ಕರ್ನಾಟಕ

karnataka

By

Published : Apr 7, 2023, 6:40 PM IST

ETV Bharat / state

ಕೆಎಂಎಫ್-ಅಮುಲ್ ವಿಲೀನಕ್ಕೆ ಬಿಜೆಪಿ ಸಂಚು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಬಿಜೆಪಿಯವರು ಏನನ್ನೂ ಮಾಡುವುದಿಲ್ಲ ಎಂದು ಹೇಳುತ್ತಾರೋ ಅದನ್ನು ಮಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.

KPCC spokesperson M Laxman
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಕೆಎಂಎಫ್ ನಂದಿನಿಯನ್ನು ಗುಜರಾತ್​ನ ಅಮುಲ್ ಜೊತೆ ವಿಲೀನ ಮಾಡಲು ಬಿಜೆಪಿಯ ಸಂಚು

ಮೈಸೂರು :ಈ ಹಿಂದೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಬಂದಾಗ ಕೆಎಂಎಫ್​ ಅನ್ನು ಅಮುಲ್​ ಜೊತೆ ವಿಲೀನ ಮಾಡುವ ಬಗ್ಗೆ ಹೇಳಿದ್ದರು. ಇದೀಗ ಕೆಎಂಎಫ್ ನಂದಿನಿಯನ್ನು ಗುಜರಾತ್​ನ ಅಮುಲ್ ಜೊತೆ ವಿಲೀನ ಮಾಡಲು ಬಿಜೆಪಿಯಿಂದ ಸಂಚು ನಡೆಯುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಇಂದು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಏನನ್ನು ಮಾಡುವುದಿಲ್ಲ ಎಂದು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಈಗ ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡಲು ಸಂಚು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ಕಛೇರಿಗಳು ಆನ್ಲೈನ್ ಮೂಲಕ ಅಮುಲ್ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದು ಇದು ಸಂಚಿನ ಭಾಗ. ಈ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಜನ ಸೇರುತ್ತಿಲ್ಲ. ಆದ್ದರಿಂದ ಸಿನಿಮಾ ನಟರ ಮೊರೆ ಹೋಗುತ್ತಿದ್ದು, ನಟ ಸುದೀಪ್ ಪತ್ರಿಕಾ ಗೋಷ್ಠಿಯಲ್ಲಿ ಬೊಮ್ಮಾಯಿ ಮಾಮನ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಕೆಲವು ನಟಿಯರು ಸಹ ಪ್ರಚಾರಕ್ಕೆ ಬರುತ್ತಿದ್ದಾರೆ. ಬಿಜೆಪಿಯ ಟಾಪ್ ಸ್ಟಾರ್ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಬಂದರೂ ಜನ ಸಭೆಗೆ ಸೇರುತ್ತಿಲ್ಲ. ಅದರೂ ನರೇಂದ್ರ ಮೋದಿಯವರು ಬಂಡೀಪುರಕ್ಕೆ ಚುನಾವಣಾ ಸಂದರ್ಭದಲ್ಲಿ ಬರುತ್ತಿದ್ದು, ಪ್ರಾಣಿಗಳಿಗೆ ಪ್ರಚಾರ ಮಾಡಲು ಬರುತ್ತಿದ್ದಾರೆಯೇ ಎಂದು​ ವ್ಯಂಗ್ಯವಾಡಿದರು.

ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ ಈಗ ಆ ಕೆಲಸಗಳನ್ನು ಮಾಡುತ್ತಿಲ್ಲ. 80 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲೇ ಕುಳಿತು ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ. ಈಗಾಗಲೇ ಕೆಲವು ರಾಜಕೀಯ ಪಕ್ಷಗಳು ಈ ಮತಗಳನ್ನು ಬುಕ್ ಮಾಡುವ ಕೆಲಸ ಮಾಡುತ್ತಿವೆ. ಆದ್ದರಿಂದ ಈ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತದೆ ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಹೇಳಿಕೆಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಬಿಜೆಪಿಯವರು ಹೊಡೆಯುವ 40% ಕಮಿಷನ್ ನಿಲ್ಲಿಸಿದರೆ ಎಲ್ಲಾ ಭರವಸೆಗಳನ್ನು ಈಡೇರಿಸಬಹುದು ಎಂದರು.

ಕಳೆದ 4 ದಿನಗಳಿಂದ ದೆಹಲಿಯಲ್ಲಿರುವ ಎಚ್.ಡಿ‌.ದೇವೇಗೌಡರು ಬಿಜೆಪಿ ನಾಯಕರನ್ನು ಭೇಟಿ ಮಾಡುವ ಅವಶ್ಯಕತೆ ಏನಿತ್ತು?. ಕರ್ನಾಟಕದಲ್ಲಿ ಬಿಜೆಪಿಯನ್ನು ಬೈಯುತ್ತಾರೆ. ಆದರೆ ದೆಹಲಿಯಲ್ಲಿ ಅವರನ್ನೇ ಭೇಟಿ ಮಾಡುತ್ತಾರೆ. ಇದು ಮುಸ್ಲಿಂ ಮತಗಳನ್ನು ಸೆಳೆಯುವ ತಂತ್ರ. ಆದ್ದರಿಂದ ಈ ಬಗ್ಗೆ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕೆಂದು ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.

ಇದನ್ನೂ ಓದಿ :ವರುಣಾದಲ್ಲಿ ಸಿದ್ದರಾಮಯ್ಯರನ್ನು ಗೆಲ್ಲಿಸಲು ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ: ಹೆಚ್​ಡಿಕೆ

ABOUT THE AUTHOR

...view details