ಕರ್ನಾಟಕ

karnataka

ETV Bharat / state

ಮಂಡ್ಯ ಅಖಾಡ.. ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್​​, ಅರೆ ಸೇನಾ ಪಡೆ ಸರ್ಪಗಾವಲು! - mandya_election

ಮಂಡ್ಯ ಫಲಿತಾಂಶಕ್ಕೆ ಚುನಾವಣಾ ಆಯೋಗ ಸಿದ್ಧತೆ. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯಬೇಕಾದರೆ ಮೂರು ಸುತ್ತಿನ ಭದ್ರತೆಯಲ್ಲಿ ತಪಾಸಣೆ. ರಾಜ್ಯ ಪೊಲೀಸರ ಜೊತೆಗೆ ಕೇಂದ್ರ ಅರೆ ಸೇನಾ ಭದ್ರತಾ ಪಡೆ ಸಾಥ್‌.

ಮಂಡ್ಯ ಫಲಿತಾಂಶಕ್ಕೆ ಚುನಾವಣಾ ಆಯೋಗ ಸಿದ್ಧತೆ

By

Published : May 20, 2019, 10:52 PM IST

ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಅಖಾಡದ ಫಲಿತಾಂಶಕ್ಕೆ ಚುನಾವಣಾ ಆಯೋಗ ಸಿದ್ಧತೆಯಲ್ಲಿ ತೊಡಗಿದೆ‌. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯಬೇಕಾದರೆ ಮೂರು ಸುತ್ತಿನ ಭದ್ರತೆಯನ್ನು ದಾಟಿ ಹೋಗಬೇಕಾಗಿದೆ. ರಾಜ್ಯ ಪೊಲೀಸರ ಜೊತೆಗೆ ಕೇಂದ್ರ ಅರೆ ಸೇನಾ ಪಡೆ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಅಧಿಕಾರಿಗಳು, ಎಣಿಕೆ ಅಧಿಕಾರಿಗಳು, ಅಭ್ಯರ್ಥಿಗಳ ಏಜೆಂಟ್ ಮತ ಎಣಿಕೆ ಕೇಂದ್ರಕ್ಕೆ ಹೋಗಬೇಕಾದರೆ ಮೂರು ಬಾರಿ ತಪಾಸಣೆ ಎದುರಿಸಬೇಕಾಗಿದೆ. ಸರ್ಕಾರಿ ಮಹಾ ವಿದ್ಯಾಲಯದ ಮೊದಲ ಗೇಟ್‌ನಲ್ಲೇ ಸಿಆರ್‌‌ಪಿಎಫ್ ಸಿಬ್ಬಂದಿ ಹಾಗೂ ಎಸಿ ನೇತೃತ್ವದಲ್ಲಿ ತಪಾಸಣೆ ಮಾಡಿ ಒಳಬಿಡಲಾಗುತ್ತದೆ‌.

ಮಂಡ್ಯ ಫಲಿತಾಂಶಕ್ಕೆ ಚುನಾವಣಾ ಆಯೋಗ ಸಿದ್ಧತೆ

ಎರಡನೇ ಹಂತದ ತಪಾಸಣೆಯನ್ನು ಕೇಂದ್ರ ಅರೆ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರು ನಡೆಸಿ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಏಜೆಂಟರ್‌ಗಳನ್ನು ವರ್ಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ನಂತರ ಮೂರನೇ ತಪಾಸಣೆಯನ್ನು ಬಿಎಸ್‌ಎಫ್ ಯೋಧರು ಮಾಡಲಿದ್ದು, ಇಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಕೊಠಡಿಯೊಳಗೆ ಹೋಗದಂತೆ ಸೂಕ್ಷ್ಮ ತಪಾಸಣೆ ಮಾಡಿ ಕೊಠಡಿಗೆ ಬಿಡಲು ಚುನಾವಣಾ ಆಯೋಗ ತೀರ್ಮಾನ ಮಾಡಿದೆ. ಮೂರು ಹಂತಗಳ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣವಾಗಿ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಮಾಧ್ಯಮ ಕೇಂದ್ರಕ್ಕೆ ಮಾತ್ರ ಮೊಬೈಲ್ ಬಳಕೆ ಅವಕಾಶ ನೀಡಲಾಗಿದ್ದು, ಎಣಿಕೆ ಕೊಠಡಿಗೆ ಹೋಗಬೇಕಾದರೆ ಸಂಬಂಧಪಟ್ಟ ಅಧಿಕಾರಿ ಬಳಿ ಮೊಬೈಲ್ ಇರಿಸಿ ಹೋಗಬೇಕಾಗಿದೆ.

