ಕರ್ನಾಟಕ

karnataka

ETV Bharat / state

ಸಿದ್ದರಾಮನಹುಂಡಿಯಲ್ಲಿ ಪ್ರಚಾರದ ವೇಳೆ ಬಿಜೆಪಿ - ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ಗಲಾಟೆ - ಕರ್ನಾಟಕ ವಿಧಾನಸಭೆ ಚುನಾವಣೆ

ಬಿಜೆಪಿ ಅಭ್ಯರ್ಥಿ ಸೋಮಣ್ಣರ ಚುನಾವಣ ಪ್ರಚಾರದ ವೇಳೆ ಬಿಜೆಪಿ - ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಗಾಯಗೊಂಡ ವ್ಯಕ್ತಿ
ಗಾಯಗೊಂಡ ವ್ಯಕ್ತಿ

By

Published : Apr 28, 2023, 7:13 AM IST

Updated : Apr 28, 2023, 7:50 AM IST

ಮೈಸೂರು: ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗಲಾಟೆ ನಡೆದಿದೆ. ಈ ವೇಳೆ ಕಲ್ಲು ತೂರಾಟವಾಗಿದ್ದು, ಬಿಜೆಪಿ ಕಾರ್ಯಕರ್ತ ನಾಗೇಶ್ ಎಂಬಾತ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋದರನ ಮನೆ ಎದುರು ಗುರುವಾರ ರಾತ್ರಿ 8 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ವರುಣ ಕ್ಷೇತ್ರದಲ್ಲಿ ಸಂಸದ ಪ್ರತಾಪ ಅವರೊಂದಿಗೆ ಸೋಮಣ್ಣ ಅವರು, ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣಾ ರಥದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಸೋದರನ ಮನೆ ಎದುರು ಸಾಗುತ್ತಿದ್ದಾಗ ಗಲಾಟೆಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿಯ ವಕ್ತಾರ ವಸಂತ್ ಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿದ್ದ ವಾಹನ ಸಿದ್ದರಾಮಯ್ಯ ಅವರ ಅಣ್ಣನ ಮನೆ ಸಮೀಪ ಬರುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿತ ಯುವಕರ ಗುಂಪೊಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿತ್ತು. ಮತ್ತೊಂದು ಗುಂಪು ಸೋಮಣ್ಣ ಪರ ಘೋಷಣೆ ಕೂಗಿತ್ತು. ಆಗ, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೆಲವರು ನಾಗೇಶ್ ಮೇಲೆ ಹಲ್ಲೆ ಮಾಡಿದರು. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಯಾಗಿಸಿದರು. ನಂತರ ಪೊಲೀಸ್ ಬಂದೋಬಸ್ತ್‌ನಲ್ಲಿ ಬಿಜೆಪಿ ಪ್ರಚಾರ ವಾಹನ ಸಾಗಿದೆ. ಗಲಾಟೆ ಬಳಿಕವೂ ಸಹ ಸೋಮಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ಕಾರ್ಯ ಮುಂದುವರೆಸಿ ಬೇರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದ್ದರು. ಈ ಸಂಬಂಧ ಬಿಜೆಪಿಯ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿ, ಚುನಾವಣೆಯ ಪ್ರಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂಬ ಆರೋಪ ಮಾಡಿ ಅನುಕಂಪ ಗಿಟ್ಟಿಸಿಕೊಂಡು ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಯಾರು ಹಲ್ಲೆ ನಡೆಸಿಲ್ಲ, ಅನಗತ್ಯವಾಗಿ ಪಕ್ಷದ ಮೇಲೆ ಗೂಬೆ ಗೂರಿಸುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಎಸ್ ಪಿ ಸೀಮಾ ಲಾಟ್ಕರ್ ಅವರು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನಹುಂಡಿಯಲ್ಲಿ ನಾಗೇಶ್ ಎನ್ನುವವರಿಗೆ ರವಿ ಎನ್ನುವವರ ವಾಹನ ಡಿಕ್ಕಿಯಾಗಿದೆ ಎಂಬ ಮಾಹಿತಿ ಬಂದಿದೆ. ಬೇರಾವುದೇ ಗಲಾಟೆಯಾಗಿಲ್ಲ. ಸ್ಥಳದಲ್ಲಿ ನಮ್ಮ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು ಎಂದು ಹೇಳಿದ್ದಾರೆ.

ಪ್ರತಾಪ ಸಿಂಹ ಸವಾಲು:ಇದಕ್ಕೂ ಮುನ್ನ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರತಾಪ ಸಿಂಹ, ಈ ಬಾರಿ ಸಿದ್ದರಾಮನಹುಂಡಿಯಲ್ಲೂ ಬಿಜೆಪಿಗೆ ಲೀಡ್ ಬರಬೇಕು. ಕೆಲವರು ನಡೆಸುತ್ತಿರುವ ಪುಂಡಾಟಿಕೆಗೆ ಪಕ್ಷದ ಯಾರೂ ಬಗ್ಗುವವರಿಲ್ಲ, ಜಗ್ಗುವವರಿಲ್ಲ. ಇಲ್ಲಿಯೂ ಜನ ನರೇಂದ್ರ ಮೋದಿ ಜೊತೆಗಿದ್ದಾರೆಂದು ಸಾಬೀತುಪಡಿಸಬೇಕು ಎಂದರು. ಹನುಮ ಯಾವಾಗ, ಎಲ್ಲಿ ಹುಟ್ಟಿದ ಎಂದು ಕೇಳಿದವರಿಗೆ ಇಲ್ಲಿ ಸ್ಥಾನವಿರಬಾರದು. ನಮ್ಮ ಕಾರ್ಯಕರ್ತರು ಮತ ಕೇಳಲು ಬಂದಾಗ ತಡೆಯುವುದು ಸರಿಯಲ್ಲ. ನಾವೂ ಮನಸ್ಸು ಮಾಡಿದರೆ ಪ್ರತಿ ಊರಲ್ಲೂ ಪ್ರಚಾರ ಮಾಡದಂತೆ ಕಾಂಗ್ರೆಸ್‌ನವರನ್ನು ತಡೆಯುತ್ತೇವೆ. ಆದರೆ, ನಾವು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿದ್ದೇವೆ. ಒಬ್ಬನೇ ಬರುತ್ತೇನೆ. ಅದೇನು ಪುಂಡಾಟಿಕೆ ಮಾಡುತ್ತೀರೋ ನೋಡುವೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ:2024ಕ್ಕೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ

Last Updated : Apr 28, 2023, 7:50 AM IST

ABOUT THE AUTHOR

...view details