ಮೈಸೂರು: ಇಂದು ಮಹಿಷಾಸುರ ಇಲ್ಲ, ಆದರೆ ನಮ್ಮಲ್ಲಿರುವ ದುಷ್ಟ ವಿಚಾರಗಳನ್ನು ಬದಿಗೊತ್ತಿ, ಶಿಷ್ಟ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ದಿನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಸರಾ ಉದ್ಘಾಟನಾ ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು, ಈ ಬಾರಿ ದಸರಾ ಹಲವು ವಿಶೇತೆಗಳಿಂದ ಕೂಡಿದೆ. ಎರಡು ವರ್ಷಗಳ ಬಳಿಕ ಅದ್ಧೂರಿ ದಸರಾ ಆಚರಣೆ ಮಾಡಲಾಗುತ್ತದೆ. ಇದು ನಾಡಹಬ್ಬವಾಗಿದ್ದು, ನಾಡಿನ ರೈತರು, ಜನರು ಮನೆ ಮನೆಯಲ್ಲಿ ದಸರಾ ಆಚರಣೆ ಮಾಡುತ್ತಿದ್ದಾರೆ. ನಾಡನ್ನು ಸುಭಿಕ್ಷೆಯಿಂದ ಇಡಲು ನಾಡದೇವತೆ ಚಾಮುಂಡೇಶ್ವರಿಯನ್ನು ಬೇಡುತ್ತೇನೆ ಎಂದರು.
ಬೆಟ್ಟದ ತಾಯಿಯ ಶಕ್ತಿ ಪೀಠ, ನಾಡಿಗೆ ಶಕ್ತಿ ನೀಡುವ ಸಂಚಲನವನ್ನು ನೀಡುತ್ತಿದೆ. ಪ್ರಜಾಪ್ರಭುತ್ವ ಬಂದ ನಂತರವೂ ಇದೇ ಆಚರಣೆ ಮುಂದುವರಿದಿರುವುದು ಸಂತಸದ ವಿಚಾರವಾಗಿದೆ. ನೈಸರ್ಗಿಕ ಸವಾಲುಗಳ ನಡುವೆ ಎಲ್ಲವನ್ನು ಎದುರಿಸಿ, ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ರಾಷ್ಟ್ರಪತಿಗಳು ಬಂದಿರುವುದು ಸಂತಸ ಮತ್ತು ಅಪರೂಪದ ಸಂಗತಿಯಾಗಿದೆ ಎಂದು ಬಣ್ಣಿಸಿದರು.