ಪ್ರತಿ ಕೊಠಡಿಯಲ್ಲೂ ಎರಡು ಸಿಸಿ ಕ್ಯಾಮರಾ ಅಳವಡಿಕೆ ಜೊತೆಗೆ ಓರ್ವ ಕ್ಯಾಮರಾಮನ್ ನೇಮಕ ಮಾಡಲಾಗಿದೆ. ಕೊಠಡಿಯೊಳಗಿನ ಎಲ್ಲಾ ಚಲನವಲನಗಳು ಕ್ಯಾಮರಾಗಳಲ್ಲಿ ದಾಖಲಾಗಲಿವೆ.

ಎಣಿಕೆಗೆ ವೀಕ್ಷಕರ ನೇಮಕ :

ಮೊದಲ ಬಾರಿಗೆ ಎಣಿಕೆ ವೀಕ್ಷಕರನ್ನಾಗಿ 4 ಮಂದಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮೇಲುಕೋಟೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಪಿ. ಅಣ್ಣಾ ಮಲೈ, ಮದ್ದೂರು ಹಾಗೂ ಮಳವಳ್ಳಿ ಕ್ಷೇತ್ರಕ್ಕೆ ಪದ್ಮಾ, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಉಮೇಶ್ ನಾರಾಯಣ್ ಪಾಂಡೆ ಹಾಗೂ ಕೆಆರ್‌ಪೇಟೆ ಹಾಗೂ ಕೆಆರ್‌ನಗರಕ್ಕೆ ರವ್‌ನೀತ್ ಚೀಮಾ ಅವರನ್ನು ನೇಮಕ ಮಾಡಲಾಗಿದೆ.

ಮಳವಳ್ಳಿಯ ಒಂದು ಮತಗಟ್ಟೆಯಲ್ಲಿ ವಿವಿ ಪ್ಯಾಡ್ ಮತ ಪತ್ರ ಎಣಿಕೆ :

ಮತದಾನದ ವೇಳೆ ಪರೀಕ್ಷಾ ಮತದಾನ ಮಾಡಲಾಗಿದ್ದ ಅಧಿಕಾರಿಗಳು 70 ಮತಗಳನ್ನು ಡಿಲೀಟ್ ಮಾಡದೇ ಮತದಾನ ಪ್ರಕ್ರಿಯೆ ಮುಂದುವರಿಸಿದ್ದರು. ಆದರೆ, ವಿವಿ ಪ್ಯಾಡ್ ಕ್ಲಿಯರ್ ಮಾಡಿದ್ದರಿಂದ ಮತಗಟ್ಟೆ ಸಂಖ್ಯೆ 60ರ ಮತ ಯಂತ್ರದ ಬದಲು ವಿವಿ ಪ್ಯಾಡ್‌ನ ಮತಗಳ ಎಣಿಕೆಗೆ ಚುನಾವಣಾ ಆಯೋಗ ನಿರ್ಧಾರ ಮಾಡಿದೆ.

ಎಣಿಕೆಗೆ ಅಧಿಕಾರಿಗಳ ಯೋಜನೆ :
ಮತ ಎಣಿಕೆಗಾಗಿ 117 ಮಂದಿ ಎಣಿಕೆ ಮೇಲ್ವಿಚಾರಕರು, 116 ಎಣಿಕೆ ಸಹಾಯಕರು ಹಾಗೂ 134 ಮಂದಿ ಮೈಕ್ರೋ ಅಬ್ಸರ್ವರ್ಸ್‌ ನೇಮಕ ಮಾಡಲಾಗಿದೆ. 16 ಕೊಠಡಿಗಳಲ್ಲಿ ಮತ ಯಂತ್ರಗಳು ಭದ್ರವಾಗಿದ್ದು, 14 ಕೊಠಡಿಗಳ 108 ಟೇಬಲ್‌ಗಳಲ್ಲಿ ಎಣಿಕೆ ನಡೆಯಲಿದೆ.

For All Latest Updates

ABOUT THE AUTHOR

...view details