ಕರ್ನಾಟಕ

karnataka

ETV Bharat / state

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ.. ನಾದಬ್ರಹ್ಮ ಹಂಸಲೇಖರಿಂದ ಉದ್ಘಾಟನೆ

ನಾಡಹಬ್ಬ ಮೈಸೂರು ದಸರಾಗೆ ಇಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ.

By ETV Bharat Karnataka Team

Published : Oct 15, 2023, 7:31 AM IST

Updated : Oct 15, 2023, 7:42 AM IST

ಮೈಸೂರು ದಸರಾ Mysuru dasara
ಮೈಸೂರು ದಸರಾ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸಂಭ್ರಮದ ನಾಡಹಬ್ಬಕ್ಕೆ ಮೈಸೂರು ದೀಪಾಲಂಕರಿಂದ ಕಂಗೊಳಿಸುತ್ತಿದ್ದು, ಇಂದು ಬೆಳಗ್ಗೆ 10.15ರಿಂದ 10.30ರೊಳಗೆ ಶುಭ ವೃಶ್ಚಿತ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಈಗಾಗಲೇ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಪೂಜೆಗೆ ಸಿದ್ಧಗೊಳಿಸಲಾಗಿದೆ.

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರು ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಂತರ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ.

ಇತರ ದಸರಾ ಕಾರ್ಯಕ್ರಮಗಳಾದ ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ದಸರಾ ಕುಸ್ತಿ ಪಂದ್ಯಾವಳಿ, ದಸರಾ ವಸ್ತು ಪ್ರದರ್ಶನ, ಯೋಗ ದಸರಾ, ರಾಜ್ಯ ಮಟ್ಟದ ಶಿಲ್ಪ ಕಲಾ ಪ್ರದರ್ಶನ, ದೀಪಾಲಂಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಸಹ ಉದ್ಘಾಟನೆ ಆಗಲಿವೆ. ಸಂಜೆ ಅರಮನೆಯ ಮುಂಭಾಗದ ವೇದಿಕೆ ಕಾರ್ಯಕ್ರಮದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.

ಚಾಮುಂಡಿ ಬೆಟ್ಟದ ದೇವಾಲಯದ ಪಕ್ಕ ನಿರ್ಮಾಣವಾಗಿರುವ ವೇದಿಕೆಯಲ್ಲಿ ಹಂಸಲೇಖ ಅವರು ಸಾಂಪ್ರದಾಯಿಕ ದಸರಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಲಿದ್ದಾರೆ.

ಅರಮನೆಯಲ್ಲಿ ಇಂದಿನಿಂದ ಶರನ್ನವರಾತ್ರಿ ಪೂಜಾ ಕೈಂಕರ್ಯಗಳು: ಇಂದು ಅರಮನೆಯಲ್ಲಿ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಮೊದಲ ದಿನ ರತ್ನ ಖಚಿತ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದ ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇಂದು ಬೆಳಗ್ಗೆ ಸಿಂಹಾಸನಕ್ಕೆ ಸಿಂಹ ಜೋಡಣೆ, ಅರಮನೆಯ ಒಳಗೆ ಗಣಪತಿ ಹೋಮ, ಚಾಮುಂಡಿ ಹೋಮ ಸೇರಿದಂತೆ ಹಲವು ಪೂಜೆ ನಡೆಯಲಿವೆ. ಬಳಿಕ 10.45ಕ್ಕೆ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, 11.30ರಿಂದ 11.50ಕ್ಕೆ ಖಾಸಗಿ ದರ್ಬಾರ್​​ನಲ್ಲಿ ರತ್ನಖಚಿತ ಸಿಂಹಾಸನವೇರಿ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಇದನ್ನೂ ಓದಿ: ''ದಸರಾ ಎಂಬುದು ಜೀವಂತ ಮಹಾಕಾವ್ಯ'': ನಾಡಹಬ್ಬದ ಉದ್ಘಾಟನೆ ಬಗ್ಗೆ ನಾದಬ್ರಹ್ಮ ಹಂಸಲೇಖ ಹೆಮ್ಮೆ

ಅ. 23ರಂದು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಲಿದೆ. ಕಲ್ಯಾಣ ಮಂಟಪದಲ್ಲಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ.

ಹಬ್ಬದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ಅ.24ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2.08 ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದ್ದು, ಸಂಜೆ 4.40 ರಿಂದ 5 ರವರೆಗೆ ಅರಮನೆ ಆವರಣದಲ್ಲಿ ಮೆರವಣಿಗೆ ನಡೆಯಲಿದೆ.

ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ವೇದಿಕೆ ಹಾಗೂ ದೇವಾಲಯದ ಸುತ್ತಮುತ್ತ ವಿಶೇಷವಾದ ಪೊಲೀಸ್​ ಬಂದೋಬಸ್ತ್ ಕೈಗೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದ ಸುತ್ತ ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಿದೆ.

ದಸರಾ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ಕೂಡ ವೀಕ್ಷಿಸಬಹುದು. ಈ ಲಿಂಕ್​ಗಳನ್ನು ಬಳಸಿ ನೇರವಾಗಿ ದಸರಾ ಕಣ್ತುಂಬಿಕೊಳ್ಳಿ:

https://facebook.mysoredasara.gov.in

https://youtube.mysoredasara.gov.in

https://mysoredasara.gov.in/

Last Updated : Oct 15, 2023, 7:42 AM IST

ABOUT THE AUTHOR

...view details