ಕರ್ನಾಟಕ

karnataka

ETV Bharat / state

ಕಂಪನಿ, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿ ದಸರಾ ಯಶಸ್ಸಿನಲ್ಲಿ ಕೈಜೋಡಿಸಿ: ಮೈಸೂರು ಜಿಲ್ಲಾಧಿಕಾರಿ ಮನವಿ

ಈ ಬಾರಿಯ ಮೈಸೂರು ದಸರಾದಲ್ಲಿ ವಿವಿಧ ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿ ತಮ್ಮ ಬ್ರ್ಯಾಂಡ್​ ಅನ್ನು ಜನಪ್ರಿಯಗೊಳಿಸಲು ಸುವರ್ಣಾವಕಾಶ ನೀಡಲಾಗಿದೆ.

By ETV Bharat Karnataka Team

Published : Oct 5, 2023, 9:37 PM IST

ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ
ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ

ಮೈಸೂರು : ದಸರಾ ವೇಳೆ ವಿವಿಧ ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿಕೊಳ್ಳಲು ಅವಕಾಶವಿದ್ದು, ದಸರಾ ಯಶಸ್ವಿಗೊಳಿಸುವುದರೊಂದಿಗೆ ತಮ್ಮ ವ್ಯಾಪಾರ ವಹಿವಾಟನ್ನೂ ವೃದ್ಧಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಗುರುವಾರ ನಗರದ ಲಲಿತ ಮಹಲ್ ಪ್ಯಾಲೇಸ್​ನಲ್ಲಿ ಹಮ್ಮಿಕೊಂಡಿದ್ದ ದಸರಾ ಪ್ರಾಯೋಜಕತ್ವ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಬಾರಿ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದೆ. ವಿವಿಧ ರೀತಿಯ ಪ್ರಾಯೋಜಕತ್ವಗಳಿದ್ದು ಟೈಟಲ್ ಸ್ಪಾನ್ಸರ್ 3 ಕೋಟಿ ರೂ, ಪ್ಲಾಟಿನಂ ಸ್ಪಾನ್ಸರ್ 1 ಕೋಟಿ ರೂ, ಗೋಲ್ಡ್ ಸ್ಪಾನ್ಸರ್ 50 ಲಕ್ಷ ರೂ, ಸಿಲ್ವರ್ ಸ್ಪಾನ್ಸರ್ 25 ಲಕ್ಷ ರೂ, ಅಸೋಸಿಯೇಟ್ ಮತ್ತು ಇವೆಂಟ್ ಸ್ಪಾನ್ಸರ್ 3 ಲಕ್ಷ ರೂ ಇರುತ್ತದೆ. ಸ್ಪಾನ್ಸರ್ ಮಾಡುವವರಿಗೆ ದಸರಾ ಕಾರ್ಯಕ್ರಮಗಳಲ್ಲಿ ತಮ್ಮ ಕಂಪನಿಯ ಜಾಹೀರಾತುಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಪೂರ್ಣ ಒಂದು ಈವೆಂಟ್ ಅಥವಾ ಒಂದು ದಿನ, ಒಂದು ಕಾರ್ಯಕ್ರಮ ಯಾವ ರೀತಿಯಾದರೂ ಪ್ರಾಯೋಜಕತ್ವ ನೀಡಬಹುದಾಗಿದೆ. ದಸರಾ ಹೋರ್ಡಿಂಗ್ಸ್, ಬ್ಯಾನರ್ಸ್ ಮತ್ತು ಕಾರ್ಯಕ್ರಮ ನಿರೂಪಕರಿಂದ ನಿಮ್ಮ ಉತ್ಪನ್ನಗಳ ಹೆಸರುಗಳನ್ನು ಹೇಳಿಸುವ ಮೂಲಕ ಬ್ರಾಂಡ್ ಮಾಡಬಹುದು. ಇದರಿಂದ ನೀವೂ ಬೆಳೆಯುವುದರೊಂದಿಗೆ ನಿಮ್ಮ ಉದ್ಯಮಗಳ ಬೆಳವಣಿಗೆಯೂ ಆಗಲಿದೆ ಎಂದು ಡಿಸಿ ಹೇಳಿದರು.

ಇದನ್ನೂ ಓದಿ :4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು: ವಿಡಿಯೋ

ದಸರಾ ಆಚರಣೆಗೆ ವಿವಿಧ ಸಮಿತಿಗಳನ್ನು ಮಾಡಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಪಾನ್ಸರ್‌ಶಿಪ್ ನೀಡುವವರು ನಾಳೆ ಬೆಳಿಗ್ಗೆ 12 ಗಂಟೆಯೊಳಗೆ ಮಾಹಿತಿ ನೀಡಬೇಕು. ರೈತ ದಸರಾಗೆ ರಸಗೊಬ್ಬರ ಕಂಪನಿಗಳು, ಟ್ರಾಕ್ಟರ್ ಹಾಗೂ ಕೃಷಿ ಉಪಕರಣಗಳ ಕಂಪನಿಯವರು ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಇದೇ ರೀತಿ ಉಳಿದ ಉದ್ಯಮಿಗಳು ತಮಗೆ ಅನುಕೂಲವಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಬಹುದು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ವಿವರಿಸಿದರು.

ಮೂಡಾ ಆಯುಕ್ತರಾದ ದಿನೇಶ್, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ರೂಪಶ್ರೀ, ಆಹಾರ ಇಲಾಖೆಯ ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಸೇರಿದಂತೆ ವಿವಿಧ ಕಂಪನಿಗಳು, ಬ್ಯಾಂಕಿಂಗ್, ಹೋಟೆಲ್ ಉದ್ಯಮಿಗಳು ಸಭೆಯಲ್ಲಿ ಉಪಸ್ತಿತರಿದ್ದರು.

ದಸರಾ ಆಹಾರ ಮೇಳ:ಅಕ್ಟೋಬರ್ 15 ರಿಂದ 22 ರವರೆಗೆ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 'ಆಹಾರ ಮೇಳ' ನಡೆಸಲು ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಲ್ಲಾ ವರ್ಗದ ಜನರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಉಣಬಡಿಸಲು ನಿರ್ಧರಿಸಲಾಗಿದ್ದು, ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜೊತೆಗೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯದ ಉಟೋಪಚಾರಗಳೂ ಇರಲಿವೆ.

ಇದನ್ನೂ ಓದಿ :ಮೈಸೂರು ದಸರಾ: ಆಹಾರ ಮೇಳದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

ABOUT THE AUTHOR

...view details