ಮೈಸೂರು:ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ಪ್ರವಾಸಿ ಧಾರ್ಮಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ದೇವಾಲಯ ಬಂದ್ ಆಗಿರುವುದರಿಂದ, ದೇವಾಲಯಕ್ಕೆ ಮೂರು ತಿಂಗಳಲ್ಲಿ 8.36 ಕೋಟಿ ರೂ. ನಷ್ಟ ಆಗಿದೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯವೂ ಒಂದು. ಚಾಮುಂಡೇಶ್ವರಿ ದೇವಾಲಯಕ್ಕೆ ಕೋಟ್ಯಾಂತರ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ವಿಶೇಷವಾಗಿ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟ ಜನಸಾಗರದಿಂದ ತುಂಬಿ ಹೋಗಿರುತ್ತದೆ. ಆದರೆ ಈ ವರ್ಷ ಕೊರೊನಾದಿಂದ ದೇವಸ್ಥಾನ ಭಕ್ತರಿಲ್ಲದೆ ಖಾಲಿ ಖಾಲಿ ಕಾಣುತ್ತಿದೆ. ಹೀಗಾಗಿ ಪ್ರಸಕ್ತ ವರ್ಷ ಚಾಮುಂಡೇಶ್ವರಿ ದೇವಾಲಯಕ್ಕೆ ಸುಮಾರು 8.36 ಕೋಟಿ ರೂ. ನಷ್ಟವಾಗಿದೆ.
ಮೂರೇ ತಿಂಗಳಲ್ಲಿ 8.36 ಕೋಟಿ ನಷ್ಟ..
ಮಾರ್ಚ್ 24 ರಂದು ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಯಿತು, ಈ ಹಿನ್ನೆಲೆಯಲ್ಲಿ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡಲಾಯಿತು. ಫೆಬ್ರವರಿ ತಿಂಗಳಿನಲ್ಲೇ ಮೈಸೂರಿಗೆ ಪ್ರವಾಸಿಗರ ಆಗಮನ ಕ್ಷೀಣಿಸಿತು. ಕಳೆದ ವರ್ಷದ ಏಪ್ರಿಲ್ನಲ್ಲಿ ದೇವಾಲಯಕ್ಕೆ 1,44,78,219 ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಕೇವಲ 1,75,841 ರೂ. ಮಾತ್ರ ಸಂಗ್ರಹವಾಗಿದ್ದು, ಸುಮಾರು 1,42,02,375 ರೂ. ನಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ದೇವಾಲಯಕ್ಕೆ 4,29,61,172 ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜೂನ್ ತಿಂಗಳಲ್ಲಿ ಕೇವಲ 9,15,465 ರೂ. ಸಂಗ್ರಹವಾಗಿದೆ. ಸುಮಾರು 4,20,45,708 ರೂ. ಆದಾಯ ಕಡಿಮೆಯಾಗಿದೆ. ಮೂರು ತಿಂಗಳಲ್ಲಿ ಸುಮಾರು 8,36,15,574 ರೂ. ಆದಾಯ ಚಾಮುಂಡೇಶ್ವರಿ ದೇವಾಲಯಕ್ಕೆ ಕಡಿಮೆಯಾಗಿದೆ. ಈ 3 ತಿಂಗಳು ಸಂಗ್ರಹವಾಗಿರುವ ಆದಾಯದಲ್ಲಿ ಭಕ್ತರು ಆನ್ಲೈನ್ ಹಾಗೂ ಎಂಒ ಮೂಲಕ ಕಾಣಿಕೆ ನೀಡಿದ್ದ ಮತ್ತು ಎಫ್.ಡಿ. ಮೇಲಿನ ಬಡ್ಡಿಯಿಂದ ಸಂಗ್ರಹವಾದ ಆದಾಯವೂ ಸೇರಿದೆ.