ಮೈಸೂರು:ಮದ್ಯ ವ್ಯಸನಿಯಾಗಿದ್ದ ಮಗನನ್ನು ಆ ಚಟದಿಂದ ಬಿಡಿಸಲು ಸಂಸ್ಥೆಯೊಂದಕ್ಕೆ ಸೇರಿಸಿದಾಗ ಅಲ್ಲೇ ಆತ ಮೃತಪಟ್ಟಿದ್ದು, ಈ ಬಗ್ಗೆ ಮೃತನ ತಂದೆ ಪೊಲೀಸ್ ಠಾಣೆಯಲ್ಲಿ ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಮದ್ಯ ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಿದ ಮಗ ಸಾವು: ಸಂಸ್ಥೆ ವಿರುದ್ಧ ತಂದೆ ದೂರು - Ilavala
ಮದ್ಯ ವ್ಯಸನಿಯಾಗಿದ್ದ ಮಗನನ್ನು ಆತನ ತಂದೆ ಇಲವಾಲ ಬಳಿ ಇರುವ ಮದ್ಯ ಬಿಡಿಸುವ ಎನ್.ಪಿ.ಸಿ ಸಂಸ್ಥೆಗೆ ಸೇರಿಸಿದಾಗ ಅಲ್ಲೇ ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಈ ಬಗ್ಗೆ ಆತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![ಮದ್ಯ ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಿದ ಮಗ ಸಾವು: ಸಂಸ್ಥೆ ವಿರುದ್ಧ ತಂದೆ ದೂರು Nagaraj](https://etvbharatimages.akamaized.net/etvbharat/prod-images/768-512-10572092-thumbnail-3x2-chaiii.jpg)
ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ ನಾಗರಾಜು (33) ನಂಜನಗೂಡಿನ ನಿವಾಸಿಯಾಗಿದ್ದ. ಈ ಯುವಕ ಸಣ್ಣ ವಯಸ್ಸಿಗೆ ಮದ್ಯ ವ್ಯಸನಿಯಾಗಿದ್ದ. ಈತನನ್ನು ವ್ಯಸನದಿಂದ ಬಿಡಿಸುವಂತೆ ಇಲವಾಲದ ಬಳಿ ಇರುವ ಮದ್ಯ ಬಿಡಿಸುವ ಎನ್.ಪಿ.ಸಿ ಸಂಸ್ಥೆಗೆ ಸೇರಿಸಿದ್ದರು. ಆದರೆ ಆ ಸಂಸ್ಥೆಯಲ್ಲಿ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು, ಈತನ ಮೃತ ದೇಹವನ್ನು ಎನ್.ಪಿ.ಸಿ. ಸಂಸ್ಥೆಯ ಸದಸ್ಯರು ವ್ಯಾನಿನಲ್ಲಿ ತೆಗೆದುಕೊಂಡು ಬಂದು ಮನೆ ಮುಂದೆ ಬಿಸಾಡಿ ಹೋಗಿದ್ದು, ಯುವಕನ ದೇಹದಲ್ಲಿ ರಕ್ತದ ಕಲೆಗಳು ಆಗಿವೆ.
ಈ ಬಗ್ಗೆ ಮೃತ ಯುವಕನ ತಂದೆ ಶಂಕರ್ ನನ್ನ ಮಗನ ಸಾವಿನ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ನೀಡಿಲ್ಲ. ನನ್ನ ಮಗನನ್ನು ಹೊಡೆದು ಕೊಂದಿದ್ದಾರೆ ಎಂದು ಎನ್.ಪಿ.ಸಿ. ಸಂಸ್ಥೆಯ ಮಾಲೀಕ ಪ್ರಜ್ವಲ್ ಗೌಡ ಸೇರಿ ಇತರ ಮೂರು ಜನರ ಮೇಲೆ ನಂಜನಗೂಡು ಠಾಣೆಯಲ್ಲಿ ತಂದೆ ದೂರು ದಾಖಲಿಸಿದ್ದಾರೆ.