ಮೈಸೂರು: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೂರು ಕಟ್ಟಿಸಿಕೊಡುವುದಾಗಿ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಶಾಶ್ವತ ಸೂರಿಗಾಗಿ ಕಾಯುತ್ತಿರುವ ನಂಜನಗೂಡಿನ ವಿಶೇಷಚೇತನ ಹೆಣ್ಣು ಮಕ್ಕಳ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.
ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ಶಿವಮ್ಮ ಎಂಬವರು ಸ್ವಂತ ಮನೆಯಿಲ್ಲದೇ ಇಬ್ಬರು ವಿಶೇಷ ಚೇತನ ಹೆಣ್ಣು ಮಕ್ಕಳೊಂದಿಗೆ ಬೇರೆಯವರ ಜಗಲಿ ಮೇಲೆ ಸಂಕಷ್ಟದ ಜೀವನ ಮಾಡುತ್ತಿದ್ದಾರೆ. ಈ ಬಗ್ಗೆ ಕಳೆದ ಫೆ. 26 ರಂದು ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆಎಂಬ ಶೀರ್ಷಿಕೆಯಲ್ಲಿ ಈಟಿವಿ ಭಾರತದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಶಿವಮ್ಮರ ಮನೆಗೆ ಭೇಟಿ ನೀಡಿ ಮನೆ ಕಟ್ಟಿಸಿಕೊಡುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು.