ಗ್ರಾಮದ ಇತರ ಸಮಸ್ಯೆಗಳನ್ನು ಆಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಈ ಊರಿನ ಸಾವಿರ ಕಂಬಗಳ ದೇವಸ್ಥಾನ ಎಂಬ ಪ್ರತೀತಿಯ ಕಾಶಿ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಹವಾಲು ಸ್ವೀಕರಿದ ಬಳಿಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, 15 ವರ್ಷದ ಹಿಂದೆ ಆಶ್ರಯ ಯೋಜನೆಯಡಿ ಮಂಜೂರು ಮಾಡಿದ್ದ ನಿವೇಶನ ಹಸ್ತಾಂತರವಾಗದೆ, ಗ್ರಾಮದ ಜನರು ವಸತಿ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಬಗ್ಗೆ ಕೂಡಲೇ ಕ್ರಮವಹಿಸಲಾಗಿದೆ ಎಂದರು.