ಮೈಸೂರು: "ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಉನ್ನತ ಹುದ್ದೆ ನೀಡಿ, ಈ ಕ್ಷೇತ್ರಕ್ಕೆ ಈ ಸಲ ಬೇರೆ ವಿಪ್ರರಿಗೆ ಟಿಕೆಟ್ ನೀಡಬೇಕು" ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶ್ ಹಾಗೂ ಇತರ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಂದು ಅವರು ಮಾತನಾಡಿದರು.
ಡಿ.ಟಿ.ಪ್ರಕಾಶ್ ಮಾತನಾಡಿ, "ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 75 ಸಾವಿರ ಬ್ರಾಹ್ಮಣ ಮತದಾರರು ಇರುವ ಕ್ಷೇತ್ರವೆಂದರೆ ಅದು ಮೈಸೂರು ನಗರದ ಕೃಷ್ಣರಾಜ ಅಂದರೆ ಕೆ.ಆರ್.ಕ್ಷೇತ್ರ. ಹಲವು ಬಾರಿ ಇಲ್ಲಿನ ಮತದಾರರು ವಿಪ್ರ ನಾಯಕರನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ ಹಾಲಿ ಶಾಸಕರನ್ನು ಸಹ ನಾವು ಗೆಲ್ಲಿಸಿದ್ದೆವು. ಇವರು ನಮ್ಮ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ".
"ವಿಪ್ರರ ಕಷ್ಟಗಳನ್ನು ಕೇಳುತ್ತಿಲ್ಲ. ಉದಾಹರಣೆಗೆ ಇಡಬ್ಲೂಎಸ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಹಾಲಿ ಶಾಸಕರಿಗೆ ಉನ್ನತ ಹುದ್ದೆ ನೀಡಿ ಅವರ ಅನುಭವವನ್ನು ಉಪಯೋಗಿಸಿಕೊಳ್ಳಿ. ಕ್ಷೇತ್ರಕ್ಕೆ ಬೇರೆ ವಿಪ್ರರಿಗೆ ಟಿಕೆಟ್ ನೀಡಿ. ನಾವು ಇಂಥವರಿಗೇ ಟಿಕೆಟ್ ನೀಡಿ ಎಂದು ಹೇಳುವುದಿಲ್ಲ. ಬಹಳಷ್ಟು ಜನ ವಿಪ್ರ ನಾಯಕರಿದ್ದಾರೆ. ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಿ" ಎಂದರು.