ಮೈಸೂರು: ಭಾರತ ದೇಶದ ಇತಿಹಾಸಕ್ಕೆ ಹಾಗೂ ದೇಶ ಹಿಂದೂ ರಾಷ್ಟ್ರವಾಗಿ ಉಳಿಯಲು ಶಿವಾಜಿ ಮಹಾರಾಜರ ಕೊಡುಗೆ ಬಹಳಷ್ಟಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಹೇಳಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿವಾಜಿಯವರ ಜನನ ಈ ದೇಶದಲ್ಲಿ ಆಗಿರದಿದ್ದರೆ ಭಾರತ ದೇಶದ ರೂಪರೇಷೆ ಬೇರೆಯೇ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸ್ವಾಭಿಮಾನದ ಶ್ರೀಮಂತಿಕೆಯಿರುವ ಶಿವಾಜಿ ಪರಂಪರೆಯ ಜನರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮೇಲೆ ಬರಬೇಕು. ರಾಜಕೀಯವಾಗಿ ಬೆಳೆಯಬೇಕು ಹಾಗೂ ಉನ್ನತ ಹುದ್ದೆಗಳನ್ನು ಏರಬೇಕು. ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರದಿಂದ ಕೊಡಿಸುವಲ್ಲಿ ನಾನು ಶ್ರಮಿಸುತ್ತೇನೆ. ಈ ಸಮಾಜವನ್ನು 3ಆ ಯಿಂದ 2ಅ ಗೆ ತರುವ ನಿಮ್ಮ ಬೇಡಿಕೆಯನ್ನು ಸ್ವೀಕರಿಸುತ್ತಾ ಇದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಶಿವಾಜಿ ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ:ಮೇಯರ್ ಶಿವಕುಮಾರ್ ಮಾತನಾಡಿ, 500 ವರ್ಷಗಳ ನಂತರ ಶಿವಾಜಿ ಬಂದ ಮೇಲೆ ದೆಹಲಿಯಲ್ಲಿ ಹಿಂದೂ ಧ್ವಜದ ಹಾರಾಟ ಸಾಧ್ಯವಾಗಿತ್ತು. ನಾವು ಹಿಂದುಗಳಾಗಿ ಉಳಿದಿರುವುದು ಮತ್ತು ಹಿಂದುತ್ವದ ಧ್ವಜದ ಹಾರಾಟ ಸಾಧ್ಯವಾಗಿರುವುದು ಶಿವಾಜಿ ಮಹಾರಾಜರಿಂದ ಎಂದರು.
ಜಗತ್ತಿನ ಶ್ರೇಷ್ಠ ವೀರರಲ್ಲಿ ಶಿವಾಜಿಯೂ ಒಬ್ಬರು. ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ ಕಾಶಿಗೆ ಕಳೆ ಇರುತ್ತಿರಲ್ಲಿಲ್ಲ ಎಂದು ದೆಹಲಿಯ ಪರಮಾನಂದ ಎಂಬ ಕವಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಶಿವಾಜಿ ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಹಿಂದೂ ಧರ್ಮ ಉಳಿಸಲು ಹೋರಾಡಿದವರು. ಮೈಸೂರಿನಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಸ್ಥಾಪಿಸುವ ನಿಮ್ಮ ಮನವಿಯನ್ನು ಸ್ವೀಕರಿಸುತ್ತಾ ಮಹಾನಗರ ಪಾಲಿಕೆಯಿಂದ ಸಾಧ್ಯವಾಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.